ಕೊಳಕು ಮನಸ್ಥಿತಿಯ ವ್ಯಕ್ತಿಯನ್ನು ಪಠ್ಯ ಪರಿಷ್ಕರಣಾ ಸಮಿತಿ ಅಧ್ಯಕ್ಷನನ್ನಾಗಿ ಮಾಡಿ ಗೊಂದಲ ಸೃಷ್ಟಿಸಲಾಗಿದೆ: ಸಂಸದ ಜಿ.ಸಿ.ಚಂದ್ರಶೇಖರ್

Prasthutha|

ಬೆಂಗಳೂರು: ರಾಜ್ಯದಲ್ಲಿ ಪಠ್ಯ ಪುಸ್ತಕ ಪರಿಷ್ಕರಣಾ ಸಮಿತಿ ಮಾಡಿರುವ ಅನಾಹುತ ವಿಕೋಪಕ್ಕೆ ಹೋಗಿದ್ದರೂ ಸರ್ಕಾರ ನಿರ್ಲಕ್ಷ್ಯ ವಹಿಸಿದ್ದು, ಈ ಸಮಿತಿಯ ಕಾರ್ಯವೈಖರಿ ಕುರಿತು ಸಾಹಿತಿಗಳು, ಮಠಾಧೀಶರು ಹಾಗೂ ಕನ್ನಡಪರ ಸಂಘಟನೆಗಳು ಹೋರಾಟ ಮಾಡಿದರೂ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಕಾಂಗ್ರೆಸ್ ರಾಜ್ಯಸಭಾ ಸದಸ್ಯ ಜಿ.ಸಿ. ಚಂದ್ರಶೇಖರ್ ಆರೋಪಿಸಿದ್ದಾರೆ.

- Advertisement -

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಠ್ಯಪುಸ್ತಕ ಪರಿಷ್ಕರಣೆ ಮಾಡುವ ಸಮಿತಿಗೆ ಅದಕ್ಕೇ ಆದ ಗೌರವವಿದೆ. ಅದರದೇ ಆದ ತೂಕವಿದೆ. ಅದಕ್ಕೆ ಅರ್ಹವುಳ್ಳ ವ್ಯಕ್ತಿಗಳು ಅಧ್ಯಕ್ಷರಾಗಿ ನೇಮಕವಾಗುತ್ತಿದ್ದರು. ಈ ಸಮಿತಿಗೆ ಅದರದೇ ಆದ ಪ್ರಕ್ರಿಯೆಗಳು ಇರುತ್ತಿದ್ದವು. ಇದುವರೆಗೂ ಈ ಪಠ್ಯ ಪುಸ್ತಕ ಸಮಿತಿ ನೇಮಕ ವಿಚಾರದಲ್ಲಿ ಯಾವುದೇ ಗೊಂದಲ ಆಗಿರಲಿಲ್ಲ. ಈ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಈಗ ಆಯ್ಕೆಯಾಗಿರುವವರ ಹಿನ್ನೆಲೆ ನೋಡಿದರೆ ಕನ್ನಡದ ಬಗ್ಗೆ ಇರುವ ಅಭಿಮಾನ, ಬಾವುಟದ ಬಗ್ಗೆ ಅವರು ಕೊಟ್ಟಿರುವ ಹೇಳಿಕೆಗಳು, ಸಾಹಿತಿಗಳ ಬಗ್ಗೆ ಹಾಗೂ ರಾಷ್ಟ್ರಕವಿ ಬಗ್ಗೆ ಮಾಡಿರುವ ಉದ್ಧಟನ ಹಾಗೂ ಕೆಟ್ಟ ಅಭಿಪ್ರಾಯ ತೋರಿರುವ ಉದಾಹರಣೆ ಸಾಕಷ್ಟಿದೆ. ಇಂತಹ ಕೊಳಕು ಮನಸ್ಥಿತಿಯ ವ್ಯಕ್ತಿಯನ್ನು ಸಮಿತಿ ಅಧ್ಯಕ್ಷರನ್ನಾಗಿ ಮಾಡಿ ಪುಸ್ತಕ ಪರಿಷ್ಕರಣೆ ಮಾಡಿದರೆ ಆ ಸ್ಥಾನಕ್ಕೆ ಯಾವ ಬೆಲೆ ಸಿಗುತ್ತದೆ ಎಂಬ ವಿಚಾರವನ್ನು ಸರ್ಕಾರ ಯಾಕೆ ಅರ್ಥ ಮಾಡಿಕೊಂಡಿಲ್ಲ ಎಂದು ಅವರು ಪ್ರಶ್ನಿಸಿದರು.

