ತ್ರಿಪುರಾ ಹಿಂಸಾಚಾರ| ಸತ್ಯಶೋಧನಾ ತಂಡದ ವಕೀಲರಿಗೆ UAPA ನೋಟೀಸ್

Prasthutha|


ಹೊಸದಿಲ್ಲಿ: ತ್ರಿಪುರಾ ಹಿಂಸಾಚಾರದ ಬಗ್ಗೆ ಸತ್ಯಶೋಧನಾ ವರದಿ ತಯಾರಿಸಿದ ತಂಡದ ಹಿರಿಯ ವಕೀಲರಿಗೆ ಪಶ್ಚಿಮ ಅಗರ್ತಲಾ ಪೊಲೀಸ್ ಠಾಣೆಯು ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (ಯುಎಪಿಎ) ಅಡಿಯಲ್ಲಿ ಪ್ರಕರಣ ದಾಖಲಿಸಿ ನೋಟೀಸು ಜಾರಿ ಮಾಡಿದೆ.

- Advertisement -

ತ್ರಿಪುರಾ ಹಿಂಸಾಚಾರದ ಬಗ್ಗೆ ಸತ್ಯ ಶೋಧನಾ ವರದಿ ಬಿಡುಗಡೆ ಮಾಡಿದ್ದ ತಂಡದಲ್ಲಿದ್ದ ಇಬ್ಬರು ವಕೀಲರಾದ ದೆಹಲಿ ಮೂಲದ ಮುಖೇಶ್ ಮತ್ತು ರಾಷ್ಟ್ರೀಯ ಮಾನವ ಹಕ್ಕುಗಳ ಸಂಘಟನೆಗಳ (NCHRO) ಅನ್ಸಾರ್ ಇಂದೋರಿ ಅವರಿಗೆ ನೋಟೀಸು ಕಳುಹಿಸಲಾಗಿದ್ದು, ನವೆಂಬರ್ 10 ರೊಳಗೆ ಪಶ್ಚಿಮ ಅಗರ್ತಲಾ ಪೊಲೀಸ್ ಠಾಣೆಗೆ ಹಾಜರಾಗುವಂತೆ ಅವರಿಗೆ ನಿರ್ದೇಶನ ನೀಡಲಾಗಿದೆ.

ಮುಖೇಶ್ ಮತ್ತು ಇಂದೋರಿ ವಿರುದ್ಧ IPC ಯ ಹಲವಾರು ಸೆಕ್ಷನ್ ಗಳು, 153-A ಮತ್ತು B, 469, 503, 504 ಮತ್ತು 120B ಸೇರಿದಂತೆ ಇತರ ಆರೋಪಗಳನ್ನು ಹೊರಿಸಲಾಗಿದೆ ಎಂದು ವರದಿಯಾಗಿದೆ.

- Advertisement -

ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟೀಸ್ (ಪಿಯುಸಿಎಲ್) ಪರವಾಗಿ ಸುಪ್ರೀಂ ಕೋರ್ಟ್ ವಕೀಲ ಎಹ್ತೇಶಾಮ್ ಹಶ್ಮಿ, ಡೆಮಾಕ್ರಸಿ ಪರ ವಕೀಲರಾದ ಅಮಿತ್ ಶ್ರೀವಾಸ್ತವ್, ವಕೀಲರಾದ ಅನ್ಸಾರ್ ಇಂದೋರಿ ಮತ್ತು ಮುಖೇಶ್ ಅವರನ್ನೊಳಗೊಂಡ ತಂಡವು ತ್ರಿಪುರಾದಲ್ಲಿ ಮುಸ್ಲಿಮರ ವಿರುದ್ಧದ ಕೋಮು ಹಿಂಸಾಚಾರದ ಕುರಿತು ತಮ್ಮ ಸಂಶೋಧನಾ ವರದಿಯನ್ನು ಬಿಡುಗಡೆ ಮಾಡಿತ್ತು.

ಈ ಕುರಿತು ಪ್ರತಿಕ್ರಿಯಿಸಿದ ವಕೀಲ ಮುಖೇಶ್, “30ನೇ ಅಕ್ಟೋಬರ್ 2021 ರಿಂದ ನವೆಂಬರ್ 1, 2021 ರವರೆಗೆ, ರಾಜ್ಯದಲ್ಲಿ ಭುಗಿಲೆದ್ದಿರುವ ಕೋಮುಗಲಭೆಯ ವರದಿಗಳನ್ನು ಪರಿಶೀಲಿಸಲು ತ್ರಿಪುರಾಕ್ಕೆ ತೆರಳಿದ ಸತ್ಯಶೋಧನಾ ತಂಡದ ಭಾಗವಾಗಿದ್ದೇವೆ. ನಾವು ನೋಡಿದ್ದನ್ನು ನಾನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದೇನೆ. ನಾವು ದೆಹಲಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ್ದೇವೆ ಮತ್ತು ನಂತರ ಕಾರ್ಯಕ್ರಮದ ಫೇಸ್ಬುಕ್ ಲೈವ್ ಮಾಡಿದೆವು. ಈ ಫೇಸ್ಬುಕ್ ಲೈವ್ ನಲ್ಲಿ ಅವರಿಗೆ ಸಮಸ್ಯೆ ಇದೆ ಎಂದು ನಾನು ಭಾವಿಸುತ್ತೇನೆ” ಎಂದಿದ್ದಾರೆ.

