ಸ್ವಾತಂತ್ರ್ಯದ ಅಮೃತ ಮಹೋತ್ಸವದ ಹೆಸರಿನಲ್ಲಿ ಶಾಸಕ ಹರೀಶ್ ಪೂಂಜಾರಿಂದ ಹಫ್ತಾ ವಸೂಲಿ: ವಸಂತ ಬಂಗೇರ

Prasthutha|

ಬೆಳ್ತಂಗಡಿ: ಸ್ವಾತಂತ್ರ್ಯದ ಅಮೃತ ಮಹೋತ್ಸವದ ಹೆಸರಿನಲ್ಲಿ ಶಾಸಕ ಹರೀಶ್ ಪೂಂಜಾ ಅವರು ಹಫ್ತಾ ವಸೂಲಿ ನಡೆಸುತ್ತಿದ್ದಾರೆ ಎಂದು ಮಾಜಿ ಶಾಸಕ ವಸಂತ ಬಂಗೇರ ಹೇಳಿದ್ದಾರೆ.

- Advertisement -

ಲಾಯಿಲ ಪಂಚಾಯತ್ ಗೆ ಪೂರೈಸಲಾಗಿದ್ದ ಧ್ವಜವನ್ನು ವಿರೂಪಗೊಳಿಸಿದ ಘಟನೆಗೆ ಸಂಬಂಧಿಸಿದಂತೆ ಬೆಳ್ತಂಗಡಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದೇ ಬರುವ ಆಗಸ್ಟ್ 15 ರಂದು ಜರಗುವ ಸ್ವಾತಂತ್ರ್ಯ ಅಮೃತ ಮಹೋತ್ಸವದ ಹೆಸರಲ್ಲಿ ಬೆಳ್ತಂಗಡಿಯ ಶಾಸಕರಾದ ಹರೀಶ್ ಪೂಂಜಾರವರು, ಮದ್ಯ ವ್ಯಾಪಾರಿಗಳು, ಸರಕಾರಿ ಅಧಿಕಾರಿಗಳು, ವಿವಿಧ ಗುತ್ತಿಗೆದಾರರು ಇಂತಿಷ್ಟು ಹಣ ನೀಡಬೇಕೆಂಬ ಫರ್ಮಾನು ಹೊರಡಿಸುವ ಮೂಲಕ ಹಫ್ತಾ ವಸೂಲಿಗೆ ಮುಂದಾಗಿರುವ ಬಗ್ಗೆ ನನಗೆ ಸಾಕಷ್ಟು ದೂರುಗಳು ಬಂದಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಶಾಸಕರು ಸ್ವಾತಂತ್ರ್ಯ ಅಮೃತ ಮಹೋತ್ಸವದ ಹೆಸರಿನಲ್ಲಿ ಈ ರೀತಿಯ ದಂಧೆಗೆ ಇಳಿಯುವ ಮೂಲಕ ತಾನೊಬ್ಬ ಕಡು ಭ್ರಷ್ಟ ಶಾಸಕ ಎಂಬುದನ್ನು ತೋರಿಸಿ ತಾಲೂಕಿನ ಜನತೆಯ ಮುಂದೆ ಬೆತ್ತಲಾಗಿದ್ದಾರೆ. ಈಗಾಗಲೇ ಕಾಮಗಾರಿಗಳಲ್ಲಿ 40% ಕಮಿಷನ್ ತಿಂದು ತೇಗುತ್ತಿರುವ ಶಾಸಕರ ಈ ಹಫ್ತಾ ವಸೂಲಿಗೆ ಯಾರೂ ಹೆದರಬಾರದೆಂದು ನಾನು ಈ ಮೂಲಕ ವಿನಂತಿಸುತ್ತೇನೆ. ಈ ಬಗ್ಗೆ ಒತ್ತಡ ತಂದಲ್ಲಿ ನನ್ನ ಗಮನಕ್ಕೆ ತರುವಂತೆ ಈ ಮೂಲಕ ಆಗ್ರಹಿಸುತ್ತಿದ್ದೇನೆ ಎಂದು ಬಂಗೇರ ಸಾರ್ವಜನಿಕರಿಗೆ ಮನವಿ ಮಾಡಿದರು.

