ಹೈಕೋರ್ಟ್‌ ಆದೇಶ ಉಲ್ಲಂಘಿಸಿದ ಜಿಲ್ಲಾಡಳಿತ;  ಕಾರ್ಪೊರೇಟರ್‌ ಗಳ ಕೈಗೊಂಬೆಯಾದ ಮನಪಾ

Prasthutha|

ಮಂಗಳೂರು: ನಗರದ ನೆಹರೂ ಮೈದಾನದ ಫುಟ್ಬಾಲ್ ಗ್ರೌಂಡ್‌ನಲ್ಲಿ ಖಾಸಗಿ ಕಾರ್ಯಕ್ರಮ ನಡೆಸದಂತೆ ರಾಜ್ಯ ಹೈಕೋರ್ಟ್ ಆದೇಶಿಸಿದ್ದರೂ ಜಿಲ್ಲಾಡಳಿತ ಮತ್ತು ಮನಪಾ ಆಡಳಿತವು ಹೈಕೋರ್ಟ್‌ನ ಆದೇಶವನ್ನು ಉಲ್ಲಂಘಿಸಿದೆ  ಎಂದು ಸಾರ್ವಜನಿಕ ವಲಯದಲ್ಲಿ ಆರೋಪಗಳು ಕೇಳಿ ಬರುತ್ತಿವೆ.

- Advertisement -

ನೆಹರೂ ಮೈದಾನದಲ್ಲಿ ಸರ್ಕಾರಿ ಕಾರ್ಯಕ್ರಮ ಹಾಗೂ  ಕ್ರೀಡೆ ಹೊರತು ಬೇರೆ ಯಾವ ಖಾಸಗಿ ಕಾರ್ಯಕ್ರಮಕ್ಕೂ ಅವಕಾಶ ನೀಡಬಾರದು ಎಂದು ರಾಜ್ಯ ಹೈಕೋರ್ಟ್‌ನ ಮುಖ್ಯ ನ್ಯಾಯಾಧೀಶ ಅಭಯ್ ಎಸ್. ಹಾಗೂ ನ್ಯಾಯಾಧೀಶ ಎಸ್.ವಿಶ್ವನಾಥ ಶೆಟ್ಟಿ ಅವರು ಎಂದು 2020ರ ಡಿಸೆಂಬರ್ 16ರಂದು ಆದೇಶ ಹೊರಡಿಸಿದ್ದರು. ಆ ಬಳಿಕ ಸರಕಾರಿ ಕಾರ್ಯಕ್ರಮ ಹೊರತುಪಡಿಸಿ ಬೇರೆ ಯಾವುದೇ ಖಾಸಗಿ ಕಾರ್ಯಕ್ರಮಗಳು ನಡೆದಿರಲಿಲ್ಲ.

ಆದರೆ ಇತ್ತೀಚೆಗೆ ಜಿಲ್ಲಾಡಳಿತ ಮತ್ತು ಮನಪಾ ಆಡಳಿತವು ಸಾರ್ವಜನಿಕ ಗಣೇಶೋತ್ಸವಕ್ಕೆ ಅವಕಾಶ ನೀಡಿತ್ತು. ಇದೀಗ ಸಂಸದರು, ಶಾಸಕರು ಹಾಗೂ ಸ್ಥಳೀಯ ಶಾಸಕರ ಒತ್ತಾಸೆಯ ಮೇರೆಗೆ ಅಕ್ಟೋಬರ್ 2ರಂದು ಬೆಳಗ್ಗಿನಿಂದ ರಾತ್ರಿವರೆಗೆ ಪಿಲಿಪರ್ಬ ಕಾರ್ಯಕ್ರಮ ಆಯೋಜಿಸಲಾಗಿದ್ದು, ಈ ಮೂಲಕ ಹೈಕೋರ್ಟ್ ಆದೇಶವನ್ನು ಬಹಿರಂಗವಾಗಿ ಉಲ್ಲಂಘಿಸಲಾಗಿದೆ ಎಂಬ ಆಕ್ಷೇಪ ಕೇಳಿ ಬಂದಿದೆ.

- Advertisement -

ಈ ಹಿಂದೆ ಕೆಲವು ಖಾಸಗಿ ಸಂಘಟನೆಗಳು ಕಾರ್ಯಕ್ರಮ ನಡೆಸಲು ಜಿಲ್ಲಾಡಳಿತ, ಮನಪಾ ಆಡಳಿತಕ್ಕೆ ಮನವಿ ಸಲ್ಲಿಸಿದಾಗ ಹೈಕೋರ್ಟ್ ಆದೇಶವನ್ನು ನೆನಪಿಸಿದ್ದ ಅಧಿಕಾರಿಗಳು ಇದೀಗ ಸಾರ್ವಜನಿಕ ಗಣೇಶೋತ್ಸವ, ಹುಲಿ ಡ್ಯಾನ್ಸ್ ಕಾರ್ಯಕ್ರಮ ನಡೆಸುವಾಗ ಹೈಕೋರ್ಟ್ ಆದೇಶವನ್ನು ಮರೆತರೇ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಹೈಕೋರ್ಟ್‌ನ ಆದೇಶವನ್ನು ಪಾಲಿಸಬೇಕಾದ ದ.ಕ.ಜಿಲ್ಲಾಧಿಕಾರಿ, ಮಂಗಳೂರು ನಗರ ಪಾಲಿಕೆಯ ಆಯುಕ್ತರು ಸಂಸದರು, ಶಾಸಕರು ಕಾರ್ಪೊರೇಟರ್‌ ಗಳ  ಒತ್ತಡಕ್ಕೆ ಮಣಿದರೇ ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ.

Join Whatsapp