‘ನಿರ್ಬಂಧ ಸಡಿಲಿಕೆ ಮಾಡಿರುವುದು ಸರ್ಕಾರವೇ ಹೊರತು ಕೋವಿಡ್ ಸೋಂಕಲ್ಲ’ : ನಿಯಮ ಉಲ್ಲಂಘಿಸುವವರಿಗೆ ಉಡುಪಿ ಜಿಲ್ಲಾಧಿಕಾರಿ ಎಚ್ಚರಿಕೆ

Prasthutha|

ಉಡುಪಿ: ರಾಜ್ಯದಲ್ಲಿ ಕೋವಿಡ್ ಸೋಂಕು ಕಡಿಮೆಯಾಗುತ್ತಿದ್ದಂತೆ ಸರ್ಕಾರ ಲಾಕ್ ಡೌನ್ ನಿಯಮಗಳನ್ನು ಸಡಿಲಿಕೆ ಮಾಡಿದ್ದು, ಈ ಮಧ್ಯೆ ಕೋವಿಡ್ ಮಾರ್ಗಸೂಚಿ ಉಲ್ಲಂಘನೆ ಮಾಡಿ ಕಾರ್ಯಕ್ರಮ ನಡೆಸುವವರಿಗೆ ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ಅವರು ಖಡಕ್ ಎಚ್ಚರಿಕೆ ನೀಡಿದ್ದಾರೆ.

- Advertisement -

ಈ ಬಗ್ಗೆ ಮಾತನಾಡಿರುವ ಅವರು, ನಿರ್ಬಂಧ ಸಡಿಲಿಕೆ ಮಾಡಿರುವುದು ಸರ್ಕಾರವೇ ಹೊರತು ಕೋವಿಡ್ ಸೋಂಕಲ್ಲ. ಹಾಗಾಗಿ ಸರ್ಕಾರದ ಆದೇಶ ಹೇಗಿದೆಯೋ ಅದೇ ರೀತಿ ಅನುಸರಿಸಬೇಕು. ಕೆಲವರು ಇದನ್ನು ದುರುಪಯೋಗ ಮಾಡುತ್ತಿದ್ದಾರೆ. ಹೋಟಲ್ ಗಳಲ್ಲಿ ಐದು ಗಂಟೆಯ ನಂತರವೂ ಅವಕಾಶ ನೀಡಲಾಗುತ್ತಿದೆ. ಮದುವೆ ಕಾರ್ಯಕ್ರಮಗಳಲ್ಲಿ ಹೆಚ್ಚು ಜನ ಸೇರುತ್ತಿದ್ದಾರೆ. ಇದು ಸರಿಯಲ್ಲ ಎಂದು ಹೇಳಿದ್ದಾರೆ.

ಈ ಸಮಯದಲ್ಲಿ ಯಾವುದೇ ಕಾರ್ಯಕ್ರಮ ನಡೆಸುವುದಕ್ಕೆ ಅವಕಾಶವಿಲ್ಲ. ಆದರೆ ಹಲವು ಕಡೆಗಳಲ್ಲಿ ಕಾರ್ಯಕ್ರಮ ನಡೆಸುತ್ತಿದ್ದಾರೆ. ಸಂಘ ಸಂಸ್ಥೆಗಳಿಗೆ ಕಾರ್ಯಕ್ರಮ ನಡೆಸಲು ಅವಕಾಶ ಕೊಟ್ಟವರು ಯಾರು? ಕಾನೂನು ಸಣ್ಣವರಿಗೂ ದೊಡ್ಡವರಿಗೂ ಎಲ್ಲರಿಗೂ ಒಂದೇ. ಎಲ್ಲರೂ ಕಾನೂನು ಪಾಲನೇ ಮಾಡಬೇಕು ಎಂದಿದ್ದಾರೆ.

- Advertisement -

ಯಾರು ಅನುಮತಿ ಇಲ್ಲದೆ ಕಾರ್ಯಕ್ರಮ ನಡೆಸುತ್ತಾರೋ ಅವರು ಎಷ್ಟು ದೊಡ್ಡವರಾದರೂ ಸಹ ಅವರ ವಿರುದ್ಧ ಕಾನೂನು ಕ್ರಮ ಜರುಗಿಸುತ್ತೇವೆ. ಯಾರೂ ಸಹ ಕಾರ್ಯಕ್ರಮ ನಡೆಸಬಾರದು ಎಂದು ಜಿಲ್ಲಾಧಿಕಾರಿ ಜಗದೀಶ್ ಎಚ್ಚರಿಕೆ ನೀಡಿದ್ದಾರೆ.

Join Whatsapp