ಬೆಂಗಳೂರಿನಲ್ಲಿ 72 ರೋಹಿಂಗ್ಯಾಗಳಿದ್ದು ಅವರನ್ನು ಗಡಿಪಾರು ಮಾಡುವ ಆಲೋಚನೆ ಇಲ್ಲ: ಸುಪ್ರೀಂಗೆ ಕರ್ನಾಟಕ ಸರ್ಕಾರ

Prasthutha|

ಮೈಸೂರು: ಬೆಂಗಳೂರಿನಲ್ಲಿ ವಾಸಿಸುತ್ತಿರುವ 72 ರೋಹಿಂಗ್ಯಾಗಳನ್ನು ಗಡಿಪಾರು ಮಾಡುವ ಯಾವುದೇ ಅಲೋಚನೆ ಸದ್ಯಕ್ಕಿಲ್ಲ ಎಂದು ಕರ್ನಾಟಕದ ಬಿಜೆಪಿ ಸರ್ಕಾರ ಸುಪ್ರೀಂಕೋರ್ಟ್‌ಗೆ ತಿಳಿಸಿದೆ.

- Advertisement -

ಬಾಂಗ್ಲಾದೇಶಿಯರು, ರೋಹಿಂಗ್ಯಾಗಳು ಸೇರಿದಂತೆ ಎಲ್ಲಾ ಅಕ್ರಮ ವಲಸಿಗರು ಮತ್ತು ಒಳನುಸುಳುಕೋರರನ್ನು ಗುರುತಿಸಿ ಬಂಧಿಸಿ ಗಡಿಪಾರು ಮಾಡಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ನಿರ್ದೇಶನ ನೀಡುವಂತೆ ಬಿಜೆಪಿ ನಾಯಕ ಅಶ್ವಿನಿ ಉಪಾಧ್ಯಾಯ ಅವರು ಮಾಡಿದ ಮನವಿಗೆ ಪ್ರತಿಕ್ರಿಯೆಯಾಗಿ ಸರ್ಕಾರ ಈ ಅರ್ಜಿ ಸಲ್ಲಿಸಿದೆ.

ಬೆಂಗಳೂರು ನಗರ ಪೋಲಿಸ್ ತನ್ನ ವ್ಯಾಪ್ತಿಯಲ್ಲಿ ಯಾವುದೇ ಶಿಬಿರ ಅಥವಾ ಬಂಧನ ಕೇಂದ್ರದಲ್ಲಿ ರೋಹಿಂಗ್ಯಾಗಳನ್ನು ಇರಿಸಿಕೊಂಡಿಲ್ಲ. ಆದರೂ, ಬೆಂಗಳೂರು ನಗರದಲ್ಲಿ ಗುರುತಿಸಲಾಗಿರುವ 72 ರೋಹಿಂಗ್ಯಾಗಳು ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿದ್ದು ಬೆಂಗಳೂರು ನಗರ ಪೊಲೀಸರು ಅವರ ವಿರುದ್ಧ ಯಾವುದೇ ಒತ್ತಾಯಪೂರ್ವಕ ಕ್ರಮ ಕೈಗೊಂಡಿಲ್ಲ ಮತ್ತು ಅವರನ್ನು ಗಡಿಪಾರು ಮಾಡುವ ಯಾವುದೇ ಆಲೋಚನೆ ಸದ್ಯಕ್ಕಿಲ್ಲ ಎಂದು ಅರ್ಜಿ ಹೇಳಿದೆ.

- Advertisement -

ಮನವಿಯನ್ನು ಕಾನೂನು ಅಥವಾ ಪ್ರಕರಣದ ವಾಸ್ತವಾಂಶಗಳ ಆಧಾರದಲ್ಲಿ ನಿರ್ವಹಿಸಲಾಗದು. ಅರ್ಜಿಗೆ ಅರ್ಹತೆ ಇಲ್ಲ. ಆದ್ದರಿಂದ ಅದನ್ನು ವಿಚಾರಣೆಗೂ ಮುನ್ನವೇ ವಜಾಗೊಳಿಸಬೇಕು ಎಂದು ಸರ್ಕಾರ ಪ್ರತಿಪಾದಿಸಿದೆ.

ವಕೀಲರಾದ ಅಶ್ವನಿ ಕುಮಾರ್ ದುಬೆ ಮತ್ತು ಅಶ್ವಿನಿ ಕುಮಾರ್ ಉಪಾಧ್ಯಾಯ ಅವರು ಸಲ್ಲಿಸಿರುವ ಅರ್ಜಿಯಲ್ಲಿ ಅಂತಹ ಉದ್ಯೋಗಿಗಳ ಅಕ್ರಮ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದು ಪ್ರಾರ್ಥಿಸಲಾಗಿದೆ.

“ರೋಹಿಂಗ್ಯಾ ಮತ್ತು ಬಾಂಗ್ಲಾದೇಶಿ ನುಸುಳುಕೋರರಿಗೆ ಪಾನ್, ಆಧಾರ್, ಪಾಸ್‌ಪೋರ್ಟ್, ಪಡಿತರ ಚೀಟಿ, ಮತದಾರರ ಚೀಟಿ, ಚಾಲನಾ ಪರವಾನಗಿ ಒದಗಿಸುವ ಸರ್ಕಾರಿ ನೌಕರರು, ಟ್ರಾವೆಲ್ ಏಜೆಂಟ್‌ಗಳು ಮುಂತಾದವರ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯಿದೆಯಡಿ ಅವರ ಎಲ್ಲಾ ಅಸಮಾನ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು” ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.

ನುಸುಳುಕೋರರ ಪ್ರವೇಶದಿಂದಾಗಿ ದೇಶದ ಏಕತೆ, ಸಮಗ್ರತೆ ಮತ್ತು ಭದ್ರತೆಗೆ ಗಂಭೀರ ಬೆದರಿಕೆ ಇದೆ. ಒಟ್ಟು 5 ಕೋಟಿ ನುಸುಳುಕೋರರು ತಮ್ಮ ಜನಾಂಗೀಯ ಸಾಮ್ಯತೆ ಮತ್ತು ಭಾರತದ ಜನರೊಂದಿಗೆ ಇರುವ ಸಂಪರ್ಕದ ಲಾಭ ಪಡೆದು ಅಕ್ರಮವಾಗಿ ಭಾರತದಲ್ಲಿ ವಾಸಿಸುತ್ತಿದ್ದಾರೆ ಎಂದು ಮನವಿಯಲ್ಲಿ ಹೇಳಲಾಗಿದೆ.

(ಕೃಪೆ: ಬಾರ್ ಆ್ಯಂಡ್ ಬೆಂಚ್)

Join Whatsapp