ಜನರ ಕೈಗೆ ಬಾವುಟ; ಕಾರ್ಪೊರೇಟ್ ಕೈಗೆ ವಿದ್ಯುತ್ ಕ್ಷೇತ್ರ- ಕೇಂದ್ರದ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ

Prasthutha|

ಬೆಂಗಳೂರು: ಮೋದಿಯವರ ಸರ್ಕಾರ ಜನದ್ರೋಹಿಯಾದ ಮತ್ತು ದೇಶದ್ರೋಹಿಯೂ ಆದ ವಿದ್ಯುಚ್ಛಕ್ತಿ [ತಿದ್ದುಪಡಿ] ಕಾಯ್ದೆ-2022 ಯನ್ನು ಲೋಕಸಭೆಯಲ್ಲಿ ಮಂಡಿಸಿ, ಅಂಬಾನಿ, ಅದಾನಿ ಮುಂತಾದ ಉದ್ಯಮಿಗಳ ಕೈಗೆ ಚಿನ್ನದ ಖಜಾನೆಗಳನ್ನೆ ಕೊಡಲು ಹೊರಟಿದೆ ಎಂದು ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.

- Advertisement -


ಈ ಸಂಬಂಧ ಸಿದ್ದರಾಮಯ್ಯ ಅವರು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದು, ವಿದ್ಯುತ್ ಕ್ಷೇತ್ರವು ನಮ್ಮ ಸಂವಿಧಾನದ 7ನೇ ಶೆಡ್ಯೂಲ್ ನಲ್ಲಿ ಸಮವರ್ತಿ ಪಟ್ಟಿಯಲ್ಲಿರುವ ಕಾರಣದಿಂದ ಇದರಲ್ಲಿ ಯಾವುದೆ ತಿದ್ದುಪಡಿ ತರಬೇಕಾದರೆ ರಾಜ್ಯಗಳ ಸಹಮತಿ ಕಡ್ಡಾಯ ಕುರಿತು ಶಾಸನಸಭೆಗಳಲ್ಲಿ ಚರ್ಚೆ ನಡೆಯಬೇಕು. ಆದರೆ ಕೇಂದ್ರ ಸರ್ಕಾರ ಒಕ್ಕೂಟ ತತ್ವಕ್ಕೆ ವಿರುದ್ಧವಾಗಿ ರಾಜ್ಯ ಸರ್ಕಾರಗಳಿಗೆ ಯಾವ ಮನ್ನಣೆಯನ್ನೂ ನೀಡದೆ ತಿದ್ದುಪಡಿ ತರಲು ಹೊರಟಿದೆ. ಜೊತೆಗೆ ಜನರ ಬದುಕಿನ ಮೇಲೆ ಪ್ರಭಾವ ಬೀರುವ ಯಾವುದೇ ಕಾಯ್ದೆಯ ಕುರಿತು ವ್ಯಾಪಕವಾಗಿ ಚರ್ಚೆ ಮಾಡಬೇಕು. ಆದರೆ ದೇಶವನ್ನು ಕೋವಿಡ್ ರೋಗವು ಬಾಧಿಸುತ್ತಿದ್ದಾಗ ಕರಡನ್ನು ಬಿಡುಗಡೆ ಮಾಡಿದ ಮೋದಿ ಸರ್ಕಾರ ಈಗ ಏಕಾಏಕಿ ಕಾಯ್ದೆಯನ್ನು ಸಂಸತ್ತಿನ ಮುಂದೆ ಮಂಡಿಸಿದೆ. ದೇಶದ ಜನರನ್ನು ಸಂಪೂರ್ಣವಾಗಿ ನಾಶಮಾಡುವ ಏಕೈಕ ಗುರಿ ಬಿಜೆಪಿ ಇದ್ದಂತಿದೆ. ಇದುವರೆಗೆ ಕಡು ಬಡವರ ಬದುಕಿಗೆ ಕೊಳ್ಳಿ ಇಡುತ್ತಿದ್ದ ಇವರು ಈಗ ನಗರ, ಗ್ರಾಮೀಣ ಭಾಗದ ಮಧ್ಯಮ ವರ್ಗ, ಮೇಲ್ ಮಧ್ಯಮವರ್ಗದವರ ಕುತ್ತಿಗೆಗೂ ನೇಣಿನ ಕುಣಿಕೆ ಬಿಗಿಗೊಳಿಸಲು ಹೊರಟಿದ್ದಾರೆ. ಇದರ ಭಾಗವಾಗಿಯೆ ವಿದ್ಯುತ್ ಕ್ಷೇತ್ರವನ್ನು ಖಾಸಗಿಯವರಿಗೆ ಒಪ್ಪಿಸಲು ಹೊರಟಿದೆ ಎಂದು ಹರಿಹಾಯ್ದರು.
ಜನರ ಕೈಗೆ ಪಾಲಿಸ್ಟರ್ ಧ್ವಜಗಳನ್ನು ಕೊಟ್ಟು ಅಂಬಾನಿ, ಅದಾನಿ ಮುಂತಾದವರ ಕೈಗೆ ಚಿನ್ನದ ಖಜಾನೆಗಳನ್ನೆ ಕೊಡಲು ಹೊರಟಿದೆ ಎಂದು ನಾನು ಹೇಳಿದ್ದು ಇದೇ ಕಾರಣಕ್ಕೆ. ಮೋದಿಯವರು ಕೆಲವೇ ಕಾರ್ಪೊರೇಟ್ ಕಂಪೆನಿಗಳಿಗೆ ಮಾತ್ರ ಅಚ್ಛೇದಿನ್ ತರಲು ನಿರಂತರವಾಗಿ ಕೆಲಸ ದುಡಿಯುತ್ತಿದ್ದಾರೆ ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ. ಹಿಂದಿನ ಸರ್ಕಾರಗಳು ಮತ್ತು ದೇಶದ ಜನ ಕಳೆದ 75 ವರ್ಷಗಳಿಂದ ಕಷ್ಟಪಟ್ಟು ನಿರ್ಮಿಸಿದ್ದ ಬಹುಪಾಲು ಸಂಪತ್ತನ್ನು ಅದಾನಿ, ಅಂಬಾನಿ, ಟಾಟಾ, ವೇದಾಂತ ಮುಂತಾದ ಕೆಲವೆ ಕೆಲವು ಜನರ ಕೈಗೆ ಕೊಟ್ಟು ಸಂಭ್ರಮಿಸುತ್ತಿರುವ ಮೋದಿಯವರ ಸರ್ಕಾರ ಈಗ ವಿದ್ಯುತ್ ಕ್ಷೇತ್ರವನ್ನು ಹರಾಜಿಗಿಟ್ಟಿದೆ ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.