- Advertisement -

ಬಾರ್ ಎಂಡ್ ರೆಸ್ಟೋರೆಂಟ್ ನಲ್ಲಿ ಶಾಸಕರಿಂದ ಅಧಿಕಾರಿಗಳ ಸಭೆ ನಾಚಿಕೆಗೇಡು. ಇತ್ತೀಚೆಗೆ ತನ್ನದೇ ಬೇನಾಮಿ ಮಾಲಕತ್ವದ ಗುರುವಾಯನಕೆರೆಯ ನವಶಕ್ತಿ ಬಾರ್ ಎಂಡ್ ರೆಸ್ಟೋರೆಂಟ್ ನಲ್ಲಿ ತಾಲೂಕು ಮಟ್ಟದ ಅಧಿಕಾರಿಗಳ ಸಭೆ ನಡೆಸುವ ಮೂಲಕ ತನ್ನ ಬಾರ್ ಎಂಡ್ ರೆಸ್ಟೋರೆಂಟ್ ನ್ನು ಅಧಿಕಾರಿಗಳಿಗೆ ಪರಿಚಯಿಸುವ ಕೆಲಸವನ್ನು ಶಾಸಕರಾದ ಹರೀಶ್ ಪೂಂಜಾರವರು ನಡೆಸಿದ್ದು ನಾಚಿಕೆಗೇಡು. ತಾಲೂಕಿನ ಮುಕುಟದಂತಿರುವ ತಾಲೂಕು ಆಡಳಿತ ಸೌಧದಲ್ಲಿ ಸಭೆ ನಡೆಸದೆ ಪಟ್ಟಣದ ಹೊರಭಾಗದಲ್ಲಿರುವ ಒಂದು ಬಾರ್ ಎಂಡ್ ರೆಸ್ಟೋರೆಂಟ್ ನಲ್ಲಿ ಈ ಸಭೆ ನಡೆಸಿರುವುದರ ಔಚಿತ್ಯವೇನು ಎಂಬುದನ್ನು ಶಾಸಕರು ಜನತೆಯ ಮುಂದಿಡಬೇಕೆಂದು ನಾನು ಆಗ್ರಹಿಸುತ್ತಿದ್ದೇನೆ ಎಂದು ಅವರು ತಿಳಿಸಿದರು.

ಸ್ವಾತಂತ್ರ್ಯ ಅಮೃತ ಮಹೋತ್ಸವದ ಸಂದರ್ಭದಲ್ಲಿ ಬೆಳ್ತಂಗಡಿಯಲ್ಲಿ ನಡೆಯುವ ಸಮಾರಂಭದಲ್ಲಿ ಮಾಜಿ ಸಚಿವರಾದ ಗಂಗಾಧರ ಗೌಡ, ಮಾಜಿ ಶಾಸಕ ಕೆ. ಪ್ರಭಾಕರ ಬಂಗೇರ ಮತ್ತು ನನಗೆ ಸನ್ಮಾನ ಕಾರ್ಯಕ್ರಮ ಇದೆ ಎನ್ನುವ ವಿಚಾರ ಪತ್ರಿಕೆಗಳ ಮೂಲಕ ತಿಳಿಯಿತು. ಆದರೆ ಈ ಬಗ್ಗೆ ನನಗೆ ಯಾವುದೇ ಆಹ್ವಾನ ಇದುವರೆಗೆ ಬಂದಿಲ್ಲ. ನಾನು ಆ ಸನ್ಮಾನ ಸ್ವೀಕರಿಸಲು ಹೋಗೋದು ಕೂಡ ಇಲ್ಲ. ಶಾಸಕರು ಹಫ್ತಾ ವಸೂಲಿ ಮಾಡಿ ನೀಡುವ ಯಾವುದೇ ಸನ್ಮಾನವನ್ನು ನಾನು ಸ್ವೀಕರಿಸುವುದಿಲ್ಲ’ ಎಂದು ಈ ಮೂಲಕ ಅವರಿಗೆ ತಿಳಿಸಲು ಬಯಸುತ್ತೇನೆ ವಸಂತ ಬಂಗೇರ ಖಾರವಾಗಿ ನುಡಿದರು

