ಬಿಜೆಪಿ ಎಂದರೆ ಎಟಿಎಂಗಳ ನ್ಯಾಷನಲ್ ಟೀಮ್: ಅಮಿತ್ ಶಾ ವಿರುದ್ಧ ಜೆಡಿಎಸ್ ವಾಗ್ದಾಳಿ

Prasthutha|

ಬೆಂಗಳೂರು: ಮಂಡ್ಯದಲ್ಲಿ ನಡೆದ ಬಿಜೆಪಿಯ ಜನಸಂಕಲ್ಪ ಯಾತ್ರೆಯಲ್ಲಿ ಭಾಗವಹಿಸಿದ್ದ ಅಮಿತ್ ಶಾ ಅವರು ತಮ್ಮ ಭಾಷಣದಲ್ಲಿ ಹೇಳಿದ್ದ ‘ಎಟಿಎಂ’ ಟೀಕೆಯ ವಿರುದ್ಧ ವಾಗ್ದಾಳಿ ನಡೆಸಿರುವ ಜಾತ್ಯತೀತ ಜನತಾದಳ ಪಕ್ಷ,  ಇಡೀ ಭಾರತವೇ ಭಾರತೀಯ ಜನತಾ ಪಕ್ಷದ ಎಟಿಎಂ ಆಗಿದೆ ಎಂದು ಕಿಡಿಕಾರಿದೆ.

- Advertisement -

ಈ ಕುರಿತು ಟ್ವೀಟ್ ಮಾಡಿರುವ ಅವರು, ಕೇಂದ್ರದ ಗೌರವಾನ್ವಿತ ಗೃಹ ಮಂತ್ರಿ ಅಮಿತ್ ಶಾ ಅವರು ಮಂಡ್ಯ ಜನರಿಗೆ ಮಂಕುಬೂದಿ ಎರಚಲು ವಿಫಲ ಪ್ರಯತ್ನ ನಡೆಸಿದ್ದಾರೆ. ಅವರ ಪಕ್ಷದ ಕೆಲ ನಾಯಕರು ಹೊಡೆಯುತ್ತಿರುವ ಅಪಪ್ರಚಾರದ ಜಾಗಟೆಗೆ ಡ್ರಮ್ಮು ಬಾರಿಸುವ ಕೆಲಸ ಮಾಡಿದ್ದಾರೆ. ಮಂಡ್ಯದವರನ್ನು ಮೋಸ ಮಾಡಲು ಆಗುವುದಿಲ್ಲ ಅಮಿತ್ ಶಾ ಜೀ ಎಂದು ಕುಟುಕಿದೆ.

ರಾಜ್ಯ ಬಿಜೆಪಿ ನಾಯಕರು, ಕೇಂದ್ರ ಗೃಹ ಸಚಿವರಾದ ಅಮಿತ್ ಶಾ ಮಂಡ್ಯದಲ್ಲಿ ಎಟಿಎಂ ಬಗ್ಗೆ ಮಾತನಾಡಿದ್ದಾರೆ. ಭೂತದ ಬಾಯಲ್ಲಿ ಭಗವದ್ಗೀತೆ ಎಂದರೆ ಹೀಗೆಯೇ. ಸುಳ್ಳು ಹೇಳುವುದಕ್ಕೆ ಸಂಕೋಚ ಬೇಡವೇ? ಕರ್ನಾಟಕ ಮಾತ್ರವಲ್ಲ, ಇಡೀ ಭಾರತವೇ ಭಾರತೀಯ ಜನತಾ ಪಕ್ಷದ ಎಟಿಎಂ ಆಗಿದೆ. ಇದು ಸುಳ್ಳಾ?. ಯಾರಿಗೆ ಯಾವುದು ಎಟಿಎಂ? ಎನ್ನುವುದು ಕರ್ನಾಟಕಕ್ಕೆ ಗೊತ್ತು. 40% ಕಮೀಷನ್ ಯಾರ ಎಟಿಎಂಗೆ ಹೋಯಿತು? ಪಿಎಸ್’ಐ ಹಗರಣ ಯಾರ ಎಟಿಎಂ? ಕೋವಿಡ್ ಸಾವುಗಳ ಮೇಲೆ ದೋಚಿದ ಹಣ ಯಾವ ಹುಂಡಿಗೆ ಹೋಯಿತು? ಅಪರೇಷನ್ ಕಮಲಕ್ಕೆ ಯಾವ ಎಟಿಎಂನಿಂದ ಬಂತು? ಎಂದು ಪ್ರಶ್ನಿಸಿದೆ.

