ಪೌರತ್ವ ತಿದ್ದುಪಡಿ ಕಾಯಿದೆ ವಿರೋಧಿ ಹೋರಾಟಗಾರರಿಗೆ ಮತ್ತೆ ನೋಟೀಸ್ ಜಾರಿ !

Prasthutha|

ಲಕ್ನೋ: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಪ್ರತಿಭಟನಾಕಾರರಿಗೆ ನೀಡಲಾಗಿದ್ದ ಎಲ್ಲಾ ವಸೂಲಾತಿ ನೋಟಿಸ್‌ಗಳನ್ನು ಹಿಂಪಡೆದಿರುವುದಾಗಿ ಸುಪ್ರೀಂ ಕೋರ್ಟ್‌ಗೆ ತಿಳಿಸಿದ ಕೆಲವೇ ದಿನಗಳ ಬಳಿಕ, ಉತ್ತರ ಪ್ರದೇಶ ಸರ್ಕಾರ ಕೆಲ ಪ್ರತಿಭಟನಾಕಾರರ ವಿರುದ್ಧ ಹೊಸ ವಿಚಾರಣೆಯನ್ನು ಪ್ರಾರಂಭಿಸಿದೆ.
ಕ್ಲೈಮ್ಸ್ ಟ್ರಿಬ್ಯೂನಲ್ ಮುಂದೆ ಹಾಜರಾಗುವಂತೆ ಪ್ರತಿಭಟನಾಕಾರರು ನೋಟಿಸ್ ಪಡೆದಿದ್ದಾರೆ ಎಂದು ಪ್ರಮುಖ ಆಂಗ್ಲ ದಿನಪತ್ರಿಕೆ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ಪ್ರತಿಭಟನಾಕಾರರ ವಿರುದ್ಧ ಯಾಕೆ ಸೂಕ್ತ ಕ್ರಮಗಳನ್ನು ಕೈಗೊಳ್ಳಬಾರದು ಎಂಬುವುದಕ್ಕೆ ಕಾರಣ ನೀಡುವಂತೆ ಲಕ್ನೋ ವಲಯದ ಕ್ಲೈಮ್ಸ್ ಟ್ರಿಬ್ಯೂನಲ್‌ನ ಅಧ್ಯಕ್ಷ ಪ್ರೇಮ್ ಕಲಾ ಸಿಂಗ್ ನೋಟೀಸ್ ಜಾರಿಮಾಡಿದ್ದಾರೆ.

- Advertisement -

ಯೋಗಿ ಆದಿತ್ಯನಾಥ್ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಛೀಮಾರಿ ಹಾಕಿದ ಬಳಿಕ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಪ್ರತಿಭಟನಾಕಾರರಿಗೆ ನೀಡಲಾಗಿದ್ದ ಎಲ್ಲಾ ವಸೂಲಾತಿ ನೋಟಿಸ್‌ಗಳನ್ನು ಹಿಂಪಡೆದಿರುವುದಾಗಿ ಸುಪ್ರೀಂಗೆ ಉತ್ತರಪ್ರದೇಶ ಸರ್ಕಾರ ತಿಳಿಸಿತ್ತು.
2019 ರ ಕೊನೆಯಲ್ಲಿ CAA ವಿರೋಧಿ ಹೋರಾಟದ ವೇಳೆ ಉಂಟಾದ ಆಸ್ತಿಪಾಸ್ತಿಗಳ ನಷ್ಟಗಳನ್ನು ಭರಿಸಲು ಪ್ರತಿಭಟನಾಕಾರರ ಆಸ್ತಿಗಳನ್ನು ವಶಪಡಿಸಿಕೊಳ್ಳುವ ನಿರ್ಧಾರವನ್ನು ಯೋಗಿ ಆದಿತ್ಯನಾಥ್ ಸರ್ಕಾರ ಪ್ರಕಟಿಸಿತು. ಗಲಭೆ ಆರೋಪ ಹೊತ್ತಿರುವ 130ಕ್ಕೂ ಅಧಿಕ ಮಂದಿಗೆ 50 ಲಕ್ಷ ರೂಪಾಯಿ ನಷ್ಟ ಪರಿಹಾರ ನೀಡುವಂತೆ ನೋಟಿಸ್ ಜಾರಿ ಮಾಡಲಾಗಿತ್ತು. ನೋಟಿಸ್‌ಗಳು ನಿರಂಕುಶವಾಗಿವೆ ಮತ್ತು ಆರು ವರ್ಷಗಳ ಹಿಂದೆ ನಿಧನರಾದ ವ್ಯಕ್ತಿಯ ಹೆಸರಿನಲ್ಲಿ ಮತ್ತು 90 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಕಳುಹಿಸಲಾಗಿದೆ ಎಂದು ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿದಾರರು ವಾದಿಸಿದ್ದರು

Join Whatsapp