ಅಧ್ಯಕ್ಷರಾಗಿರುವ ವ್ಯಕ್ತಿ ಮೆಟ್ರೋದಲ್ಲಿ ಕನ್ನಡ ಬಳಕೆ ವಿಚಾರ ಹಿಂದಿ ಹೇರಿಕೆ ವಿಚಾರ ಸಂದರ್ಭದಲ್ಲಿ ‘ನನ್ನ ಮೇಲೆ ಹೇರಿಕೆಯಾದ ಮೊದಲ ಭಾಷೆ ಕನ್ನಡ’ ಎಂದಿದ್ದಾರೆ. ಅಂತಹ ವ್ಯಕ್ತಿಯನ್ನು ಸಮಿತಿ ಅಧ್ಯಕ್ಷರನ್ನಾಗಿ ಮಾಡಿದ್ದಾರೆ. ಇದರ ಜತೆಗೆ, ಕನ್ನಡದ ಬಾವುಟದ ಬಗ್ಗೆ ಜನ ಭಾವನಾತ್ಮಕ ಸಂಬಂಧ ಹೊಂದಿದ್ದಾರೆ. ಇಂತಹ ಕನ್ನಡ ಬಾವುಟ ಬೇಕು ಎಂಬ ವಿಚಾರ ಚರ್ಚೆ ಸಂದರ್ಭದಲ್ಲಿ ಈತ ಹಗ್ಗದ ಮೇಲೆ ಇರುವ ಒಳಉಡುಪುಗಳನ್ನು ತೋರಿಸಿ ಇಲ್ಲಿಯೂ ಸಾಕಷ್ಟು ಬಾವುಟ ಹಾರಾಡುತ್ತಿವೆ ಎಂದು ಹೇಳಿ ನಾಡ ಬಾವುಟಕ್ಕೆ ಅಪಮಾನ ಮಾಡಿದ ದುರ್ದೈವಿ ಹಾಗೂ ಕೊಳಕು ಮನುಷ್ಯ ಈತ. ಇನ್ನು ಈತ ಕುವೆಂಪು ಅವರ ಬಗ್ಗೆಯು ಮಾತನಾಡಿದ್ದು, ಕುವೆಂಪು ಅವರು ಕರ್ನಾಟಕ ಏಕೀಕರಣಕ್ಕೂ ಮುನ್ನವೇ ದೇಶಕ್ಕೆ ಸ್ವಾತಂತ್ರ್ಯ ಬರುವ ಮುನ್ನ ಅಂದರೆ 1924ರಲ್ಲಿ ಭಾರತ ಜನನಿಯ ತನುಜಾತೆ ಜಯಹೇ ಕರ್ನಾಟಕ ಮಾತೆ ಎಂದು ಬರೆದು, ಆಗಲೇ ಭಾರತ ರಾಷ್ಟ್ರಕ್ಕೆ ಹಾಗೂ ಕರ್ನಾಟಕ ರಾಜ್ಯಕ್ಕೆ ಇದ್ದ ಬಾಂದವ್ಯವನ್ನು ವರ್ಣಿಸಿದ್ದರು. ಅದರ ಬಗ್ಗೆಯೂ ಅವಹೇಳನಕಾರಾಗಿ ಮಾತನಾಡಿದ್ದಾರೆ ಎಂದು ಸಂಸದರು ದೂರಿದರು.

- Advertisement -

ಈ ಅವಹೇಳನಕಾರಿ ಹೇಳಿಕೆ ನನ್ದಲ್ಲ ನನಗೆ ವಾಟ್ಸಪ್ ನಲ್ಲಿ ಫಾರ್ವರ್ಡ್ ಬಂದಿತ್ತು ಎಂದು ಸಮರ್ಥನೆ ನೀಡಿದ್ದಾರೆ. ವಾಟ್ಸಪ್ ನಲ್ಲಿ ಬಂದಿದ್ದನ್ನು ಪೋಸ್ಟ್ ಮಾಡಿದರೂ ಆ ವ್ಯಕ್ತಿಯ ವ್ಯಕ್ತಿತ್ವ ಎಂತಹದು ಎಂಬುದು ಸಾಬೀತಾಗುತ್ತದೆ. ಬಸವಣ್ಣನ ಬಗ್ಗೆ ಮಾತನಾಡಿದ ಹಿನ್ನೆಲೆಯಲ್ಲಿ ಆ ಸಮಾಜದ ಸ್ವಾಮೀಜಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕುವೆಂಪು ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ನಿರ್ಮಲಾನಂದ ಶ್ರೀಗಳು ಮುಖ್ಯಮಂತ್ರಿಗಳಿಗೆ ಒತ್ತಾಯಿಸಿದ್ದಾರೆ. ಸಮಿತಿಯ ಅಧ್ಯಕ್ಷನ ಪರಿಸ್ಥಿತಿ ಹೀಗಾದರೆ ಸಮಿತಿ ಕತೆ ಏನು? ಎಂದು ಅವರು ಪ್ರಶ್ನಿಸಿದರು.

