ಅಕ್ರಮ ಸಂಬಂಧ ಆರೋಪ: ಯುವ ಕಾಂಗ್ರೆಸ್ ಮುಖಂಡನ ಬರ್ಬರ ಕೊಲೆ

Prasthutha|

ಕೋಲಾರ: ಅಕ್ರಮ ಸಂಬಂಧದ ಹಿನ್ನೆಲೆಯಲ್ಲಿ ಯುವ ಕಾಂಗ್ರೆಸ್ ಮುಖಂಡನೊಬ್ಬನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಕೋಲಾರದಲ್ಲಿ ನಡೆದಿದೆ.
ಯೂತ್ ಕಾಂಗ್ರೆಸ್ ಜಿಲ್ಲಾ ಕಾರ್ಯದರ್ಶಿ ಚರಣ್ ರಾಜ್ ಕೊಲೆಯಾದವರು ಎಂದು ತಿಳಿದು ಬಂದಿದ್ದು, ಕೋಲಾರ ನಗರದ ಟೇಕಲ್ ರಸ್ತೆಯಲ್ಲಿನ ನಂದಿನಿ ಬಾರ್ ಎದುರು ಹತ್ಯೆ ಮಾಡಲಾಗಿದೆ.
ಘಟನೆ ಸಂಬಂಧ ಶ್ರೀಕಾಂತ್ ಎಂಬುವವನನ್ನು ಪೊಲೀಸರು ಬಂಧಿಸಿದ್ದು, ಮತ್ತೊಬ್ಬ ಪ್ರಮುಖ ಆರೋಪಿ ಸೊಣ್ಣಪ್ಪನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
ಕೆಲವು ತಿಂಗಳ ಹಿಂದೆ ಮೇಡ್ತಂಬಳ್ಳಿ ಗ್ರಾಮದ ಸೊಣ್ಣಪ್ಪ ಎಂಬುವವರ ಮನೆಯಲ್ಲಿ ಕೌಟುಂಬಿಕ ಕಲಹದ ಹಿನ್ನೆಲೆ ರಾಜಿ ಪಂಚಾಯಿತಿ ಮಾಡಲು ಚರಣ್ ಹೋಗಿದ್ದರು. ಸೊಣ್ಣಪ್ಪನಿಂದ ಪತ್ನಿಯನ್ನು ಬೇರೆ ಮಾಡಿ ಆಕೆಯೊಂದಿಗೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದರು ಎನ್ನಲಾಗಿದೆ. ಇದರಿಂದ ನೊಂದ ಸೊಣ್ಣಪ್ಪ ಕಳೆದ ಕೆಲವು ದಿನಗಳಿಂದ ಹೊಂಚು ಹಾಕಿ ಕಳೆದ ರಾತ್ರಿ ಟೇಕಲ್ ರಸ್ತೆಯ ನಂದಿನಿ ಬಾರ್ ಬಳಿ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆ. ಪ್ರಾಥಮಿಕ ಹಂತದಲ್ಲಿ ಅಕ್ರಮ ಸಂಬಂಧದ ಹಿನ್ನೆಲೆಯಲ್ಲಿ ಕೊಲೆಯಾಗಿದೆ ಎಂದು ಕೋಲಾರ ಎಸ್ಪಿ ಡಿ.ದೇವರಾಜ್ ತಿಳಿಸಿದ್ದಾರೆ.

Join Whatsapp