ದೇವನೂರ ಮಹಾದೇವ ಸೇರಿ ಏಳು ಲೇಖಕರ ಪಠ್ಯವನ್ನು ಕೈಬಿಟ್ಟ ಬಿಜೆಪಿ ಸರಕಾರ

Prasthutha|

ಬೆಂಗಳೂರು: ದೇವನೂರ ಮಹಾದೇವ ಸಹಿತ ರೋಹಿತ್ ಚಕ್ರತೀರ್ಥ ನೇತೃತ್ವದ ಪಠ್ಯ ಪರಿಷ್ಕರಣೆ ವಿರೋಧಿಸಿ ಸರ್ಕಾರಕ್ಕೆ ಪತ್ರ ಬರೆದಿದ್ದ ಏಳು ಲೇಖಕರ ಪಠ್ಯವನ್ನು ಕರ್ನಾಟಕ ಬಿಜೆಪಿ ಸರಕಾರ ಕೈಬಿಟ್ಟಿದೆ.

- Advertisement -

2022-23ನೇ ಶೈಕ್ಷಣಿಕ ಸಾಲಿನಿಂದ ಕನ್ನಡ ಪ್ರಥಮ, ದ್ವಿತೀಯ ಹಾಗೂ ತೃತೀಯ ಭಾಷಾ ಪುಸ್ತಕಗಳಲ್ಲಿನ ಗದ್ಯ ಮತ್ತು ಪದ್ಯ ಪಾಠಗಳಿಗೆ ಸಂಬಂಧಿಸಿದಂತೆ ಏಳು ಲೇಖಕರ ಪಠ್ಯವನ್ನು ಶಿಕ್ಷಣ ಇಲಾಖೆ ಹಿಂಪಡೆದು, ಶಿಕ್ಷಣ ಇಲಾಖೆ ಶುಕ್ರವಾರ ಸುತ್ತೋಲೆ ಹೊರಡಿಸಿದೆ.

ಲೇಖಕರು ತಮ್ಮ ಅನುಮತಿಯನ್ನು ಹಿಂಪಡೆದಿರುವ ಕಾರಣ ಅವರ ಪಠ್ಯಗಳನ್ನು ಬೋಧನೆ-ಕಲಿಕೆ ಹಾಗೂ ಮೌಲ್ಯಮಾಪನಕ್ಕೆ ಪರಿಗಣಿಸದಂತೆ ಸೂಚಿಸಲಾಗಿದೆ  ಎಂದು ಆದೇಶದಲ್ಲಿ ತಿಳಿಸಿದ್ದು, ಈ ಲೇಖಕರ ಗದ್ಯ,ಪದ್ಯಗಳನ್ನು ಪ್ರಸಕ್ತ ಸಾಲಿನಿಂದ ಬೋಧನೆ-ಕಲಿಕೆ ಹಾಗೂ ಮೌಲ್ಯಮಾಪನಕ್ಕೆ ಪರಿಗಣಿಸದಂತೆ ತಮ್ಮ ವ್ಯಾಪ್ತಿಯ ಎಲ್ಲ ಸರ್ಕಾರಿ, ಅನುದಾನಿತ ಹಾಗೂಅನುದಾನ ರಹಿತ ಶಾಲೆಗಳಿಗೆ ಶಿಕ್ಷಣ ಇಲಾಖೆ ಸೂಚಿಸಿದೆ.

- Advertisement -

10ನೇ ತರಗತಿಯ ಪ್ರಥಮ ಭಾಷೆ ಪುಸ್ತಕದಲ್ಲಿದ್ದ ದೇವನೂರು ಅವರ ‘ಎದೆಗೆ ಬಿದ್ದ ಅಕ್ಷರʼ, ಡಾ. ಜಿ. ರಾಮಕೃಷ್ಣ ಅವರ ‘ಭಗತ್ ಸಿಂಗ್’ ಮತ್ತು ದ್ವಿತೀಯ ಭಾಷಾ ಪುಸ್ತಕಲ್ಲಿ ಸುಕಣ್ಯ ಮಾರುತಿ ಅವರ ‘ಏಣಿ’ ಪದ್ಯ, ಹಾಗೂ ತೃತೀಯ ಭಾಷಾ ಪುಸ್ತಕದಲ್ಲಿ ಈರಪ್ಪ ಕಂಬಳಿ ಅವರ ʼಹೀಗೊಂದು ಟಾಪ್ ಪ್ರಯಾಣʼ, ಸತೀಶ್ ಕುಲಕರ್ಣಿ ಅವರ ʼಕಟ್ಟತೇವ ನಾವುʼ ಪದ್ಯ, 9ನೇ ತರಗತಿಯ ತೃತೀಯ ಭಾಷಾ ಪುಸ್ತಕದಲ್ಲಿನ ಲೇಖಕಿ ರೂಪಾ ಹಾಸನ ಅವರ ‘ಅಮ್ಮನಾಗುವುದೆಂದರೆʼ ಮತ್ತು 6ನೇ ತರಗತಿಯ ಪ್ರಥಮ ಭಾಷಾ ಪುಸ್ತಕದಲ್ಲಿ ದೊಡ್ಡಹುಲ್ಲೂರು ರುಕ್ಕೋಜಿರಾವ್ ಅವರ ‘ಡಾ. ರಾಜ್ಕುಮಾರ್’ ಗದ್ಯ ಮುಂತಾದುವುಗಳನ್ನು ಹಿಂಪಡೆಯಲಾಗಿದೆ ಎಂದು ಶಿಕ್ಷಣ ಇಲಾಖೆ ಸುತ್ತೋಲೆಯಲ್ಲಿ ಸ್ಪಷ್ಟಪಡಿಸಿದೆ.

ರೋಹಿತ್ ಚಕ್ರತೀರ್ಥ ನೇತೃತ್ವದ ಪಠ್ಯ ಪರಿಷ್ಕರಣೆ ಸಮಿತಿ ಶಾಲಾ ಪಠ್ಯದಲ್ಲಿ ಬ್ರಾಹ್ಮಣೀಕರಣ ಭೋಧಿಸುವುದನ್ನು ವಿರೋಧಿಸಿ ಈ ಮೇಲಿನ ಲೇಖಕರು ಸರ್ಕಾರಕ್ಕೆ ಪತ್ರ ಬರೆದಿದ್ದು, ಸರಕಾರ ತನ್ನ ನಿಲುವನ್ನು ತಡವಾಗಿ ತೆಗೆದುಕೊಂಡಿದೆ.

Join Whatsapp