ನಿಶ್ಚಿತಾರ್ಥದ ಸಿದ್ಧತೆಯಲ್ಲಿದ್ದ ಯುವಕನ ಭೀಕರ ಕೊಲೆ

Prasthutha|

ಬೆಂಗಳೂರು: ಒಂದು ತಿಂಗಳಿನಲ್ಲಿ ನಿಶ್ಚಿತಾರ್ಥ ಮಾಡಿಕೊಳ್ಳಬೇಕಿದ್ದ ಯುವಕನ ಕತ್ತು ಸೀಳಿ ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆಗೈದಿರುವ ದಾರುಣ ಘಟನೆ ನಗರದ ಹೊರವಲಯ ಜಿಗಣಿಯಲ್ಲಿ ನಿನ್ನೆ ರಾತ್ರಿ ನಡೆದಿದೆ.

- Advertisement -

ಕೇರಳ ಮೂಲದ ಸೋನು ಥಾಮಸ್ ಕೊಲೆಯಾದವರು. ಜಿಗಣಿ ಕೈಗಾರಿಕಾ ಪ್ರದೇಶದ ಟಾಟಾ ಅಡ್ವಾನ್ಸ್ ಕಂಪನಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸೋನು ಥಾಮಸ್ ರಾತ್ರಿ ಪಾಳಿಯ ಕೆಲಸ ಮುಗಿಸಿಕೊಂಡು ಮನೆಯತ್ತ ಹೊರಟಿದ್ದರು.

ಈ ವೇಳೆ ಸೋನು ಥಾಮಸ್ ಅವರನ್ನು ಅಡ್ಡಗಟ್ಟಿದ ಮೂವರು ದುಷ್ಕರ್ಮಿಗಳು, ಕುತ್ತಿಗೆಗೆ ಚಾಕು ಹಿಡಿದು ಮೊಬೈಲ್ ಕೊಡು ಎಂದು ಕೇಳಿದ್ದಾರೆ. ಮೊಬೈಲ್ ನೀಡಲು ಸೋನು ಥಾಮಸ್ ನಿರಾಕರಿಸಿದ್ದಕ್ಕೆ ಚಾಕುವಿನಿಂದ ಕುತ್ತಿಗೆ ಸೀಳಿ ಮೊಬೈಲ್ ಜೊತೆಗೆ ಆರೋಪಿಗಳು ಪರಾರಿಯಾಗಿದ್ದಾರೆ.

- Advertisement -

ಗಂಭೀರವಾಗಿ ಗಾಯಗೊಂಡ ಸೋನು ಥಾಮಸ್ ಅವರನ್ನು ಸ್ಥಳೀಯರು ಗಮನಿಸಿ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದರಾದರೂ ಆ ವೇಳೆಗಾಗಲೇ ಮೃತಪಟ್ಟಿದ್ದರು.

ಸುದ್ದಿ ತಿಳಿದ ತಕ್ಷಣವೇ ಸ್ಥಳಕ್ಕೆ ಧಾವಿಸಿದ ಗ್ರಾಮಾಂತರ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿ ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.

ಜಿಗಣಿ ಕೈಗಾರಿಕಾ ಪ್ರದೇಶದಲ್ಲಿ ಪೊಲೀಸರು ಯಾವುದೇ ರೀತಿಯಲ್ಲಿ ಗಸ್ತು ಸೇರಿದಂತೆ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Join Whatsapp