- Advertisement -

ಇವತ್ತು ದೇವರಾಯನ ದುರ್ಗದ ಐಬಿಯಲ್ಲಿ ಗುತ್ತಿಗೆದಾರನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಸಾವಿಗೂ 40% ಕಾರಣ ಎಂಬ ಆರೋಪ ಕೇಳಿ ಬರುತ್ತಿದೆ. ಅಮಿತ್ ಶಾ ಸಾಹೇಬರು ಇದಕ್ಕೆ ಉತ್ತರ ಕೊಡುತ್ತಾರೆಯೇ? ಹೆಚ್.ಡಿ.ಕುಮಾರಸ್ವಾಮಿ ಅವರ ಸರಕಾರವನ್ನು ಕೆಡವಿ ಅಧಿಕಾರಕ್ಕೆ ಬಂದ ಬಿಜೆಪಿ ಸರಕಾರ ಮಾಡಿದ್ದು ಎಂದರೆ ಕಮೀಷನ್ ವಿಕಾಸ! ಶಾಸಕರ ಖರೀದಿ ವಿಕಾಸ!!. ಬಿಜೆಪಿ ಎಂದರೆ ಎಟಿಎಂಗಳ ನ್ಯಾಷನಲ್ ಟೀಮ್. ಸತ್ಯ ಹೀಗಿದ್ದರೂ ಮಂಡ್ಯದಲ್ಲಿ ಬಂದು ಎಟಿಎಂ ಎಂದು ಟಮ್ ಟಮ್ ಹೊಡೆದರೆ ಯಾರು ನಂಬುತ್ತಾರೆ ಬಿಜೆಪಿ ನಾಯಕರೇ? ಎಂದು ಗೇಲಿ ಮಾಡಿದೆ.

ರಾಮ ಮಂದಿರ ಕಟ್ಟಿದ್ದಿರಿ ಎನ್ನುತ್ತೀರಿ. ಇದು ಬಿಜೆಪಿಯೊಂದರ ಸಾಧನೆಯೇ? ಇದಕ್ಕೆ ಭಾರತೀಯರೆಲ್ಲರ ಕಾಣಿಕೆ ಇಲ್ಲವೇ? ನೀವೊಬ್ಬರೇ ಕ್ರೆಡಿಟ್ ಹೊಡೆದುಕೊಳ್ಳಬೇಡಿ. ಒಂದೆಡೆ ದೇವಾಲಯಗಳನ್ನು ಉದ್ಧಾರ ಮಾಡುತ್ತೇವೆ ಎನ್ನುತ್ತೀರಿ, ಇನ್ನೊಂದೆಡೆ ಅದೇ ದೇವರನ್ನು ನಾಚಿಕೆ ಇಲ್ಲದೆ ರಾಜಕೀಯಕ್ಕೆ ಬಳಸಿಕೊಳ್ಳುತ್ತೀರಿ!!. ಪಂಚರತ್ನ ರಥಯಾತ್ರೆಯ ಯಶಸ್ಸು ನಿಮ್ಮ ಕಣ್ಣಿಗೂ ಬಿದ್ದಿರಬಹುದು, ಇಲ್ಲವೇ ಯಾರಾದರೂ ಭಟ್ಟಂಗಿಗಳು ನಿಮ್ಮ ಕಿವಿ ಊದಿರಬಹುದು. ಅದಕ್ಕೆ ಮಂಡ್ಯಕ್ಕೆ ಬಂದು ಮಕ್ಮಲ್ ಟೋಪಿ ಹಾಕಲು ವ್ಯರ್ಥ ಪ್ರಯತ್ನ ಮಾಡುತ್ತಿದ್ದೀರಿ. ನೀವು ಮಂಡ್ಯದಲ್ಲಿ ಮುಗ್ಗರಿಸುತ್ತಿರಿ. ಅಮಿತ್ ಶಾ ಅವರೇ ಅತಿಯಾದ ಅಮಿತೋತ್ಸಾಹ ಒಳ್ಳೆಯದಲ್ಲ ಎಂದು ಸಲಹೆ ನೀಡಿದೆ.

Join Whatsapp