ಸಿದ್ದು, ಎಚ್ ಡಿಕೆ, ಡಿಕೆಶಿ, ಅಮೀನ್ ಮಟ್ಟು, ನಿಜಗುಣಾನಂದ ಸ್ವಾಮೀಜಿ , ಕುಂವಿ ಸೇರಿದಂತೆ ರಾಜ್ಯದ 61 ಗಣ್ಯರಿಗೆ ಕೊಲೆ ಬೆದರಿಕೆ ಪತ್ರ

Prasthutha|

ಹೊಸಪೇಟೆ: ರಾಜ್ಯದ ಪ್ರಮುಖ ಸ್ವಾಮೀಜಿಗಳು, ರಾಜಕಾರಣಿಗಳು, ಸಾಹಿತಿಗಳು ಸೇರಿದಂತೆ 61 ಮಂದಿ ಗಣ್ಯರಿಗೆ ಜೀವಬೆದರಿಕೆ ಹಾಕಿ ಪತ್ರವೊಂದು ಸಾಹಿತಿ ಕುಂ.ವೀರಭದ್ರಪ್ಪ ಅವರ ಮನೆ ವಿಳಾಸಕ್ಕೆ ದುಷ್ಕರ್ಮಿಗಳು ಕಳುಹಿಸಿದ್ದಾರೆ. ಶುಕ್ರವಾರ ಕೊಟ್ಟೂರಿನಲ್ಲಿರುವ ಸಾಹಿತಿ ಕುಂ. ವೀರಭದ್ರಪ್ಪನವರ ಮನೆಗೆ ಈ ಪತ್ರ ಬಂದಿದ್ದು, ಒಂದೂವರೆ ತಿಂಗಳೊಳಗೆ ಅವರ ಮನೆಗೆ ಬಂದ ಎರಡನೇ ಜೀವ ಬೆದರಿಕೆ ಪತ್ರ ಇದಾಗಿದೆ.

- Advertisement -


ಈ ಪತ್ರವನ್ನು ಚಿತ್ರದುರ್ಗದಿಂದ ಕಳಿಸಿರುವುದು ದೃಢಪಟ್ಟಿದೆ. ಈ ಹಿಂದಿನಂತೆಯೇ ಕೈಬರಹದಲ್ಲಿ ಅದೇ ಧಾಟಿಯಲ್ಲಿ ಪತ್ರ ಬರೆಯಲಾಗಿದೆ. ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಶಾಸಕ ಎಚ್.ಡಿ. ಕುಮಾರಸ್ವಾಮಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ, ಪತ್ರಕರ್ತ ದಿನೇಶ ಅಮೀನ್‌ಮಟ್ಟು, ನಿಜಗುಣಾನಂದ ಸ್ವಾಮೀಜಿ, ನಿಡುಮಾಮಿಡಿ ವೀರಭದ್ರ ಚನ್ನಮಲ್ಲ ಸ್ವಾಮೀಜಿ, ಜಾನಪ್ರಕಾಶ ಸ್ವಾಮೀಜಿ, ಸಾಹಿತಿ ಬರಗೂರು ರಾಮಚಂದ್ರ, ಬಂಜಗೆರೆ ಜಯಪ್ರಕಾಶ್, ಕುಂ. ವೀರಭದ್ರಪ್ಪ ಸೇರಿದಂತೆ 61 ಜನರಿಗೆ ಜೀವ ಬೆದರಿಕೆ ಹಾಕಲಾಗಿದೆ.


ಸಾಹಿತಿಗಳು, ಪ್ರೊಫೆಸರ್‌ಗಳು, ಬುದ್ಧಿಜೀವಿಗಳು ಹಾಗೂ ನಿಮ್ಮ ದುಷ್ಟಕೂಟವು ದೇಶ ವಿರೋಧಿ, ಸಂವಿಧಾನ ವಿರೋಧಿ, ಹಿಂದೂ ಸಮಾಜ ಹೀಯಾಳಿಸುವ ಹೇಳಿಕೆಗಳನ್ನು ಕೊಡುತ್ತೀರಿ. ಮುಸ್ಲಿಂ ರಾಕ್ಷಸರ ಪರ ಮಾತನಾಡುತ್ತೀರಿ. ನೀವೆಲ್ಲ ಕ್ಷಮೆ ಕೇಳಬೇಕು. ಇಲ್ಲ ಸಾಯಲು ಸಿದ್ದರಾಗಿ, ಜೈ ಹಿಂದೂ ರಾಷ್ಟ್ರ, ಸಹಿಷ್ಟು ಹಿಂದೂ ಎಂಬ ಸಾಲಿನೊಂದಿಗೆ ಪತ್ರ ಕೊನೆಗೊಳ್ಳುತ್ತದೆ. ಮೊದಲನೇ ಜೀವ ಬೆದರಿಕೆ ಪತ್ರಕ್ಕೆ ಸಂಬಂಧಿಸಿದಂತೆ ಈಗಾಗಲೇ ಕುಂ. ವೀರಭದ್ರಪ್ಪನವರು ವಿಜಯನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಕೆ. ಅವರನ್ನು ಭೇಟಿಯಾಗಿ ದೂರು ಸಲ್ಲಿಸಿದ್ದರು. ಅದರ ತನಿಖೆ ಪ್ರಗತಿಯಲ್ಲಿರುವಾಗಲೇ ಮತ್ತೊಂದು ಜೀವ ಬೆದರಿಕೆ ಪತ್ರ ಬಂದಿದೆ.

Join Whatsapp