ನಿಮ್ಮ ಪರಿವಾರದ ತಾಲಿಬಾನ್ ಗಿರಿಯನ್ನು ಸಂವಿಧಾನದಿಂದ ಹಿಮ್ಮೆಟ್ಟಿಸುತ್ತೇವೆ: ಸಿ.ಟಿ.ರವಿಗೆ ಸಿದ್ದರಾಮಯ್ಯ ತಿರುಗೇಟು

Prasthutha|

►ಅಮಾಯಕ ವಿದ್ಯಾರ್ಥಿಗಳ ಮೇಲೆ ನಡೆಸಿದ ದೌರ್ಜನ್ಯ RSS ಸಂಸ್ಕೃತಿಯಲ್ಲಿ ಸೇರಿದೆಯೇ?

- Advertisement -

ಬೆಂಗಳೂರು: RSS ಎಂದ ಕೂಡಲೇ ಉರಿದುಬೀಳುವ ಸಿ.ಟಿ.ರವಿ ಅವರೇ, RSS ಎಂದರೆ ಏನು? ಅದರ ಜೊತೆ ಬಿಜೆಪಿ ಸಂಬಂಧ ಏನು? RSS ಎಂದರೆ ಏನು ಸಾಮಾಜಿಕ ಸೇವಾ ಸಂಘಟನೆಯೇ? ಸಾರ್ವಜನಿಕ ದತ್ತಿಯೇ? ಇಲ್ಲವೇ ಬಿಜೆಪಿ ಎಂಬ ರಾಜಕೀಯ ಪಕ್ಷಕ್ಕೆ ನಾಯಕರನ್ನು ಉತ್ಪಾದಿಸಿ ಕೊಡುವ ಕಾರ್ಖಾನೆಯೇ? ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ತೀವ್ರ ವಾಗ್ದಾಳಿ ನಡೆಸಿದ್ದಾರೆ.

RSS ಮತ್ತು ತಾಲಿಬಾನ್ ಒಂದೇ ತರ ಕಾಣುತ್ತಿದೆ ಎಂದು ಸಿದ್ದರಾಮಯ್ಯ ಟೀಕಿಸಿದ್ದಕ್ಕೆ ನಿನ್ನೆ ಸಿ.ಟಿ.ರವಿ ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದಿದಿದ್ದರು.

- Advertisement -

ಇದಕ್ಕೆ ಇಂದು ಸರಣಿ ಟ್ವೀಟ್ ಗಳ ಮೂಲಕ ತಿರುಗೇಟು ನೀಡಿರುವ ಸಿದ್ದರಾಮಯ್ಯ, RSS ಎನ್ನುವುದು ಹಿಂದುಗಳ ಸಂಘಟನೆ ಎಂದು ನೀವು ಹೇಳುವುದಾದಾರೆ ಬಿಜೆಪಿಯಲ್ಲಿರುವವರು ಮಾತ್ರ ಹಿಂದೂಗಳೇ? ಬೇರೆ ಪಕ್ಷದವರು ಹಿಂದೂಗಳಲ್ಲವೇ? ದೆಹಲಿಯಲ್ಲಿ 10 ತಿಂಗಳಿಂದ ಬೀದಿಯಲ್ಲಿರುವವರು ಹಿಂದುಗಳಲ್ಲವೇ? ವಾರದ ಹಿಂದೆ ಉತ್ತರಪ್ರದೇಶದಲ್ಲಿ ಅತ್ಯಾಚಾರಕ್ಕೀಡಾದ ದಲಿತ ಯುವತಿ ಹಿಂದು ಅಲ್ಲವೇ? ಎಂದು ಪ್ರಶ್ನಿಸಿದ್ದಾರೆ.

