ಸರಣಿ ಹಬ್ಬಗಳ ಹಿನ್ನೆಲೆ: ಉತ್ತರ ಪ್ರದೇಶದಲ್ಲಿ ಅಧಿಕಾರಿಗಳ ರಜೆ ರದ್ದುಪಡಿಸಿದ ಆದಿತ್ಯನಾಥ್

Prasthutha|

ಲಕ್ನೋ: ಸರಣಿ ಹಬ್ಬಗಳ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಆದಿತ್ಯನಾಥ್ ಉತ್ತರ ಪ್ರದೇಶದ ಎಲ್ಲ ಪೊಲೀಸರು ಮತ್ತು ಆಡಳಿತಾಧಿಕಾರಿಗಳ ರಜೆಗಳನ್ನು ರದ್ದುಪಡಿಸಿದ್ದಾರೆ. ಮೇ 4ರ ವರೆಗೂ ಎಲ್ಲ ಸಿಬ್ಬಂದಿಯ ರಜೆಗಳನ್ನು ರದ್ದುಪಡಿಸುವ ಜೊತೆಗೆ ರಜೆಯಲ್ಲಿರುವವರು 24 ಗಂಟೆಗಳೊಳಗೆ ತಮ್ಮ ಕರ್ತವ್ಯಗಳಿಗೆ ಹಿಂದಿರುವಂತೆ  ಆದೇಶಿಸಿದ್ದಾರೆ’ ಎಂದು ಮುಖ್ಯಮಂತ್ರಿಗಳ ಕಚೇರಿಯು ಪ್ರಕಟಣೆಯಲ್ಲಿ ತಿಳಿಸಿದೆ.

- Advertisement -

ಹಲವು ಹಬ್ಬಗಳು ಇರುವ ಕಾರಣ ಮುಖ್ಯಮಂತ್ರಿ ಆದಿತ್ಯನಾಥ್ ಈ ಆದೇಶ ಹೊರಡಿಸಿರುವುದಾಗಿ ವರದಿಯಾಗಿದೆ. ಠಾಣಾಧಿಕಾರಿಯಿಂದ ಹಿಡಿದು ಎಡಿಜಿ ಹಂತದ ಅಧಿಕಾರಿಗಳವರೆಗೂ ಎಲ್ಲರೂ ಮುಂಬರುವ ಹಬ್ಬಗಳ ಸಮಯದಲ್ಲಿ ಶಾಂತಿ ಕಾಪಾಡುವ ಕುರಿತು ಮುಂದಿನ 24 ಗಂಟೆಗಳಲ್ಲಿ ಧಾರ್ಮಿಕ ಮುಖಂಡರು ಹಾಗೂ ಪ್ರಮುಖರೊಂದಿಗೆ ಮಾತುಕತೆ ನಡೆಸುವಂತೆ ಸೂಚಿಸಿದ್ದಾರೆ.

ಈ ಬಾರಿ ಈದ್ ಮತ್ತು ಅಕ್ಷಯ ತೃತೀಯ ಒಂದೇ ದಿನ ಆಚರಿಸಲಾಗುತ್ತಿರುವ ಹಿನ್ನೆಲೆಯಲ್ಲಿ, ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚುವರಿ ಪೊಲೀಸ್ ಸಿಬ್ಬಂದಿ ನಿಯೋಜನೆ, ಗಸ್ತು ತಿರುಗುವುದು ಹಾಗೂ ಪರಿಸ್ಥಿತಿಯ ಮೇಲೆ ನಿಗಾವಹಿಸಲು ಡ್ರೋನ್ ಬಳಕೆಯ ಕುರಿತು ಆದೇಶದಲ್ಲಿ ಸೂಚಿಸಲಾಗಿದೆ.

- Advertisement -

ಧಾರ್ಮಿಕ ಆಚರಣೆಗಳಲ್ಲಿ ಮೈಕ್‌ಗಳನ್ನು ಬಳಸಬಹುದಾಗಿದೆ, ಆದರೆ ಕಾರ್ಯಕ್ರಮದ ಪ್ರಾಂಗಣದಿಂದ ಸದ್ದು ಹೊರಬರದಂತೆ ನಿಗಾ ವಹಿಸಬೇಕು. ಹೊಸದಾಗಿ ಕಾರ್ಯಕ್ರಮದ ಜಾಗಗಳಲ್ಲಿ ಮೈಕ್‌ಗಳ ಅಳವಡಿಕೆಗೆ ಅವಕಾಶ ನೀಡುವುದಿಲ್ಲ’ ಎಂದು ಸ್ಪಷ್ಟಪಡಿಸಲಾಗಿದೆ.

‘ಮುಂಚಿತವಾಗಿ ಅನುಮತಿ ಇಲ್ಲದೆ ಯಾವುದೇ ಧಾರ್ಮಿಕ ಮೆರವಣಿಗೆಗಳನ್ನು ನಡೆಸುವಂತಿಲ್ಲ. ಅನುಮತಿ ನೀಡುವುದಕ್ಕೂ ಮುನ್ನ ಶಾಂತಿ ಮತ್ತು ಸೌಹಾರ್ದತೆ ಕಾಪಾಡುವ ಕುರಿತು ಆಯೋಜಕರಿಂದ ಅಫಿಡವಿಟ್‌ ಪಡೆಯಬೇಕು. ಪಾರಂಪರಿಕವಾಗಿ ನಡೆಸಲಾಗುವ ಧಾರ್ಮಿಕ ಮೆರವಣಿಗೆಗಳಿಗೆ ಮಾತ್ರವೇ ಅನುಮತಿ ನೀಡಲಾಗುತ್ತದೆ. ಹೊಸ ಕಾರ್ಯಕ್ರಮಗಳಿಗೆ ಅನುಮತಿ ನೀಡುವಂತಿಲ್ಲ’ ಎಂದು ಆದಿತ್ಯನಾಥ್‌ ತಿಳಿಸಿದ್ದಾರೆ.

Join Whatsapp