ಪೊಲೀಸ್ ಅಧಿಕಾರಿಗಳು ಸಮವಸ್ತ್ರ ಬಿಟ್ಟು ಕಾವಿ ಬಟ್ಟೆ ಹಾಕಿದರೆ ಪರಿಸ್ಥಿತಿ ಏನಾಗುತ್ತದೆ?: ಕಾನೂನು ಸುವ್ಯವಸ್ಥೆ ಪ್ರಶ್ನೆಗೆ ಡಿಕೆಶಿ ಪ್ರತಿಕ್ರಿಯೆ

Prasthutha|

ಬೆಳಗಾವಿ: ಬಸವರಾಜ ಬೊಮ್ಮಾಯಿ ಅವರು ತಮ್ಮ ಕ್ಷೇತ್ರದಲ್ಲಿ ಭಾವನಾತ್ಮಕವಾಗಿ ಮಾತನಾಡಿದ್ದು, ಅದು ಸಹಜ. ನಾನು ಕೂಡ ನನ್ನ ಕ್ಷೇತ್ರದಲ್ಲಿ ಸಾಮಾನ್ಯ ಕಾರ್ಯಕರ್ತ. ನಮ್ಮ ಜನರ ಎದುರು ನಮ್ಮ ಅಧಿಕಾರ ತೋರಲು ಆಗುವುದಿಲ್ಲ. ಹೀಗಾಗಿ ಅವರ ಹೇಳಿಕೆಯಲ್ಲಿ ತಪ್ಪಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ.

- Advertisement -

ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಡಿ.ಕೆ. ಶಿವಕುಮಾರ್ ಅವರು ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ಬೊಮ್ಮಾಯಿ ಅವರು ಸಿಎಂ ಸ್ಥಾನದಿಂದ ಬದಲಾಗುತ್ತಾರೆ. ನಿರಾಣಿ ಅವರು ಮುಖ್ಯಮಂತ್ರಿ ಆಗುತ್ತಾರೆ ಎಂಬ ಸಚಿವ ಈಶ್ವರಪ್ಪ ಅವರ ಹೇಳಿಕೆಯಿಂದಾಗಿ ನಾಯಕತ್ವ ಬದಲಾವಣೆ ವಿಚಾರದಲ್ಲಿ ಗೊಂದಲ ಸೃಷ್ಟಿಯಾಗಿದೆ. ನಿನ್ನೆ ಮುಖ್ಯಮಂತ್ರಿಗಳು ತಮ್ಮ ಜನರ ಮುಂದೆ ಭಾವನಾತ್ಮಕವಾಗಿ ಮಾತನಾಡಿದ್ದಾರೆ. ನಿರಾಣಿ ಅವರು ಅದೇ ವೇದಿಕೆಯಲ್ಲಿ ಬೊಮ್ಮಾಯಿ ಅವರು ಕೇಂದ್ರ ಸಚಿವರಾಗುತ್ತಾರೆ ಎಂದು ಹೇಳುತ್ತಾರೆ.

ರಾಜ್ಯದಲ್ಲಿ ಯಾವ ಅಧಿಕಾರಿಗಳು ಸಿಎಂ ಮಾತು ಕೇಳುತ್ತಿಲ್ಲ. ಸುವರ್ಣಸೌಧದ ಕಾರಿಡಾರ್ ಗಳಲ್ಲೇ ಸಚಿವರು ಸಿಎಂ ಬದಲಾಗುತ್ತಾರೆ ಎಂದು ಮಾತನಾಡಿಕೊಳ್ಳುತ್ತಿದ್ದಾರೆ. ಆಡಳಿತ ಕುಸಿತ ಕಂಡಿದೆ. ಬಿಜೆಪಿ ಎಷ್ಟಾದರೂ ಸಿಎಂಗಳನ್ನು ಬದಲಾವಣೆ ಮಾಡಿಕೊಳ್ಳಲಿ. ಯಡಿಯೂರಪ್ಪ ಅವರನ್ನೇ ಬೇಕಾದರೆ ಮತ್ತೆ ಸಿಎಂ ಸ್ಥಾನದಲ್ಲಿ ಕೂರಿಸಲಿ. ನಮ್ಮ ಅಭ್ಯಂತರವಿಲ್ಲ ಎಂದು ಹೇಳಿದರು.

- Advertisement -

ಬೆಳಗಾವಿಯಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ರಾಜ್ಯದಲ್ಲಿ ಶಾಂತಿ ಕಾಪಾಡುವುದೇ ಕಾಂಗ್ರೆಸ್ ಸಂಕಲ್ಪ. ಈ ಕೃತ್ಯವನ್ನು ಏಕಾಏಕಿಯಾಗಿ ಎಂಇಎಸ್ ಅಥವಾ ಇತರೆ ಸಂಘಟನೆ ಮಾಡಿದೆ ಎಂದು ಹೇಳಲು ಸಾಧ್ಯವಿಲ್ಲ. ಅದು ಸಾಬೀತಾಗಬೇಕು. ಕೆಲವು ಕಿಡಿಗೇಡಿಗಳು ಶಾಂತಿಭಂಗ ಮಾಡಲು ಈ ಕೃತ್ಯ ಎಸಗಿದ್ದಾರೆ. ಸರ್ಕಾರ ಅಂತಹವರ ಮೇಲೆ ಕ್ರಮ ಕೈಗೊಳ್ಳಬೇಕು.

ಸರ್ಕಾರ ಮೊದಲಿನಿಂದಲೂ ನೈತಿಕ ಪೊಲೀಸ್ ಗಿರಿಗೆ ಪ್ರೋತ್ಸಾಹ ನೀಡುತ್ತಾ ಬಂದಿದೆ. ಅವರದೇ ಪಕ್ಷದ ಹಲವರನ್ನು ಪ್ರಕರಣದಿಂದ ಮುಕ್ತಿಗೊಳಿಸಿದ್ದು, ಈ ಘಟನೆಗಳಿಗೆಲ್ಲಾ ಅದೇ ಮೂಲ ಕಾರಣವಾಗುತ್ತಿದೆ. ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಕನ್ನಡಪರ ಸಂಘಟನೆಗಳು, ಕಾಂಗ್ರೆಸ್ ಕಾರ್ಯಕರ್ತರು, ಬಿಜೆಪಿಯವರು ಸೇರಿದಂತೆ ಯಾರೊಬ್ಬರೂ  ಕಾನೂನನ್ನು ಕೈಗೆತ್ತಿಕೊಳ್ಳಬಾರದು. ಪೊಲೀಸ್ ಅಧಿಕಾರಿಗಳು ರಾಜಕಾರಣಿಗಳ ಮಾತು ಕೇಳುವುದನ್ನು ಬಿಟ್ಟು ತಮ್ಮ ಕೆಲಸ ತಾವು ಮಾಡಬೇಕು’ ಎಂದರು.

ಬೆಳಗಾವಿಯಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘ರಾಜ್ಯದಲ್ಲೇ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಪೊಲೀಸ್ ಅಧಿಕಾರಿಗಳು ಠಾಣೆ ಮುಂದೆ ತಮ್ಮ ಸಮವಸ್ತ್ರ ಬಿಟ್ಟು ಕಾವಿ ಬಟ್ಟೆ ಹಾಕಿದರೆ ಪರಿಸ್ಥಿತಿ ಏನಾಗುತ್ತದೆ?’ ಎಂದು ಕೇಳಿದರು.

Join Whatsapp