ಇದುವರೆಗೂ ರೈತರು, ಬಡವರಿಗೆ ಉಚಿತವಾಗಿ ವಿದ್ಯುತ್ ನೀಡಲಾಗುತ್ತಿತ್ತು. ಸಣ್ಣ ಮತ್ತು ಗೃಹ ಕೈಗಾರಿಕೆಗಳಿಗೆ ರಿಯಾಯಿತಿ ದರದಲ್ಲಿ ವಿದ್ಯುತ್ ಸಪ್ಲೈ ಮಾಡಲಾಗುತ್ತಿತ್ತು. 1948 ರ ವಿದ್ಯುತ್ ನೀತಿಯು ಕಾರ್ಪೊರೇಟಿಗರಿಗೆ ಹೆಚ್ಚು ತೆರಿಗೆ ಹಾಕಿ ಬಡವರಿಗೆ ಕ್ರಾಸ್ ಸಬ್ಸಿಡಿ ನೀಡಲಾಗುತ್ತಿತ್ತು. ರೈತರಿಗೆ ಉಚಿತವಾಗಿ ವಿದ್ಯುತ್ ನೀಡಿದ್ದರಿಂದ ದೇಶ ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಿತು. ಇಂದು ಆಹಾರ ಧಾನ್ಯಗಳ ರಫ್ತಿನಲ್ಲಿ ಭಾರತ ಮುಂಚೂಣಿಯಲ್ಲಿ ಇರುವುದಕ್ಕೆ ರೈತರಿಗೆ ಉಚಿತವಾಗಿ ವಿದ್ಯುತ್ ಸರಬರಾಜು ಮಾಡಿದ್ದೂ ಮುಖ್ಯ ಕಾರಣ.
ಈಗ ರೈತರು ಬಳಸುತ್ತಿರುವ ಪಂಪ್ಸೆಖಟ್ಟುಗಳಿಗೆ, ಸಣ್ಣ ಮತ್ತು ಗೃಹ ಕೈಗಾರಿಕೆಗಳಿಗೆ, ನೇಕಾರಿಕೆ, ಚಮ್ಮಾರಿಕೆ, ಕಮ್ಮಾರಿಕೆ, ಮೀನುಗಾರಿಕೆಗೆ, ಬಡಗಿಗಳು ಮುಂತಾದವರು ವಿದ್ಯುತ್ ಬಳಸುತ್ತಿದ್ದರೆ ಅವರ ವಿದ್ಯುತ್ ಸಂಪರ್ಕಗಳಿಗೆ ಸ್ಮಾರ್ಟ್ ಮೀಟರುಗಳನ್ನು ಅಳವಡಿಸುವ ಮೂಲಕ ಈ ಎಲ್ಲ ದುಡಿಯುವ ಜನರ ಜುಟ್ಟನ್ನು ಖಾಸಗಿಯವರ ಕೈಗೆ ನೀಡಲು ಮೋದಿಯವರ ಸರ್ಕಾರ ಹೊರಟಿದೆ ಎಂದು ಅವರು ಹರಿಹಾಯ್ದರು.

