ಪ್ರಧಾನಿ ನರೇಂದ್ರ ಮೋದಿಯನ್ನು ಬರಮಾಡಿಕೊಳ್ಳಲು ವಿಮಾನ ನಿಲ್ದಾಣಕ್ಕೆ ಬಾರದ ತೆಲಂಗಾಣ ಸಿಎಂ !

Prasthutha|

ಹೈದರಾಬಾದ್; ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ಹೈದರಾಬಾದ್ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ಪ್ರಧಾನಿ ನರೇಂದ್ರ ಮೋದಿಯವರನ್ನು ಸ್ವಾಗತಿಸುವ ಸಂದರ್ಭದಲ್ಲಿ ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರು ಗೈರಾಗಿದ್ದಾರೆ.
ಶಿಷ್ಟಾಚಾರದಂತೆ ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ ಅವರು ವಿಮಾನ ನಿಲ್ದಾಣಕ್ಕೆ ತೆರಳದೆ ಇರುವುದು ವಿವಾದ ಸೃಷ್ಟಿಸಿದೆ. ಸಿಎಂ ಬದಲು ರಾಜ್ಯಪಾಲೆ ಸಾಯಿ ಸೌಂದರ್ ರಾಜನ್ ಪ್ರಧಾನ ಮಂತ್ರಿಯವರನ್ನು ಸ್ವಾಗತಿಸಿದ್ದಾರೆ.

- Advertisement -

ಆರೋಗ್ಯದ ಕಾರಣ ನೀಡಿದ ಸಿಎಂ‌ ಕಾರ್ಯಾಲಯ

ಪ್ರಧಾನಿ ಮೋದಿ ಆಗಮನದ ವೇಳೆ ಗೈರಾಗಿರುವ ಕುರಿತು ಕೆಸಿಆರ್​ ಅವರ ಅಧಿಕೃತ ನಿವಾಸ ಪ್ರಗತಿ ಭವನ್​​’ನಿಂದ ಪತ್ರಿಕಾ ಪ್ರಕಟಣೆ ಹೊರಡಿಸಲಾಗಿದ್ದು, ಕೆ.ಚಂದ್ರಶೇಖರ್​ ರಾವ್’ಗೆ ಆರೋಗ್ಯ ಸಮಸ್ಯೆ ಇರುವ ಕಾರಣ ಪ್ರಧಾನಿಯನ್ನು ಸ್ವಾಗತಿಸಲು ಹೋಗಿಲ್ಲ. ಮುಂಚಿತ್ತಾಲ್​​ನಲ್ಲಿ ನಡೆಯುವ ಕಾರ್ಯಕ್ರಮದಲ್ಲೂ ಪಾಲ್ಗೊಳ್ಳುವುದಿಲ್ಲ ಎಂದು ತಿಳಿಸಲಾಗಿದೆ.

- Advertisement -

ಬಿಜೆಪಿ ಟೀಕೆ
ಪ್ರಧಾನಿ ನರೇಂದ್ರ ಮೋದಿಯವರನ್ನು ಸ್ವಾಗತಿಸಲು ವಿಮಾನ‌ನಿಲ್ದಾಣಕ್ಕೆ ತೆರಳದ ಮುಖ್ಯಮಂತ್ರಿ ಕೆಸಿಆರ್​’ರನ್ನು ತೆಲಂಗಾಣ ಬಿಜೆಪಿ ಟೀಕಿಸಿದೆ. ಇದು ನಿಜಕ್ಕೂ ಮೂರ್ಖತನ ಮತ್ತು ನಾಚಿಕೆಗೇಡಿನ ಸಂಗತಿ. ಕೆಸಿಆರ್​ ಸಂವಿಧಾನವನ್ನು ಅವಮಾನಿಸುತ್ತಿದ್ದಾರೆ ಎಂದು ಆರೋಪಿಸಿದೆ

ನಿಗದಿತ ಕಾರ್ಯಕ್ರಮದ ಪ್ರಕಾರ ವಿಮಾನ ‌ನಿಲ್ದಾಣದಿಂದ ಪ್ರಧಾನಿ ನರೇಂದ್ರ ಮೋದಿ ಅವರ ಜೊತೆ ಸಿಎಂ ಚಂದ್ರಶೇಖರ್ ರಾವ್ ಹೆಲಿಕಾಪ್ಟರ್’ನಲ್ಲಿ ಪ್ರಯಾಣಿಸಬೇಕಿತ್ತು.

ಹೈದರಾಬಾದ್​’ ನ ಹೊರವಲಯದಲ್ಲಿರುವ ಮುಂಚಿತ್ತಾಲ್​​ನಲ್ಲಿ ಎಂಬಲ್ಲಿ ಒಂದು ಸಾವಿರ ಕೋಟಿ ರೂಪಾಯಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ಜಗತ್ತಿನ ಎರಡನೇ ಅತಿದೊಡ್ಡ ಪ್ರತಿಮೆ ಎಂಬ ಖ್ಯಾತಿಗೆ ಪಾತ್ರವಾಗಿರುವ ಸಂತ ರಾಮಾನುಜಾಚಾರ್ಯರ 216 ಅಡಿ ಎತ್ತರದ ಪಂಚಲೋಹದ ಸಮಾನತೆ ಪ್ರತಿಮೆ ಅನಾವರಣಗೊಳಿಸಲು ಪ್ರಧಾನಿ ಮೋದಿ ಹೈದರಾಬಾದ್ ಏರ್​ಪೋರ್ಟ್​ಗೆ ಆಗಮಿಸಿದ್ದರು.

Join Whatsapp