ಕೊರೋನ ಸಂಕಷ್ಟ | 39 ಮಠಗಳಿಗೆ ತಲಾ 1 ಕೋಟಿ ರೂ. ಅನುದಾನ !!

Prasthutha|

ಬೆಂಗಳೂರು : ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಸಿಎಂ ಆಗಿದ್ದಾಗ, ಆಯ್ದ 39 ಮಠಗಳಿಗೆ ನೀಡಲು ಉದ್ದೇಶಿಸಿದ್ದ 60 ಕೋಟಿ ಅನುದಾನವನ್ನು ದೇವಸ್ಥಾನಗಳಿಗೆ ಮರುಹಂಚಿಕೆ ಮಾಡಿದ್ದ ಬಿ.ಎಸ್. ಯಡಿಯೂರಪ್ಪ ಸರಕಾರ, ಈಗ ಅದೇ ಮಠಗಳಿಗೆ ತಲಾ 1 ಕೋಟಿ ರೂ.ಯಂತೆ 39 ಕೋಟಿ ರೂ. ನೀಡಲು ನಿರ್ಧರಿಸಿದೆ.

- Advertisement -

ಕೋವಿಡ್ ಕಾರಣದಿಂದಾಗಿ ಮಠಗಳು ಆರ್ಥಿಕ ಸಂಕಷ್ಟ ಎದುರಿಸುತ್ತಿವೆ. ಹೀಗಾಗಿ ಹಿಂದಿನ ಸರಕಾರ ಅನುದಾನ ಘೋಷಿಸಿದ್ದ ಎಲ್ಲ ಮಠಗಳಿಗೆ ಸಮಾನವಾಗಿ ಅನುದಾನ ಹಂಚಿಕೆ ಮಾಡಲು ರಾಜ್ಯ ಸರಕಾರ ನಿರ್ಧರಿಸಿದೆ ಎಂದು ಮುಜರಾಯಿ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪ್ರಸಕ್ತ ಸಾಲಿನ ಬಜೆಟ್ ನಲ್ಲಿ ಮಠಗಳಿಗೆ ಅನುದಾನ ನೀಡಲು 30 ಕೋಟಿ ರೂ. ಮೀಸಲಿಡಲಾಗಿತ್ತು. ಆದರೆ, ಯಾವ ಮಠಕ್ಕೆ ಎಷ್ಟು ಕೊಡಬೇಕೆಂಬ ಬಗ್ಗೆ ಪ್ರಸ್ತಾಪಿಸಿರಲಿಲ್ಲ. ಆದರೆ, ಈ ಮೊತ್ತದಲ್ಲಿ ಈಗಾಗಲೇ 1 ಕೋಟಿ ರೂ. ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲೂಕಿನ ಉಡುಗಣಿ ಗ್ರಾಮದ ಶ್ರೀ ರಾಘವೇಂದ್ರ ಮಠಕ್ಕೆ ನೀಡಲಾಗಿದೆ.

39 ಮಠಗಳಿಗೆ ತಲಾ 1 ಕೊಟಿ ರೂ.ಯಂತೆ ಹಣ ಬಿಡುಗಡೆಗೆ ಆರ್ಥಿಕ ಇಲಾಖೆಗೆ ಪ್ರಸ್ತಾವ ಕಳುಹಿಸಿದ್ದೇನೆ. ಒಂದೆರಡು ದಿನಗಳಲ್ಲಿ ಬಿಡುಗಡೆಯಾಗಬಹುದು ಎಂದು ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ಈ ಹಿಂದಿನ ಸರಕಾರದಲ್ಲಿ ಕುಮಾರಸ್ವಾಮಿ ಅವರು 39 ಮಠಗಳಿಗೆ 60 ಕೋಟಿ ಅನುದಾನ ಬಿಡುಗಡೆ ಮಾಡುವ ಪ್ರಸ್ತಾಪ ಮಾಡಿದ್ದರು.

Join Whatsapp