ಅಯೋಧ್ಯೆಯಲ್ಲಿ ಬಾಬರಿ ಮಸೀದಿ ಧ್ವಂಸಗೊಳಿಸುವ ವಿಚಾರ ಬಿಜೆಪಿಗೆ ತಿಳಿದೇ ಇರಲಿಲ್ಲವಂತೆ !

Prasthutha|

ನವದೆಹಲಿ: ಅಯೋಧ್ಯೆಯಲ್ಲಿ ಬಾಬರಿ ಮಸೀದಿ ಧ್ವಂಸಗೊಳಿಸುವ ವಿಚಾರ ಬಿಜೆಪಿಗೆ ತಿಳಿದೇ ಇರಲಿಲ್ಲ. ಮಸೀದಿಯನ್ನು ಧ್ವಂಸಗೊಳಿಸಿದ ಬಳಿಕವಷ್ಟೇ ಆ ಮಾಹಿತಿ ತಿಳಿದಿತ್ತು. ಅಲ್ಲಿ ಏನಾಗುತ್ತಿದೆ ಎಂಬ ಸುಳಿವು ಕೂಡ ನಮಗಿರಲಿಲ್ಲ ಎಂದು 1992ರಲ್ಲಿ ಬಿಜೆಪಿಯ ಮುಖ್ಯ ಸಚೇತಕರಾಗಿದ್ದ ಕೇಂದ್ರದ ಮಾಜಿ ಸಚಿವ, ಉತ್ತರ ಪ್ರದೇಶದ ಮಾಜಿ ರಾಜ್ಯಪಾಲ ರಾಮ್ ನಾಯಕ್ ಹೇಳಿದ್ದಾರೆ.

- Advertisement -


ಬಾಬರಿ ಮಸೀದಿ ಧ್ವಂಸಗೊಳಿಸಿದ ದಿನದ ಘಟನೆಗಳ ಬಗ್ಗೆ ‘ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನವೊಂದರಲ್ಲಿ, ರಾಮ್ ನಾಯಕ್ ಅವರು ಅಯೋಧ್ಯೆ ಘಟನೆಗೆ ಸಂಬಂಧಿಸಿದಂತೆ ಕೆಲವೊಂದು ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ. ನಾಯಕ್ ಅವರು ಬಿಜೆಪಿಯ ಕೇಂದ್ರ ಕಚೇರಿಯಲ್ಲಿ ಕುಳಿತುಕೊಂಡು ಅಯೋಧ್ಯೆಯಲ್ಲಿನ ಬೆಳವಣಿಗೆಗಳ ಬಗ್ಗೆ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಮಾಹಿತಿಗಳನ್ನು ನೀಡಿದ್ದರು.


ಬಾಬರಿ ಮಸೀದಿ ಧ್ವಂಸ ದಿನ ನಡೆಯುತ್ತಿದ್ದ ಬೆಳವಣಿಗೆ, ಭದ್ರತೆ ಬಗ್ಗೆ ಮಾಹಿತಿ ಪಡೆಯುತ್ತಿದ್ದೆ. ಆ ಸಂದರ್ಭದಲ್ಲಿ ಸಂವಹನ ಸುಲಭವಾಗಿರಲಿಲ್ಲ, ಮೊಬೈಲ್ ದೂರವಾಣಿಗಳು ಇರಲಿಲ್ಲ. ಸ್ಥಿರ ದೂರವಾಣಿ ಮೂಲಕ ಮಾಹಿತಿ ಪಡೆಯುತ್ತಿದ್ದೆವು. ಅಡ್ವಾಣಿ ಅವರು ಅಯೋಧ್ಯೆಯಲ್ಲಿದ್ದರೆ, ವಾಜಪೇಯಿ ದೆಹಲಿಯಲ್ಲೇ ಇದ್ದರು. ಎಷ್ಟು ಮಂದಿ ಕರಸೇವಕರನ್ನು ಅಯೋಧ್ಯೆ ಪ್ರವೇಶಿಸಲು ಬಿಟ್ಟರು, ಎಷ್ಟು ಮಂದಿ ಹೊರಗೆ ಇದ್ದಾರೆ ಎಂಬ ಮಾಹಿತಿ ಕಲೆ ಹಾಕುತ್ತಿದ್ದೆವು. ಅಡ್ವಾಣಿ ಅವರು ಹಾಗೂ ಪಕ್ಷದ ಇತರ ನಾಯಕರು ರ್ಯಾಇಲಿಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎಂಬ ಮಾಹಿತಿ ನಮಗೆ ದೊರೆತಿತ್ತು. ಆ ಬಳಿಕ ಏನಾಗಬಹುದು ಎಂಬ ಸುಳಿವು ಕೂಡ ನಮಗಿರಲಿಲ್ಲ. ಬಾಬರಿ ಮಸೀದಿ ಧ್ವಂಸಗೊಳಿಸಿದ ಬಳಿಕವಷ್ಟೇ ನಮಗೆ ಆ ಮಾಹಿತಿ ದೊರೆಯಿತು’ ಎಂದು ರಾಮ್ ನಾಯಕ್ ಹೇಳಿದ್ದಾರೆ

Join Whatsapp