ತ್ರಿಪುರಾ ಹಿಂಸಾಚಾರದ ಕುರಿತು ಮಂಗಳವಾರ ಸುಪ್ರೀಮ್ ಕೋರ್ಟ್ ನ ವಕೀಲರು ಮತ್ತು ಮಾನವಹಕ್ಕು ಸಂಘಟನೆಯ ಒಕ್ಕೂಟ ಸತ್ಯಶೋಧನ ವರದಿ ಮಾಡಿತ್ತು.

51 ಕಡೆಗಳಲ್ಲಿ ಮುಸ್ಲಿಮರ ಮೇಲೆ ಗಂಭೀರ ಹಲ್ಲೆ ಮತ್ತು 12 ಮಸೀದಿಗಳನ್ನು ಧ್ವಂಸಗೊಳಿಸಿದೆ ಎಂಬ ಆಘಾತಕಾರಿ ಅಂಶವನ್ನು ವರದಿ ಬಹಿರಂಗಪಡಿಸಿತ್ತು.

ಬಿಜೆಪಿ ಸರ್ಕಾರ ತ್ರಿಪುರಾ ಮುಸ್ಲಿಮರ ಮೇಲಿನ ಪೂರ್ವಯೋಜಿತ ಹಿಂಸಾಚಾರವನ್ನು ತಡೆಯುವ ಬದಲು ಹಿಂದುತ್ವ ಗಲಭೆಕೋರರನ್ನು ಪ್ರಚೋದಿಸಿದೆ ಎಂದು ಸತ್ಯಶೋಧನ ತಂಡ ಆರೋಪಿಸಿದೆ.

“ತ್ರಿಪುರಾದಲ್ಲಿ ಮಾನವೀಯತೆಯ ದಾಳಿ, ಮುಸ್ಲಿಮ್ ಜೀವಕ್ಕೆ ಸಂಬಂಧಿಸಿದೆ” ಎಂಬ ಶೀರ್ಷಿಕೆಯಲ್ಲಿ ತಯಾರಿಸಿದ ಸತ್ಯಶೋಧನಾ ವರದಿಯನ್ನು ತಂಡದ ಸದಸ್ಯರು ನವದೆಹಲಿಯ ಪ್ರೆಸ್ ಕ್ಲಬ್ ಆಫ್ ಇಂಡಿಯಾದಲ್ಲಿ ಬಿಡುಗಡೆಗೊಳಿಸಿದರು.

 ದೇಶಭಕ್ತಿಯ ಸೋಗಿನಲ್ಲಿ ರಾಜ್ಯದೆಲ್ಲೆಡೆ ಹಿಂಸೆಯನ್ನು ಹರಿಯಬಿಡಲಾಗಿದ್ದು, ಬಿಜೆಪಿಯ ರಾಜಕೀಯ ಹಿತಾಸಕ್ತಿಯನ್ನು ಬೆಳೆಸುವ ನಿಟ್ಟಿನಲ್ಲಿ ಹಿಂಸಾಚಾರನ್ನು ತಡೆಗಟ್ಟುವಲ್ಲಿ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ ಎಂದು ವರದಿ ಪ್ರತಿಪಾದಿಸಿದೆ.

ನೆರೆಯ ರಾಷ್ಟ್ರ ಬಾಂಗ್ಲಾದೇಶದಲ್ಲಿ ನಡೆದ ಗಲಭೆಯನ್ನು ಮುಂದಿಟ್ಟುಕೊಂಡು ತ್ರಿಪುರಾದ ಪಾಣಿಸಾಗರದಲ್ಲಿ 12 ಮಸೀದಿ ಧ್ವಂಸ, 51 ಕಡೆಗಳಲ್ಲಿ ಮುಸ್ಲಿಮರ ಮೇಲೆ ದಾಳಿ, ಸಿ.ಆರ್.ಪಿ.ಎಫ್ ಪಡೆಯಿಂದ ಹಿಂಸಾಚಾರ, ಕುರಾನ್ ಗೆ ಬೆಂಕಿ ಹಚ್ಚುವಿಕೆ ಸೇರಿದಂತೆ ವ್ಯಾಪಕ ಹಿಂಸಾಚಾರವನ್ನು ನಡೆಸಲಾಗಿದೆ ಎಂದು ಸ್ಥಳೀಯ ನಿವಾಸಿ ಮುನಾವರ್ ಅಲಿ ಸತ್ಯಶೋಧನ ತಂಡಕ್ಕೆ ಮಾಹಿತಿ ನೀಡಿದ್ದರು.

ಸತ್ಯಶೋಧನಾ ತಂಡದಲ್ಲಿ ಸುಪ್ರೀಮ್ ಕೋರ್ಟ್ ನ ವಕೀಲರಾದ ಇಹ್ತಿಶಾಮ್ ಹಶ್ಮಿ, ಅಮಿತ್ ಶ್ರೀವಾಸ್ತವ್ (ಸಮನ್ವಯ ಸಮಿತಿ, ಪ್ರಜಾಪ್ರಭುತ್ವಕ್ಕಾಗಿ ವಕೀಲರು), ಅನ್ಸಾರ್ ಇಂದೋರಿ (ಕಾರ್ಯದರ್ಶಿ NCHRO) ಮುಖೇಶ್ (ಪಿ.ಯು.ಸಿ.ಎಲ್, ದೆಹಲಿ) ಇದ್ದರು.

Join Whatsapp