ಈ ಪಠ್ಯ ಪುಸ್ತಕ ಪರಿಷ್ಕರಣಾ ಸಮಿತಿಯಲ್ಲಿ 9 ಸದಸ್ಯರಿದ್ದು, ಅದರಲ್ಲಿ 7 ಮಂದಿ ಒಂದೇ ಸಮುದಾಯಕ್ಕೆ ಸೇರಿದವರು. ರಾಜಾರಾಮ್ ಹೆಗಡೆ ಅಧ್ಯಕ್ಷರು, ಸತ್ಯಪ್ರಕಾಶ್- ವಿದ್ಯಾವರ್ತಕ ಸಂಘ, ರಂಗನಾಥ್- ರಾಷ್ಟ್ರೋತ್ಥಾನ, ಬಿ.ಕೆ ವಾಸುಕಿ- ವಿದ್ಯಾಭವನ, ಅನಂತ ಕೃಷ್ಣ ಭಟ್- ವಿಶ್ವಹಿಂದೂ ಪರಿಷತ್ ಮುಖಂಡರು, ವಿಠಲ ಪೊತೆದಾರ್- ಎಮಿತಿಕ್ ಸೊಸೈಟಿ ಸದಸ್ಯರು. ಇವರೆಲ್ಲರೂ ಒಂದೇ ಕೋಮಿಗೆ ಸೇರಿದವರಾಗಿದ್ದಾರೆ. ಈ ಸಮಿತಿಯಲ್ಲಿ ಮಹಿಳೆಯರಿಗೆ, ಬೇರೆ ವರ್ಗದವರಿಗೆ ಯಾವುದೇ ಸ್ಥಾನ ನೀಡಿಲ್ಲ. ಇನ್ನು ಈ ಸಮಿತಿ ಹೊಸದಾಗಿ ಸೇರಿಸಿರುವ 10 ಬರಹದಲ್ಲಿ 8 ಬರಹ ಒಂದೇ ಸಮುದಾಯಕ್ಕೆ ಸೇರಿದೆ. ಕೆ.ಬಿ ಹೆಡೆಗೆವಾರ್, ಗಜಾನನ ಶರ್ಮಾ, ಪರಮೇಶ್ವರ್ ಭಟ್, ಗಣೇಶ್ ಶತಾವದಾನಿ, ಬನ್ನಂಜೆ ಗೋವಿಂದಾಚಾರ್ ಹಾಗೂ ಚಿದಾನಂದ ಅವರ ಬರಹ ಸೇರಿಸಲಾಗಿದೆ. ಇನ್ನು ಹಿಂದುಳಿದ ವರ್ಗಕ್ಕೆ ಸೇರಿದ ಪಿ. ಲಂಕೇಶ್, ಅರವಿಂದ ಮಾಲಗತ್ತಿ, ಸಾರಾ ಅಬುಬಕರ್, ಎಲ್. ಬಸವರಾಜು, ಎನ್ ನೀಲಾ, ಬಿ.ಟಿ ಲಲಿತಾ ನಾಯಕ್ ಅವರ ಬರಹ ಕೈಬಿಟ್ಟಿದ್ದಾರೆ. ಇಷ್ಟೆಲ್ಲಾ ಆದರೂ ಸಚಿವರಾಗಲಿ, ಮುಖ್ಯಮಂತ್ರಿಗಳು ಈ ಬಗ್ಗೆ ಗಮನಹರಿಸಿಲ್ಲ. ನಾಗೇಶ್ ಅವರು ನಾವು ಪರಿಷ್ಕರಣೆ ನಿಲ್ಲಿಸಲು ಸಾಧ್ಯವಿಲ್ಲ ಎಂದು ಹೇಳುತ್ತಿದ್ದಾರೆ. ಜತೆಗೆ 27 ಮೇ, ಈ ಪುಸ್ತಕ ಎಲ್ಲೆಡೆ ವಿತರಿಸಬೇಕು ಎಂದು ಸಮಿತಿಯ ವ್ಯವಸ್ಥಾಪಕ ನಿರ್ದೇಶಕರು ಆದೇಶ ನೀಡಿದ್ದಾರೆ. ಬಸವಣ್ಣ ವಿಚಾರ ಕಡಿಮೆ ಮಾಡಿದ್ದು, ಧರ್ಮದ ವಿಚಾರದಲ್ಲಿ ಏರುಪೇರು ಬಂಡ ಕಾರಣ 2 ಸ್ವಾಮೀಜಿಗಳು ಮುಖ್ಯಮಂತ್ರಿಗಳಿಗೆ ಆಕ್ಷೇಪವ್ಯಕ್ತಪಡಿಸಿದ್ದಾರೆ.