RSS ಸಾಂಸ್ಕೃತಿಕ ಸಂಘಟನೆ ಎಂದಾದರೆ ಅದರ ಸಂಸ್ಕೃತಿಯ ವ್ಯಾಖ್ಯಾನವೇನು? ನಿನ್ನೆ ತಾನೆ ಮಂಗಳೂರಿನಲ್ಲಿ ಅಮಾಯಕ ವಿದ್ಯಾರ್ಥಿ-ವಿದ್ಯಾರ್ಥಿನಿಗಳ ಮೇಲೆ ನಿಮ್ಮ ಪರಿವಾರದ ಗೂಂಡಾಗಳು ನಡೆಸಿದ ದೌರ್ಜನ್ಯ ಕೂಡಾ ಈ ಸಂಸ್ಕೃತಿಯಲ್ಲಿ ಸೇರಿದೆಯೇ? . ದೇಶ ಮತ್ತು ಹಿಂದುಗಳ ರಕ್ಷಣೆ ಮಾಡಲು RSS ನಾಯಕರಿಗೆ ಗುತ್ತಿಗೆ ಕೊಟ್ಟವರಾರು? RSS ನಾಯಕರೇನು ಜನರಿಂದ ಚುನಾಯಿತರಾದ ನಾಯಕರೇ? ಅವರು ಯಾಕೆ ಚುನಾವಣೆಯಲ್ಲಿ‌ ಸ್ಪರ್ಧಿಸಬಾರದು? ನಿಮ್ಮ ಎರಡು ಸಂಘಟನೆಗಳ ನಡುವೆ ಮುಖ ಯಾವುದು? ಮುಖವಾಡ ಯಾವುದು? ಸಿ.ಟಿ.ರವಿಯವರೇ, ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ನಾನು ಮತ್ತು ನನ್ನಂತಹ ಕೋಟ್ಯಂತರ ಜನ ನಿರ್ಭೀತಿ ಮತ್ತು ಆತ್ಮಗೌರವದಿಂದ ಬದುಕುತ್ತಿರುವುದು ಅಂಬೇಡ್ಕರ್ ಅವರು ಕೊಟ್ಟ ಸಂವಿಧಾನದಿಂದ. ನಿಮ್ಮ ಪರಿವಾರದ ತಾಲಿಬಾನ್ ಗಿರಿಯನ್ನು ಅದೇ ಸಂವಿಧಾನದಿಂದ ಹಿಮ್ಮೆಟ್ಟಿಸುತ್ತೇವೆ.

ಸಿ.ಟಿ ರವಿ ಅವರೇ, ನಿಮ್ಮನ್ನು ರೈತನ ಮಗ ಎನ್ನುತ್ತೀರಿ, ನಾನು ಉಡುವ ರೈತ ಮಕ್ಕಳ ಪಂಚೆಯನ್ನು ಗೇಲಿ ಮಾಡುತ್ತೀರಿ. ನಿಮ್ಮ ತಂದೆ ಕೂಡಾ ಪಂಚೆ ಉಡುವವರು ಎಂದು ಅಂದುಕೊಳ್ತೀನಿ. ನಿಮ್ಮಂತಹ ಮಗನ ಬಗ್ಗೆ ಅವರೇನು ಅಂದುಕೊಳ್ಳಬಹುದು ಯೋಚಿಸಿದ್ದೀರಾ? ಈ ರೀತಿ ನಾಲಿಗೆ ಸಡಿಲ ಬಿಟ್ಟು ಮನೆಗೆ ಹೋಗುವಾಗ ಹುಷಾರಾಗಿರಿ ಎಂದು ಕುಟುಕಿದ್ದಾರೆ.

ಕೊನೆಯದಾಗಿ ಸಿ.ಟಿ.ರವಿ ಅವರೇ,? ಕಣ್ಣಿಗೆ ಪೊರೆ ಬಂದವರು ಕತ್ತಲಲ್ಲಿ ಕಾರು ಚಲಾಯಿಸಬಾರದು, ಅಪಘಾತವಾಗಿ ಅಮಾಯಕರು ಜೀವ ಕಳೆದುಕೊಳ್ಳುತ್ತಾರೆ. ಪೊರೆ ಬಂದಿದ್ದರೆ ಕ್ಯಾಟಾರಕ್ಟ್ ಮಾಡಿಸಿಕೊಳ್ಳಿ. ಸಾರ್ವಜನಿಕರ ಜೀವ ಮುಖ್ಯ ಎಂದು ಸಿದ್ದರಾಮಯ್ಯ ಟ್ವೀಟ್ ಮೂಲಕ ತಿರುಗೇಟು ನೀಡಿದ್ದಾರೆ.

Join Whatsapp