ಮಾನ್ಯತೆ ಪಡೆಯದ ಮದರಸಾಗಳನ್ನು ಆದಿತ್ಯನಾಥ್ ಸರ್ಕಾರ ಅನುದಾನ ಪಟ್ಟಿಗೆ ತರುತ್ತದೆಯೇ?: ಮಾಯಾವತಿ

Prasthutha|

ಲಕ್ನೋ: ರಾಜ್ಯದಲ್ಲಿ 7500 ಖಾಸಗಿ ಮದರಸಾಗಳಿಗೆ ಮಾನ್ಯತೆಯನ್ನು ನೀಡಲಾಗಿಲ್ಲ ಎಂದು ಸರ್ಕಾರದ ಸಮೀಕ್ಷಾ ವರದಿ ಬಂದ ಬೆನ್ನಲ್ಲೇ ಪ್ರತಿಕ್ರಿಯಿಸಿದ ಬಿಎಸ್ಪಿ ಮುಖ್ಯಸ್ಥ ಮಾಯಾವತಿ, ಸರ್ಕಾರ ಈ ಮದರಾಸಗಳನ್ನು ಅನುದಾನ ಪಟ್ಟಿಯಲ್ಲಿ ಸೇರಿಸಿ ತನ್ನ ಅಧಿಕಾರ ವ್ಯಾಪ್ತಿಗೆ ತರುತ್ತದೆಯೇ ಎಂದು ಪ್ರಶ್ನಿಸಿದ್ದಾರೆ.

- Advertisement -

ಉತ್ತರ ಪ್ರದೇಶ ಸರ್ಕಾರ ಕಳೆದ ತಿಂಗಳು ರಾಜ್ಯದ ಎಲ್ಲಾ ಖಾಸಗಿ ಮದರಸಾಗಳನ್ನು ಸಮೀಕ್ಷೆಗೊಳಪಡಿಸುವಂತೆ ಆದೇಶಿಸಿತ್ತು. ಇದರ ಆಧಾರದಲ್ಲಿ ಈ ಸಂಸ್ಥೆಗಳಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದು ತಿಳಿಸಿತ್ತು.

ರಾಜ್ಯ ಸರ್ಕಾರ ವಿಶೇಷ ತಂಡವನ್ನು ರಚಿಸುವ ಮೂಲಕ ಜನರ ದೇಣಿಗೆಯ ಮೇಲೆ ಅವಲಂಬಿತವಾಗಿರುವ ಖಾಸಗಿ ಮದರಸಾಗಳ ಸಮೀಕ್ಷೆಯನ್ನು ಪೂರ್ಣಗೊಳಿಸಿದೆ ಮತ್ತು 7500ಕ್ಕೂ ಅಧಿಕ ಮಾನ್ಯತೆ ಪಡೆಯದ ಮದರಸಾಗಳು ಬಡ ಮಕ್ಕಳಿಗೆ ಶಿಕ್ಷಣ ನೀಡುವಲ್ಲಿ ತೊಡಗಿಸಿಕೊಂಡಿವೆ ಎಂದು ಬಿಎಸ್ಪಿ ಮುಖ್ಯಸ್ಥ ಮಾಯಾವತಿ ಹೇಳಿದ್ದಾರೆ.

- Advertisement -

ಈ ಸರ್ಕಾರೇತರ ಮದರಸಾಗಳು ಸರ್ಕಾರಕ್ಕೆ ಹೊರೆಯಾಗಲು ಬಯಸುವುದಿಲ್ಲ. ಹಾಗಾದರೆ ಇದಕ್ಕೆ ಸಂಬಂಧಿಸಿದಂತೆ ಯಾಕೆ ಹಸ್ತಕ್ಷೇಪ ಎಂದು ಅವರು ಟ್ವೀಟ್’ನಲ್ಲಿ ಪ್ರಶ್ನಿಸಿದ್ದಾರೆ.

ಬಿಎಸ್‌ಪಿ ಸರ್ಕಾರವು ಅಂತಹ 100 ಮದರಸಾಗಳನ್ನು ಮಂಡಳಿಯ ಅಡಿಯಲ್ಲಿ ತಂದಿದೆ ಎಂದು ಅವರು ತಿಳಿಸಿದ್ದಾರೆ.

ಹಿಂದೆ, ಮದರಸಾಗಳ ಆಧುನೀಕರಣದ ಹೆಸರಿನಲ್ಲಿ, ವಿದ್ಯಾರ್ಥಿಗಳಿಗೆ ಅವರ ಆಯ್ಕೆಯ ಉನ್ನತ ಶಿಕ್ಷಣವನ್ನು ಖಾತ್ರಿಪಡಿಸುವ ಬದಲು, ಅವರಿಗೆ ಡ್ರೈವಿಂಗ್ ಮತ್ತು ಮೆಕ್ಯಾನಿಕ್, ಕಾರ್ಪೆಂಟರ್ ಕೆಲಸಗಳಲ್ಲಿ ತರಬೇತಿ ನೀಡಲಾಯಿತು. ಬಿಜೆಪಿ ಸರ್ಕಾರದಲ್ಲಿ ಅವರಿಗೆ ಏನಾಗುತ್ತದೆ ಎಂದು ನೋಡಿ ಎಂದು ಕುಟುಕಿದರು.

ಉತ್ತರ ಪ್ರದೇಶ ಮತ್ತು ಇತರ ಎಲ್ಲಾ ರಾಜ್ಯಗಳ ಸರ್ಕಾರಿ ಶಾಲೆಗಳ ಸ್ಥಿತಿ ಮತ್ತು ಶಿಕ್ಷಣ ವ್ಯವಸ್ಥೆಯು ಹದಗೆಡುತ್ತಿದೆ. ಇದು ಯಾರಿಂದಲೂ ಮರೆಮಾಡಲ್ಪಟ್ಟಿಲ್ಲ ಎಂದು ಅವರು ಕಿಡಿ ಕಾರಿದ್ದಾರೆ.

ರಾಜ್ಯದ 75 ಜಿಲ್ಲೆಗಳಲ್ಲಿ ಸಮೀಕ್ಷೆ ಬಹುತೇಕ ಪೂರ್ಣಗೊಂಡಿದೆ. ಮದರಸಾಗಳ ಸಮೀಕ್ಷೆಗಾಗಿ ರಚಿಸಲಾದ ತಂಡಗಳು ಅಕ್ಟೋಬರ್ 31ರೊಳಗೆ ಹೆಚ್ಚುವರಿ ಜಿಲ್ಲಾಧಿಕಾರಿಗಳ ಮೂಲಕ ಜಿಲ್ಲಾಧಿಕಾರಿಗಳಿಗೆ ತಮ್ಮ ವರದಿಯನ್ನು ಸಲ್ಲಿಸಲಿದೆ.

Join Whatsapp