ಶಾರದೋತ್ಸವ ಫ್ಲೆಕ್ಸ್ ಹರಿದು ಕೋಮು ಗಲಭೆ ಸೃಷ್ಟಿಸಲು ಯತ್ನಿಸಿದ ನೈಜ ಆರೋಪಿಗಳನ್ನು ಬಂಧಿಸಿದ  ಪೊಲೀಸರ ಕ್ರಮ ಶ್ಲಾಘನೀಯ: ಎಸ್ ಡಿಪಿಐ

Prasthutha|

►ಈ ಘಟನೆಯ ಹಿಂದಿನ ಸೂತ್ರಧಾರರನ್ನೂ ಬಂಧಿಸಿ: ಅಬೂಬಕ್ಕರ್ ಕುಳಾಯಿ

- Advertisement -

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ವಾಮಂಜೂರಿನಲ್ಲಿ ಶಾರದೋತ್ಸವ ಪ್ರಯುಕ್ತ ಹಾಕಿದ್ದ ಬ್ಯಾನರ್ ಅನ್ನು ರಾತ್ರಿ ವೇಳೆಯಲ್ಲಿ ಹರಿದು ಹಾನಿಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಿಷ್ಪಕ್ಷಪಾತ ತನಿಖೆ ನಡೆಸಿ ನೈಜ ಆರೋಪಿಗಳಾದ ಸಂಘಪರಿವಾರದ ಮೂವರು ಕಾರ್ಯಕರ್ತರನ್ನು ಬಂಧಿಸಿ ಸಂಭಾವ್ಯ ಅನಾಹುತವನ್ನು ತಪ್ಪಿಸಿದ ಪೋಲೀಸರ ಕ್ರಮ ಸ್ವಾಗತಾರ್ಹ ಎಂದು ಎಸ್ ಡಿಪಿಐ ದ.ಕ ಜಿಲ್ಲಾಧ್ಯಕ್ಷ ಅಬೂಬಕ್ಕರ್ ಕುಳಾಯಿ ತಿಳಿಸಿದ್ದಾರೆ.

ಸಮಾಜದಲ್ಲಿ ಅಶಾಂತಿ ಸೃಷ್ಟಿಸುವ ದುರುದ್ದೇಶದಿಂದ  ಸಂಘಪರಿವಾರದ ಕಾರ್ಯಕರ್ತರು ರಾತ್ರೋರಾತ್ರಿ ಫ್ಲೆಕ್ಸ್ ಹರಿದು ಹಾಕಿ ಪ್ರಕ್ಷುಬ್ಧ ವಾತಾವರಣ ಸೃಷ್ಟಿಸಿದ್ದು, ಈ ಮೂಲಕ ಮತ್ತೊಮ್ಮೆ ನಿರ್ದಿಷ್ಟ ಸಮುದಾಯದ ವಿರುದ್ಧ ಸಂಶಯ ಬರುವಂತೆ ಮಾಡಿ ಕೋಮು ಗಲಭೆ ನಡೆಸುವ ಹುನ್ನಾರ ನಡೆಸಿರುವುದು ಮೇಲ್ನೋಟಕ್ಕೆ ಭಾಸವಾಗುತ್ತದೆ. ಪೊಲೀಸ್ ಇಲಾಖೆಯ ನಿಷ್ಪಕ್ಷಪಾತ ತನಿಖೆಯಿಂದ ನೈಜ ಆರೋಪಿಗಳ ಬಂಧನವಾಗಿದೆ ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

- Advertisement -

ಸಂಘಪರಿವಾರದ ಕಿಡಿಗೇಡಿಗಳು ಈ ಹಿಂದೆಯೂ ಈ ರೀತಿಯಾಗಿ ಹಿಂದೂ ದೇವರುಗಳನ್ನು ಮತ್ತು ಧರ್ಮವನ್ನು ಅವಹೇಳನ ಮಾಡುವ ಕೃತ್ಯಗಳು ನಡೆಸಿ ಅದನ್ನು ನಿರ್ದಿಷ್ಟ ಸಮುದಾಯದ ತಲೆಗೆ ಕಟ್ಟಿ ಗಲಭೆ ನಡೆಸಿದ ಇತಿಹಾಸವಿದೆ. ಈ ಘಟನೆಯಲ್ಲೂ ಸಂಘಪರಿವಾರದ ಕಾರ್ಯಕರ್ತರು ತಮ್ಮ ದುಷ್ಕೃತ್ಯವನ್ನು ಮರೆಮಾಚುವ ದೃಷ್ಟಿಯಿಂದ ಠಾಣೆಗೆ ಮುತ್ತಿಗೆ ಹಾಕಿದ್ದರು. ಒಟ್ಟಾರೆಯಾಗಿ ಸಂಘಪರಿವಾರದ ಉದ್ದೇಶ ನಿರಂತರವಾಗಿ ಸಮಾಜದಲ್ಲಿ ಅಶಾಂತಿ ಸೃಷ್ಟಿಸುವುದು, ಆ ಮೂಲಕ ರಾಜಕೀಯ ಲಾಭ ಪಡೆಯುವುದಾಗಿದೆ. ಇವರಿಗೆ ಧರ್ಮ, ನೀತಿ ,ಶಿಸ್ತು, ಮಾನವೀಯತೆ ಏನು ಇಲ್ಲ. ಭಾವನಾತ್ಮಕ ವಿಚಾರಗಳನ್ನು ಮುನ್ನೆಲೆಗೆ ತಂದು ಅಥವಾ ಇವರೇ ಕೃತಕವಾಗಿ ಸೃಷ್ಟಿಸಿ ಮುಗ್ಧ  ಹಿಂದುಗಳ ಮನಸ್ಸಿನಲ್ಲಿ ಪರಧರ್ಮ ಅಸಹಿಷ್ಣುತೆಯನ್ನು ಬಿತ್ತುವುದಾಗಿದೆ. ಇವರಿಂದಾಗಿ ಹಿಂದು ಧರ್ಮಕ್ಕೆ ಕೆಟ್ಟ ಹೆಸರು ಬಂದಿದೆ. ನೈಜ ಹಿಂದೂ ಸಹೋದರರು ಇವರ ಕಪಟ ಹಿಂದೂ ಪ್ರೇಮವನ್ನು ಅರಿತು ನಿರ್ಭೀತಿಯಿಂದ ಬಹಿಷ್ಕರಿಸಬೇಕೆಂದು ಅಬೂಬಕ್ಕರ್ ಕುಳಾಯಿ ಕರೆ ನೀಡಿದ್ದಾರೆ.

 ಪೋಲಿಸ್ ಇಲಾಖೆಯು ಇಂತಹ ಕ್ರಿಮಿ ವಿಷಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು. ಅದೇ ರೀತಿ ಈ ಘಟನೆಯ ಪ್ರಕರಣದ ಸೂತ್ರಧಾರದ ಸಂಘಪರಿವಾರದ ಮುಖಂಡರನ್ನು ಬಂಧಿಸಿ ಕಾನೂನು ರೀತಿಯ ಕ್ರಮ ಕೈಗೊಳ್ಳಬೇಕೆಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.

Join Whatsapp