ಹಂಪಾ ನಾಗರಾಜ್, ಪ್ರೊ. ಸಿದ್ದರಾಮಯ್ಯನರಿಂದ ಹಲವು ಸಾಹಿತಿಗಳು ತಮ್ಮ ಲೇಖನ ಹಿಂಪಡೆಯುತ್ತಿದ್ದಾರೆ. 10ನೆ ತರಗತಿ ಲೇಖಕಿ ತಮ್ಮ ಬರಹ ಹಿಂಪಡೆದಿದೆ. ಕಾರಣ 10ನೇ ತರಗತಿ ಪ್ರಥಮ ಭಾಷೆ ಕನ್ನಡ ಪುಸ್ತಕದಲ್ಲಿ ಒಂದು ಲೇಖನವಿದೆ. ಅದರಲ್ಲಿ ಮಹಿಳೆಯರಿಗೆ ಕಳಂಕ ತರುವ ಪದ್ಯ ಸೇರಿಸಲಾಗಿದೆ. ಹೀಗಾಗಿ ಲೇಖಕಿಯೊಬ್ಬರು ತಮ್ಮ ಲೇಖನ ಹಿಂಪಡೆದಿದ್ದಾರೆ. ಇನ್ನು ಅಂಬೇಡ್ಕರ್ ಅವರ ‘ಅಂಬೇಡ್ಕರ್ ಅವರು ಜಗತ್ತಿನ ಜಲತಂತ್ರಜ್ಞ, ವಾಯುತಜ್ಞರು, ವೈದ್ಯರು, ಕಂಪ್ಯೂಟರ್ ತಜ್ಞರು, ಪ್ರಾಧ್ಯಾಪಕರು, ವಕೀಲರು, ರಾಕೆಟ್ ತಂತ್ರಜ್ಞರು, ಪ್ರಪಂಚದಲ್ಲಿ ಚಕ್ರ ಮತ್ತು ಬೆಂಕಿ ಉಪಯೋಗ ಕಂಡುಹಿಡಿದವರು’ ಬಗ್ಗೆ ಪಠ್ಯದಲ್ಲಿ ಲೇವಡಿ ಮಾಡಿದ್ದಾರೆ. ಇಂತಹ ವಿಕೃತಿ ಮನಸ್ಥಿತಿಯ ವ್ಯಕ್ತಿಯನ್ನು ಅಧ್ಯಕ್ಷರನ್ನಾಗಿ ಹೇಗೆ ಮಾಡಿದರು? ಸಮಾಜದ ಪ್ರತಿ ವರ್ಗ ಈ ಸಮಿತಿ ವಿರುದ್ಧ ಧ್ವನಿ ಎತ್ತುತ್ತಿದ್ದರೂ ಸರ್ಕಾರ ಮಾತ್ರ ಮೌನವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸರ್ಕಾರಕ್ಕೂ ಇದೇ ರೀತಿ ಗಲಾಟೆ ವಾತಾವರಣ ಬೇಕಾಗಿದೆ. ಕಾರಣ, ಸರ್ಕಾರದ ಆಡಳಿತ ಹದಗೆಟ್ಟು ನಿಂತಿದೆ ಇಂತಹ ಸಂದರ್ಭದಲ್ಲಿ ಇಂತಹ ಗಲಭೆ ಸೃಷ್ಟಿಸಿ ತನ್ನ ವೈಫಲ್ಯ ಮುಚ್ಚಿಕೊಳ್ಳುವ ಹುನ್ನಾರವಾಗಿದೆ ಎಂದು ಅವರು ಟೀಕಿಸಿದರು.

Join Whatsapp