ದೆಹಲಿ ಗಲಭೆ: ಬಂಧಿತ ವಿದ್ಯಾರ್ಥಿ ಹೋರಾಟಗಾರ್ತಿ ಗುಲ್ಫಿಶಾ ಫಾತಿಮಾಗೆ ಜೈಲಿನಲ್ಲಿ ಕಿರುಕುಳ

Prasthutha|

ನವದೆಹಲಿ: ಯುಎಪಿಎ ಕಾಯ್ದೆಯಡಿಯಲ್ಲಿ ಬಂಧನಕ್ಕೊಳಗಾಗಿರುವ ವಿದ್ಯಾರ್ಥಿ ಹೋರಾಟಗಾರ್ತಿ ಗುಲ್ಫಿಶಾ ಫಾತಿಮಾ, ತನಗೆ ಜೈಲಿನ ಅಧಿಕಾರಿಗಳು ಮತೀಯ ಬೈಗುಳಗಳ ಮೂಲಕ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ ಎಂದು ದೆಹಲಿ ನ್ಯಾಯಾಲಯದ ಮುಂದೆ ಆರೋಪಿಸಿದ್ದಾರೆ.

- Advertisement -

ಫೆಬ್ರವರಿಯಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಕೋಮು ಹಿಂಸಾಚಾರಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಎಂಬಿಎ ಪದವೀಧರೆ ಫಾತಿಮಾ ಪ್ರಸ್ತುತ ತಿಹಾರ್ ಜೈಲಿನಲ್ಲಿ ಬಂಧನದಲ್ಲಿದ್ದಾರೆ.

ಈ ಪ್ರಕರಣದಲ್ಲಿ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಹಾಜರಾದಾಗ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಅಮಿತಾಬ್ ರಾವತ್‌ರವರ ಮುಂದೆ ಈ ಕುರಿತು ಮಾಹಿತಿ ಬಹಿರಂಗಪಡಿಸಿದ್ದಾರೆ.

- Advertisement -

ಜೈಲಿನಲ್ಲಿರುವ ಸಿಬ್ಬಂದಿ  ತಾರತಮ್ಯದಿಂದ ವರ್ತಿಸುತ್ತಿದ್ದಾರೆ ಎಂದು ಫಾತಿಮಾ ಆರೋಪಿಸಿದ್ದಾರೆ.

“ನನಗೆ ಜೈಲಿನಲ್ಲಿ ಸಮಸ್ಯೆ ಇದೆ. ನನ್ನನ್ನು ಇಲ್ಲಿಗೆ ಕರೆತಂದಾಗಿನಿಂದ ಜೈಲಿನ ಸಿಬ್ಬಂದಿಯಿಂದ ನಿರಂತರವಾಗಿ ತಾರತಮ್ಯವನ್ನು ಎದುರಿಸುತ್ತಿದ್ದೇನೆ. ಅವರು ನನ್ನನ್ನು ‘ವಿದ್ಯಾವಂತ ಭಯೋತ್ಪಾದಕಿ'(educated terrorist ) ಎಂದು ಕರೆಯುತ್ತಿದ್ದಾರೆ. ಮತ್ತು ಮತೀಯ ಬೈಗುಳಗಳನ್ನು ನನ್ನ ಮೇಲೆ ಬಳಸಲಾಗುತ್ತಿದೆ. ನಾನು ಇಲ್ಲಿ ಮಾನಸಿಕ ಕಿರುಕುಳವನ್ನು ಎದುರಿಸುತ್ತಿದ್ದೇನೆ. ಒಂದು ವೇಳೆ ನನಗೇನಾದರೂ ಸಂಭವಿಸಿದರೆ ಇದಕ್ಕೆ ಜೈಲು ಅಧಿಕಾರಿಗಳೇ ಹೊಣೆ ” ಎಂದು ಅವರು ಆರೋಪಿಸಿದರು.

ಫಾತಿಮಾ ನೇರವಾಗಿ ನ್ಯಾಯಾಲಯಕ್ಕೆ ಈ ವಿಷಯವನ್ನು ಬಹಿರಂಗ ಪಡಿಸಿದ ಬಳಿಕ, ನ್ಯಾಯಾಧೀಶರು ಈ ಬಗ್ಗೆ ಅರ್ಜಿ ಸಲ್ಲಿಸುವಂತೆ ಫಾತಿಮಾರ ವಕೀಲರಿಗೆ ತಿಳಿಸಿದ್ದಾರೆ.

ಗಲಭೆಯಲ್ಲಿನ ಪಿತೂರಿಗೆ ಸಂಬಂಧಿಸಿದ ಪ್ರಕರಣದಲ್ಲಿ ದಾಖಲಾದ ಚಾರ್ಜ್‌ಶೀಟ್‌ನ ಬಗ್ಗೆ ನ್ಯಾಯಾಲಯ ಈ ಹಿಂದೆ ಮಾಹಿತಿ ಪಡೆದಿದ್ದು, ಎಲ್ಲಾ 15 ಆರೋಪಿಗಳನ್ನು ನ್ಯಾಯಾಲಯದ ಮುಂದೆ ಹಾಜರಾಗುವಂತೆ ಸಮನ್ಸ್ ನೀಡಿತ್ತು.

ಅಕ್ಟೋಬರ್ 3 ರಂದು ಪ್ರಕರಣವನ್ನು ಹೆಚ್ಚಿನ ಪರಿಗಣನೆಗೆ ಇಡಲಾಗುವುದು ಎಂದು ನ್ಯಾಯಾಯವು ನಿರ್ದೇಶಿಸಿದೆ.

Join Whatsapp