ದೆಹಲಿ ಗಲಭೆ ಪ್ರಕರಣ | JNU ಮಾಜಿ ವಿದ್ಯಾರ್ಥಿ ನಾಯಕ ಉಮರ್ ಖಾಲಿದ್ ಗೆ ಜಾಮೀನು ನೀಡಿದ ದೆಹಲಿ ನ್ಯಾಯಾಲಯ
Prasthutha: April 15, 2021

►ಜಾಮೀನು ಸಿಕ್ಕರೂ ಜೈಲಿನಿಂದ ಬಿಡುಗಡೆಯಿಲ್ಲ !
ದೆಹಲಿ ಗಲಭೆಗೆ ಸಂಬಂಧಪಟ್ಟ ಆರೋಪದಲ್ಲಿ ಜೈಲಿನಲ್ಲಿದ್ದ ಮಾಜಿ ಜೆ ಎನ್ ಯು ವಿದ್ಯಾರ್ಥಿ ಉಮರ್ ಖಾಲಿದ್ ಗೆ ದೆಹಲಿ ಸೆಶನ್ಸ್ ನ್ಯಾಯಾಲಯ ಜಾಮೀನು ನೀಡಿ ಆದೇಶಿಸಿದೆ. 2020 ಫೆಬ್ರವರಿಯಲ್ಲಿ ಖಜೂರಿ ಖಾಸ್ ನಲ್ಲಿ ನಡೆದ ಗಲಭೆಗೆ ಸಂಬಂಧಿಸಿದಂತೆ ಉಮರ್ ಖಾಲಿದ್ ರನ್ನು ಕಳೆದ ಅಕ್ಟೋಬರ್ ನಲ್ಲಿ ಬಂಧಿಸಲಾಗಿತ್ತು. ಇದೀಗ ದೆಹಲಿ ಸೆಶನ್ಸ್ ನ್ಯಾಯಾಲಯದ ನ್ಯಾಯಾಧೀಶ ವಿನೋದ್ ಯಾದವ್ ಜಾಮೀನು ಮಂಜೂರು ಮಾಡಿದ್ದಾರೆ.
ಜಾಮೀನು ಲಭಿಸಿದರೂ ಉಮರ್ ಖಾಲಿದ್ ಇನ್ನೂ ಜೈಲಿನಲ್ಲೇ ಇರಬೇಕಾಗುತ್ತದೆ. ಗಲಭೆ ಪ್ರಕರಣದಲ್ಲಿ ದಾಖಲಾಗಿರುವ ಯುಎಪಿಎ ಕಾಯ್ದೆಯಲ್ಲಿ ಇನ್ನೂ ಜಾಮೀನು ದೊರೆಯಬೇಕಷ್ಟೇ. ಸರಕಾರದ ವಿರುದ್ದ ಪ್ರಕಟಿಸಿದ ಭಿನ್ನಾಭಿಪ್ರಾಯವನ್ನು ಹತ್ತಿಕ್ಕಲು ತನಿಖಾ ಸಂಸ್ಥೆ ದ್ವೇಷದಿಂದ ಖಾಲಿದ್ ಮೇಲೆ ಪ್ರಕರಣ ದಾಖಲಿಸಿದೆ ಎಂದು ಖಾಲಿದ್ ಪರ ವಕೀಲ ತ್ರಿದೀಪ್ ಪಾಯಿಸ್ ವಾದಿಸಿದ್ದರು.