- Advertisement -


ಸಣ್ಣ, ಗೃಹ ಕೈಗಾರಿಕೆಗಳಿಗೆ ಉಚಿತ ಅಥವಾ ರಿಯಾಯಿತಿ ದರದಲ್ಲಿ ವಿದ್ಯುತ್ ನೀಡಿದ್ದರಿಂದ ಇವುಗಳು ದೇಶದ ಕೋಟ್ಯಾಂತರ ಯುವಕರಿಗೆ ಉದ್ಯೋಗ, ಸ್ವಯಂ ಉದ್ಯೋಗ ನೀಡಿದ್ದವು. ಇಂದಿಗೂ ಕೂಡ ಶೇ.90 ರಷ್ಟು ಉದ್ಯೋಗವನ್ನು ಈ ಎರಡೆ ಕ್ಷೇತ್ರಗಳು ನೀಡಿವೆ. ಮೋದಿಯವರ ಸರ್ಕಾರದ ನೀತಿಗಳು ಈ ಎರಡೂ ಕ್ಷೇತ್ರಗಳ ಮೇಲೆ ನಿರಂತರವಾಗಿ ದಾಳಿ ನಡೆಸುತ್ತಿವೆ. ಕೊಳವೆ ಬಾವಿಗಳಾದಿಯಾಗಿ ಎಲ್ಲ ಸಂಪರ್ಕಗಳಿಗೆ ಮೀಟರ್ ಅಳವಡಿಸಿ, ಪೂರ್ತಿ ಶುಲ್ಕ ವಸೂಲಿಗೆ ಮುಂದಾಗುತ್ತಾರೆ. ಆ ನಂತರ ಅವರ ಖಾತೆಗಳಿಗೆ ಸಬ್ಸಿಡಿಯನ್ನು ಮರುಪಾವತಿಸಲಾಗುವುದು ಎಂದು ಹೇಳುತ್ತಿದ್ದಾರೆ. ಆದರೆ ಮೋದಿ ಸರ್ಕಾರ ಅಡುಗೆ ಸಿಲಿಂಡರಿಗೂ ಇದೇ ರೀತಿ ಹೇಳಿತ್ತು. ನೇರವಾಗಿ ಜನರ ಖಾತೆಗಳಿಗೆ ಮರುಪಾವತಿಸುವುದಾಗಿ ಹೇಳಿ ಮೋಸ ಮಾಡಿದೆ ಎಂದು ವಿಪಕ್ಷ ನಾಯಕ ಟೀಕಿಸಿದರು.
ವಿದ್ಯುತ್ ಕ್ಷೇತ್ರದ ಮೇಲಿನ ಸಂಪೂರ್ಣ ನಿಯಂತ್ರಣ ಸರ್ಕಾರದ್ದೆ ಆಗಿರಬೇಕು. ಇಲ್ಲದಿದ್ದರೆ ದೇಶವು ಅಧೋಗತಿಗೆ ಇಳಿದು ಹೋಗುತ್ತದೆ. ದೇಶದ ಅಭಿವೃದ್ಧಿ ವೇಗದ ಪ್ರಧಾನ ಮೂಲ ವಿದ್ಯುತ್ ಆಗಿದೆ. ಇಂಥ ಮೂಲ ಶಕ್ತಿಯನ್ನು ಜನರಿಗೆ ಸುಲಭದ ದರದಲ್ಲಿ, ಅಗತ್ಯವಿರುವ ಕಡೆ ಉಚಿತವಾಗಿ ನೀಡಲು ಸಾಧ್ಯವಾಗದಿದ್ದರೆ ಅಂಥ ದೇಶವು ಅಭಿವೃದ್ಧಿಯಾಗಲು ಸಾಧ್ಯವಿಲ್ಲ. ಎರಡು ದಶಕಗಳಲ್ಲಿ ವಿದ್ಯುತ್ ಕ್ಷೇತ್ರಕ್ಕೆ ಹಿಂದಿನ ಸರ್ಕಾರಗಳು ಅಪಾರ ಪ್ರಮಾಣದ ಸಂಪನ್ಮೂಲಗಳನ್ನು ವಿನಿಯೋಗಿಸಿವೆ. ಪವರ್ ಗ್ರಿಡ್ ಕಾರ್ಪೊರೇಷನ್ ಮುಂತಾದ ಸರ್ಕಾರಿ ಸ್ವಾಮ್ಯದ ಕಂಪೆನಿಗಳ ಮೇಲೆ ಸರ್ಕಾರ ಹೂಡಿಕೆ ಮಾಡಿದೆ. ಅಗತ್ಯ ಹೂಡಿಕೆಯನ್ನೆಲ್ಲ ಮಾಡಿದ ಮೇಲೆ ಖಾಸಗಿಯವರಿಗೆ ವಹಿಸಲು ಹೊರಟಿರುವುದು ಪರಮ ಜನದ್ರೋಹಕ್ಕೆ ಮಾದರಿ ಎಂದು ಅವರು ಹೇಳಿದರು.
ಈ ಹಿನ್ನೆಲೆಯಲ್ಲಿ ಯಾವುದೇ ಕಾರಣಕ್ಕೂ ವಿದ್ಯುತ್ ಕ್ಷೇತ್ರವನ್ನು ಕಾರ್ಪೊರೇಟ್ ಬಲಾಢ್ಯರಿಗೆ ಬಿಟ್ಟುಕೊಡಬಾರದು. ದೇಶದ ಪ್ರಗತಿಯ ಮೂಲವಾದ ವಿದ್ಯುತ್ನ ಮೇಲಿನ ನಿಯಂತ್ರಣವು ಸರ್ಕಾರಗಳ ಬಳಿಯೇ ಇರಬೇಕು. ಸರ್ಕಾರಗಳ ಬಳಿ ಇದ್ದರೆ ಮಾತ್ರ ಜನರಿಗೆ ಹಕ್ಕಿರುತ್ತದೆ. ಇಲ್ಲದಿದ್ದರೆ ಅದು ಅಂಗಡಿಯ ಸರಕಿನಂತಾಗುತ್ತದೆ. ಕಾರ್ಪೊರೇಟ್ ಕಂಪೆನಿಗಳು ಬಾಕಿ ಉಳಿಸಿಕೊಂಡಿರುವ ವಿದ್ಯುತ್ ಬಿಲ್ಲನ್ನು ವಸೂಲಿ ಮಾಡಬೇಕು. ಒಕ್ಕೂಟ ವ್ಯವಸ್ಥೆಯನ್ನು ದಮನಿಸಿ ಸರ್ವಾಧಿಕಾರಿ ಧೋರಣೆಯನ್ನು ಮೋದಿ ಸರ್ಕಾರ ಬಿಗಿಗೊಳಿಸುತ್ತಿದ್ದರೂ ರಾಜ್ಯದ ಬಿಜೆಪಿ ಸರ್ಕಾರವಾಗಲಿ, ಸಂಸದರುಗಳಾಗಲಿ ಒಂದಿಷ್ಟೂ ಪ್ರತಿಭಟಿಸದೆ ನಾಡಿನ ಜನರಿಗೆ ದ್ರೋಹ ಬಗೆಯಲಾಗುತ್ತಿದೆ. ಬಿಜೆಪಿಯ ಈ ಜನದ್ರೋಹಿ ಧೋರಣೆಯನ್ನು ಖಂಡಿಸಲೇಬೇಕಾಗಿದೆ. ಯಾವುದೇ ಕಾರಣಕ್ಕೂ ಇಂಥ ಕೆಟ್ಟ ಕಾನೂನನ್ನು ಜಾರಿಗೊಳಿಸಬಾರದು ಎಂದು ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

Join Whatsapp