15 ದಿನಗಳ ಒಳಗಾಗಿ ಆಕ್ರಮ-ಸಕ್ರಮ ಬೈಠಕ್ ನಡೆಸದಿದ್ದಲ್ಲಿ ತಾಲೂಕು ಕಚೇರಿಗೆ ಮುತ್ತಿಗೆ

ಜಿಲ್ಲೆಯ ಎಲ್ಲಾ ಕಡೆ ಅಕ್ರಮ ಸಕ್ರಮ ಬೈಠಕ್ ನಡೆಸಿ ಬಡ ರೈತರಿಗೆ ನ್ಯಾಯ ಒದಗಿಸುವ ಕೆಲಸಗಳಾಗುತ್ತಿದ್ದರೂ ಬೆಳ್ತಂಗಡಿಯಲ್ಲಿ ಕೇವಲ ಒಂದು ಸಿಟ್ಟಿಂಗ್ ನಡೆಸಿ ನಂತರ ಬೈಠಕ್ ಮೊಟಕುಗೊಳಿಸಿರುವುದು ಯಾಕೆ? ಕಳೆದ ಗ್ರಾಮ ಪಂಚಾಯತ್ ಚುನಾವಣೆಯ ಸಂದರ್ಭದಲ್ಲಿ ಗ್ರಾಮ ಗ್ರಾಮಗಳಿಗೆ ತೆರಳಿ ಶಾಸಕರಾದ ಹರೀಶ್ ಪೂಂಜಾರವರು ನೀವೆಲ್ಲ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಬಿ. ಜೆ. ಪಿ ಪಕ್ಷದ ಪ್ರತಿನಿಧಿಗಳನ್ನು ಗೆಲ್ಲಿಸಿದರೆ ತಕ್ಷಣ ನಿಮ್ಮೆಲ್ಲರ ಕುಮ್ಕಿ ಭೂಮಿ ಸೇರಿದಂತೆ ಅಕ್ರಮ ಸಾಗುವಳಿಯನ್ನು ಸಕ್ರಮೀಕರಣ ಮಾಡಿಸಿಕೊಡುತ್ತೇನೆ’ ಎಂದು ಭರವಸೆ ನೀಡಿದ ಶಾಸಕರು ಈಗ ಅಕ್ರಮ ಸಕ್ರಮ ಬೈಠಕ್ ನಡೆಸದೆ ರೈತರಿಗೆ ಮೋಸ ಮಾಡುತ್ತಿದ್ದಾರೆ ಎಂದು ದೂರಿದರು.

ಈಗಾಗಲೇ ಗ್ರಾಮ ಗ್ರಾಮದಲ್ಲಿ ಬಿ.ಜೆ.ಪಿ ಪಕ್ಷದ ಕೆಲ ಮಧ್ಯವರ್ತಿಗಳು ಹಕ್ಕುಪತ್ರ ಮಾಡಿಸಿಕೊಡುವುದಾಗಿ ಜನರಿಂದ ಲಕ್ಷಗಟ್ಟಲೆ ಹಣ ಸಂಗ್ರಹಿಸಿದ್ದು ಇದರಲ್ಲಿ ಶಾಸಕರಿಗೂ ಕಮಿಷನ್ ಇರುವುದಾಗಿ ನನಗೆ ತಿಳಿದು ಬಂದಿರುತ್ತದೆ. ಶಾಸಕರು ಈ ವಿಚಾರಕ್ಕಾಗಿಯೇ ತಾಲೂಕು ಕಚೇರಿಯಲ್ಲಿ ತನ್ನದೇ ಆದ ಓರ್ವ ಖಾಸಗಿ ಸಿಬ್ಬಂದಿಯನ್ನು ನೇಮಿಸಿದ್ದು, ಆತ ತನ್ನ ಕೊರಳಿಗೆ ಒಂದು ಐ ಡಿ ಕಾರ್ಡ್ ಹಾಕಿಕೊಂಡು ತಾಲೂಕು ಕಚೇರಿಯಲ್ಲಿ ಅತ್ತಿಂದಿತ್ತ ತಿರುಗುತ್ತಿದ್ದಾನೆ.ಆತನನ್ನು ತಕ್ಷಣ. ಬೆಳ್ತಂಗಡಿ ತಹಸೀಲ್ದಾರರು, ಕಚೇರಿಯಿಂದ ಹೊರದಬ್ಬುವಂತೆ ಈ ಮೂಲಕ ತಹಸೀಲ್ದಾರರನ್ನು ನಾನು ಆಗ್ರಹಿಸುತ್ತಿದ್ದೇನೆ. ಮುಂದಿನ ಹದನೈದು ದಿನಗಳಲ್ಲಿ ಅಕ್ರಮ ಸಕ್ರಮ ಬೈಠಕ್, ನಡೆಸದಿದ್ದಲ್ಲಿ ಸಾರ್ವಜನಿಕರೊಂದಿಗೆ ಬೆಳ್ತಂಗಡಿ ತಾಲೂಕು ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ಅವರು ಎಚ್ಚರಿಸಿದರು.

