ಉಡುಪಿ: ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ|ಆರೋಪಿಗೆ ಜೀವಾವಧಿ ಶಿಕ್ಷೆ

Prasthutha|

ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ 3 ವರ್ಷಗಳ ಹಿಂದೆ ನಡೆದ ಬಾಲಕಿ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿ ಪೋಕ್ಸೋ ಆರೋಪಿಗೆ ಉಡುಪಿ ಜಿಲ್ಲಾ ಹೆಚ್ಚುವರಿ ಮತ್ತು ಸತ್ರ ನ್ಯಾಯಾಲಯದ ಪೋಕ್ಸೋ ತ್ವರಿತ ವಿಶೇಷ ನ್ಯಾಯಾಲಯವು ಜೀವಾವಧಿ ಜೈಲುಶಿಕ್ಷೆ ವಿಧಿಸಿ ಆದೇಶಿಸಿದೆ.

- Advertisement -

ಬೆಳ್ತಂಗಡಿ ತಾಲೂಕಿನ ವೇಣೂರು ನಿವಾಸಿ ರಾಧಾಕೃಷ್ಣ ಆಚಾರ್ಯ (26) ಶಿಕ್ಷೆಗೆ ಗುರಿಯಾದ ಆರೋಪಿ. ಆತ 17 ವರ್ಷ ಪ್ರಾಯದ ಬಾಲಕಿಯನ್ನು 2019ರಲ್ಲಿ ಇನ್‌ಸ್ಟಾಗ್ರಾಮ್‌ ಮೂಲಕ ಪರಿಚಯ ಮಾಡಿಕೊಂಡು ಎಪ್ರಿಲ್‌ ತಿಂಗಳಲ್ಲಿ ಬಾಲಕಿಯ ಮನೆಗೆ ಯಾರೂ ಇಲ್ಲದ ವೇಳೆ ಬಂದಿದ್ದು, ಸಲುಗೆಯಿಂದ ಮಾತನಾಡಿ ಬಲತ್ಕಾರವಾಗಿ ದೈಹಿಕ ಲೈಂಗಿಕ ದೌರ್ಜನ್ಯ ಎಸಗಿದ್ದ. ಅನಂತರ ಬೆದರಿಕೆ ಹಾಕಿದ್ದ. ಇದರಿಂದ ನೊಂದ ಬಾಲಕಿ ಗರ್ಭಿಣಿಯಾಗಿದ್ದು, ಈ ಬಗ್ಗೆ ವಿಚಾರಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಅದರಂತೆ ನೊಂದ ಬಾಲಕಿಯ ತಾಯಿ ನೀಡಿದ ದೂರಿನಂತೆ ಎಸ್ಸಿಎಸ್ಟಿ ದೌರ್ಜನ್ಯ ತಡೆ ಕಾಯ್ದೆಯಡಿಯೂ ಪ್ರಕರಣ ದಾಖಲಾಗಿತ್ತು. ಉಡುಪಿ ಡಿವೈಎಸ್ಪಿ ತನಿಖೆ ನಡೆಸಿದ್ದು, ಕಾರ್ಕಳ ಎಎಸ್ಪಿ ಪಿ.ಕೃಷ್ಣಕಾಂತ್‌ ಆರೋಪಿ ವಿರುದ್ಧ ದೋಷಾರೋಪಣ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.

ಒಟ್ಟು 30 ಸಾಕ್ಷಿಗಳ ಪೈಕಿ 18 ಸಾಕ್ಷಿಗಳ ವಿಚಾರಣೆ ನಡೆಸಿದ ನ್ಯಾಯಾಧೀಶ ಶ್ರೀನಿವಾಸ ಸುವರ್ಣ, ಆರೋಪಿಗೆ ಜೀವಾವಧಿ ಶಿಕ್ಷೆ ಮತ್ತು 10 ಸಾವಿರ ರೂ. ದಂಡ ವಿಧಿಸಿ ಆದೇಶ ನೀಡಿದರು. ಅದೇ ರೀತಿ ಆರೋಪಿಗೆ ಕಲಂ 376ರ ಅಡಿ 10 ವಷ ಜೈಲು ಮತ್ತು 10 ಸಾವಿರ ರೂ. ದಂಡ, ಪೋಕ್ಸೋ 6ರಡಿಯಲ್ಲಿ 10 ವರ್ಷ ಜೈಲು ಮತ್ತು 10 ಸಾವಿರ ರೂ. ದಂಡ, ಪೋಕ್ಸೋ 4ರ ಅಡಿಯಲ್ಲಿ 10 ವರ್ಷ ಜೈಲು ಮತ್ತು 10 ಸಾವಿರ ರೂ. ದಂಡ, 354(ಎ) ಅಡಿಯಲ್ಲಿ 1 ವರ್ಷ ಜೈಲು ಮತ್ತು 1000 ರೂ. ದಂಡ, 506 ಅಡಿಯಲ್ಲಿ 6 ತಿಂಗಳ ಜೈಲು ಮತು 500 ರೂ., ಅಕ್ರಮ ಪ್ರವೇಶಕ್ಕೆ 6 ತಿಂಗಳು ಜೈಲು ಮತ್ತು 500 ರೂ. ದಂಡ, ಎಸ್ಟಿಎಸ್ಸಿ ಕಾಯ್ದೆಯಡಿ 10 ಸಾವಿರ ರೂ. ದಂಡ ವಿಧಿಸಲಾಗಿದೆ.

- Advertisement -

ಬಾಲಕಿಗೆ ಪರಿಹಾರ
ದಂಡದ ಒಟ್ಟು ಮೊತ್ತ 42 ಸಾವಿರ ರೂ.ನಲ್ಲಿ 5 ಸಾವಿರ ರೂ. ಸರಕಾರಕ್ಕೆ ಮತ್ತು ಉಳಿದ ಹಣ ನೊಂದ ಬಾಲಕಿಗೆ ಪರಿಹಾರವಾಗಿ ನೀಡಬೇಕು ಹಾಗೂ ಸರಕಾರ ನೊಂದ ಬಾಲಕಿಗೆ ಒಂದು ಲಕ್ಷ ರೂ. ಪರಿಹಾರ ನೀಡುವಂತೆ ಆದೇಶದಲ್ಲಿ ತಿಳಿಸಲಾಗಿದೆ. ಪ್ರಾಸಿಕ್ಯೂಶನ್‌ ಪರ ಉಡುಪಿ ಪೋಕ್ಸೋ ನ್ಯಾಯಾಲಯದ ವಿಶೇಷ ಸರಕಾರಿ ಅಭಿಯೋಜಕ ವೈ.ಟಿ. ರಾಘವೇಂದ್ರ ವಾದಿಸಿದ್ದರು.


Join Whatsapp