ವಕ್ಫ್ ಬೋರ್ಡ್ ಡೇಂಜರಸ್ ಬೋರ್ಡ್ ಎಂದ ಮುತಾಲಿಕ್

Prasthutha|

ಮಂಗಳೂರು: ವಕ್ಫ್ ಬೋರ್ಡ್ ನಿಂದ ದೇಶಕ್ಕೆ ಅಪಾಯವಿದೆ. ಇದು ಡೇಂಜರಸ್ ಬೋರ್ಡ್. ಇದು ಲ್ಯಾಂಡ್ ಜಿಹಾದ್ ಮಾಡುತ್ತಿದ್ದು, ಇದನ್ನು ಕೇಂದ್ರ ಸರ್ಕಾರ ಕೂಡಲೇ ರದ್ದು ಮಾಡಬೇಕು. ಮುಂದಿನ ದಿನಗಳಲ್ಲಿ ಬ್ಯಾನ್ ವಕ್ಫ್ ಬೋರ್ಡ್ ಅಭಿಯಾನ ಹಮ್ಮಿಕೊಳ್ಳಲಾಗುವುದು ಎಂದು ಶ್ರೀ ರಾಮ ಸೇನೆ ಮುಖಂಡ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.

- Advertisement -

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಡೀ ಗ್ರಾಮವನ್ನು ವಕ್ಫ್ ಬೋರ್ಡ್ ಆಸ್ತಿ ಎಂದು ತಮಿಳುನಾಡಿನಲ್ಲಿ ಹೇಳಿದ್ದಾರೆ. ದೇಶದಲ್ಲಿ ಭೂ ಕಬಳಿಸಿ ವಕ್ಫ್ ಆಸ್ತಿ ಎಂದು ಹೇಳಲಾಗುತ್ತಿದೆ. ಬೆಳಗಾವಿಯ ಎಸ್ ಪಿ ಕಚೇರಿ, ವಿಜಯಪುರ ಡಿಸಿ ಆಫೀಸ್ ಕೂಡ ವಕ್ಫ್ ಆಸ್ತಿ ಎಂದು ಹೇಳಲಾಗಿದೆ. ರೈಲ್ವೆ, ಮಿಲಿಟರಿ ಬಿಟ್ಟರೆ ರಾಜ್ಯದಲ್ಲಿ ವಕ್ಫ್ ಬೋರ್ಡ್ ಆಸ್ತಿ ನಂಬರ್ ಒನ್ ಆಗಿದೆ. ಮೋಸದಿಂದ ಭೂಮಿ ಆಕ್ರಮಿಸಿ, ಕಬಳಿಸಿದ್ದರಿಂದ ಇದು ಸಾಧ್ಯವಾಗಿದೆ ಎಂದು ಅವರು ಆರೋಪಿಸಿದರು.

ಚಾಮರಾಜಪೇಟೆ ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಆಚರಿಸಬಾರದು ಎಂದು ಸುಪ್ರೀಂಕೋರ್ಟ್ ಗೆ ಹೋಗಿ ತಡೆಯಾಜ್ಞೆ ತರುವ ಅಹಂಕಾರ ತೋರಿಸಿದ್ದಾರೆ. ಇನ್ನು ನಿಮ್ಮೊಂದಿಗೆ ಸೌಹಾರ್ದವಿಲ್ಲ, ಇನ್ನೇನಿದ್ದರೂ ಸಂಘರ್ಷವೇ. ಶಾಂತವಾಗಿರುವ ಹಿಂದೂ ಸಮಾಜವನ್ನು ಕೆರಳಿಸುತ್ತಿದ್ದೀರಿ ಎಂದು ಅವರು ಹೇಳಿದರು.

- Advertisement -

ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣವನ್ನು ಎನ್ ಐಎಗೆ ಕೊಟ್ಟ ರಾಜ್ಯ ಸರ್ಕಾರದ ಕ್ರಮಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಪ್ರಮೋದ್ ಮುತಾಲಿಕ್, ಎನ್ ಐಎಯಲ್ಲಿ ನಮಗೆ ವಿಶ್ವಾಸವಿಲ್ಲ. ಪರೇಶ್ ಮೆಸ್ತಾ ಪ್ರಕರಣದಲ್ಲಿ ಎನ್ ಐಎ ಏನು ಮಾಡಿತು, ಆರೋಪಿಗಳ ಮನೆಗೆ  ಹೋಗಿ ಒಮ್ಮೆಯೂ ವಿಚಾರಣೆ ನಡೆಸಿಲ್ಲ. ಆದ್ದರಿಂದ ನೆಟ್ಟಾರು ಪ್ರಕರಣದ ಆರೋಪಿಗಳ ವಿರುದ್ಧ ಕೋಕಾ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿದರು.

Join Whatsapp