40% ಕಮಿಷನ್ ಗೆ ತಾಲೂಕಿನ ರಸ್ತೆಗಳು ಮಾಯ

ತಾಲೂಕಿನ ಬಹುತೇಕ ರಸ್ತೆಗಳ ಕಾಮಗಾರಿಗಳಲ್ಲಿ ಶಾಸಕ ಹರೀಶ್ ಪೂಂಜಾರವರು ವ್ಯಾಪಕ ಭ್ರಷ್ಟಾಚಾರ ನಡೆಸಿ 40% ಕಮಿಷನ್ ಪಡೆದಿದ್ದು ಅದರ ಪರಿಣಾಮ ಈ ವರ್ಷ ಬಿದ್ದ ಮಳೆಗೆ ರಸ್ತೆಗಳೆಲ್ಲ ಮಾಯವಾಗಿರುತ್ತದೆ. ಈ ರಸ್ತೆಗಳನ್ನು ತಕ್ಷಣ ಸರಿಪಡಿಸಬೇಕೆಂದು ನಾನು ಈ ಮೂಲಕ ಆಗ್ರಹಿಸುತ್ತಿದ್ದೇನೆ ಎಂದರು.

ಮರಳು ದಂಧೆ ಕಡಿವಾಣ ಹಾಕುವಲ್ಲಿ ಅಧಿಕಾರಿಗಳು ವಿಫಲ

ತಾಲೂಕಿನಾದ್ಯಂತ ಶಾಸಕ ಹರೀಶ್ ಪೂಂಜಾರವರ ನೇತೃತ್ವದಲ್ಲಿ ವ್ಯಾಪಕ ಮರಳು ದಂಧೆ ಮತ್ತು ಮರಗಳ್ಳತನ ನಡೆಯುತ್ತಿದ್ದು, ಇದಕ್ಕೆ ಕೆಲ ಕಂದಾಯ, ಅರಣ್ಯ ಮತ್ತು ಪೋಲೀಸ್ ಇಲಾಖೆಯ ಅಧಿಕಾರಿಗಳು ಸಾತ್ ನೀಡುತ್ತಿದ್ದಾರೆ. ಇದನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರೂ ಅವರು ಯಾವುದೇ ಕ್ರಮ ಕೈಗೊಂಡಿರುವುದಿಲ್ಲ. ಇದೇ ರೀತಿಯ ದಂಧೆ ಮುಂದುವರಿದಲ್ಲಿ ಮುಂದಿನ ದಿನಗಳಲ್ಲಿ ಈ ಬಗ್ಗೆ ಸೂಕ್ತ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾಜಿ ಶಾಸಕ ವಸಂತ ಬಂಗೇರ, ವಕೀಲರಾದ ಬಿ. ಎಂ ಭಟ್, ಮನೋಹರ್ ಇಲಾಂತಿಲ, ಶೇಖರ್ ಲೈಲಾ ಭಾಗವಹಿಸಿದ್ದರು.

Join Whatsapp