ದೂರುದಾರ ಯುವತಿಗೆ ಠಾಣಾ ಇನ್ಸ್’ಪೆಕ್ಟರ್ ಕಿರುಕುಳ

Prasthutha|

ಬೆಂಗಳೂರು: ವಂಚನೆ ಪ್ರಕರಣದಲ್ಲಿ ದೂರು ನೀಡಿದ್ದ ಮಹಿಳೆಗೆ ಕೊಡಿಗೇಹಳ್ಳಿ ಠಾಣೆ ಇನ್‌ಸ್ಪೆಕ್ಟರ್ ಎನ್.ರಾಜಣ್ಣ ಕಿರುಕುಳ ನೀಡಿರುವ ಆರೋಪ ಕೇಳಿಬಂದಿದ್ದು, ಈ ಸಂಬಂಧ ತನಿಖೆ ನಡೆಸಿದ್ದ ಈಶಾನ್ಯ ವಿಭಾಗದ ಡಿಸಿಪಿ ಬಿ.ಎಂ. ಲಕ್ಷ್ಮಿ ಪ್ರಸಾದ್ ಅವರು ಪೊಲೀಸ್ ಕಮಿಷನರ್ ಪ್ರತಾಪ್ ರೆಡ್ಡಿಗೆ ಸೋಮವಾರ ವರದಿ ಸಲ್ಲಿಸಿದ್ದಾರೆ.

- Advertisement -

ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ವೀರೇಂದ್ರ ಬಾಬು ಎಂಬಾತನನ್ನು ಪೊಲೀಸರು ಬಂಧಿಸಿದ್ದರು. ಆತ, ಮಹಿಳೆ ಬಳಿ 15 ಲಕ್ಷ ಸಾಲ ಪಡೆದಿದ್ದ. ಅದನ್ನು ವಾಪಸು ಕೊಡದೇ ಸತಾಯಿಸುತ್ತಿದ್ದ. ಈ ಬಗ್ಗೆ ಮಹಿಳೆ, ಕೊಡಿಗೇಹಳ್ಳಿ ಠಾಣೆಗೆ ಪ್ರತ್ಯೇಕ ದೂರು ನೀಡಿದ್ದರು’ ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.

ದೂರು ನೀಡಲು ಠಾಣೆಗೆ ಹೋಗಿದ್ದ ವೇಳೆ ಯುವತಿಯ ಮೊಬೈಲ್ ನಂಬರ್ ಪಡೆದುಕೊಂಡಿದ್ದ ಇನ್‌ಸ್ಪೆಕ್ಟರ್ ರಾಜಣ್ಣ ನಂತರ ಸಂದೇಶ ಕಳುಹಿಸಲಾರಂಭಿಸಿದ್ದ. ‘ಭೇಟಿಯಾಗೋಣ ಬಾ’ ಎಂದು ಮಹಿಳೆಯನ್ನು ಕರೆಯುತ್ತಿದ್ದ. ಪ್ರಕರಣದ ಪ್ರಗತಿ ತಿಳಿಯಲೆಂದು ಯುವತಿ, ಮಾರ್ಚ್ 24ರಂದು ಠಾಣೆಗೆ ಹೋಗಿದ್ದರು. ಇನ್‌ಸ್ಪೆಕ್ಟರ್ ಯುವತಿಯನ್ನು ತನ್ನ ಕೊಠಡಿಗೆ ಕರೆಸಿ, ಡ್ರೈ ಫ್ರಟ್ಸ್ ಬಾಕ್ಸ್ ನೀಡಿದ್ದ. ಅಸಭ್ಯವಾಗಿಯೂ ವರ್ತಿಸಿದ್ದ. ಆತನಿಂದ ತಪ್ಪಿಸಿಕೊಂಡಿದ್ದ ಯುವತಿ, ಕೊಠಡಿಯಿಂದ ಹೊರಬಂದು ಠಾಣೆಯಲ್ಲಿದ್ದ ಮಹಿಳಾ ಸಬ್’ಇನ್‌ಸ್ಪೆಕ್ಟರ್‌ಗೆ ನಡೆದ ಘಟನೆ ತಿಳಿಸಿದ್ದರು.

- Advertisement -

ಕಿರುಕುಳದ ವಿಷಯವನ್ನು ಯಾರಿಗಾದರೂ ಹೇಳಿದರೆ ಮರ್ಯಾದೆ ಹೋಗುತ್ತದೆ. ಸುಮ್ಮನಿರು ಎಂದು ಸಬ್’ಇನ್‌ಸ್ಪೆಕ್ಟರ್ ಹೇಳಿದ್ದರು. ಠಾಣೆಯಿಂದ ತೆರಳಿದ್ದ ಯುವತಿ, ಸಂಬಂಧಿಕರಿಗೆ ವಿಷಯ ತಿಳಿಸಿದ್ದರು. ಅವರ ಮೂಲಕವೇ ಡಿಸಿಪಿ ಭೇಟಿಯಾಗಿ ದೂರು ನೀಡಿದ್ದರು.

ಎಸಿಪಿ ನೇತೃತ್ವದಲ್ಲಿ ಪ್ರಾಥಮಿಕ ತನಿಖೆ ನಡೆಸಲಾಗಿದೆ. ಕೆಲ ಪುರಾವೆಗಳೂ ಸಿಕ್ಕಿವೆ. ಎಸಿಪಿ ವರದಿಯನ್ನು ಪರಿಶೀಲಿಸಿ ಕಮಿಷನರ್ ಅವರಿಗೆ ಸಲ್ಲಿಸಲಾಗಿದೆ. ಕಮಿಷನರ್ ಅವರೇ ಮುಂದಿನ ಕ್ರಮ ಕೈಗೊಳ್ಳಲಿದ್ದಾರೆ’ ಎಂದು ಡಿಸಿಪಿ ಲಕ್ಷ್ಮಿಪ್ರಸಾದ್ ತಿಳಿಸಿದರು.

Join Whatsapp