ಮೀನು ಮಾರುವ ಮಹಿಳೆಯನ್ನು ಬಸ್ಸಿನಿಂದ ಕೆಳಗಿಳಿಸಿದ ಸಿಬ್ಬಂದಿ ಅಮಾನತು

Prasthutha|

ಚೆನ್ನೈ: ಮೀನು ಮಾರುವ ವೃದ್ಧ ಮಹಿಳೆಯನ್ನು ವಾಸನೆಯ ನೆಪವೊಡ್ಡಿ ಸರ್ಕಾರಿ ಬಸ್ಸಿನಿಂದ ಬಲವಂತವಾಗಿ ಕೆಳಗಿಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬ್ಬಂದಿಗಳನ್ನು ಅಮಾನತುಗೊಳಿಸಿದ ಘಟನೆ ತಮಿಳುನಾಡಿನ ಕನ್ಯಾಕುಮಾರಿಯಿಂದ ವರದಿಯಾಗಿದೆ.

- Advertisement -

ಕನ್ಯಾಕುಮಾರಿ ಸಮೀಪದ ವಾಣಿಯಕುಡಿ ಗ್ರಾಮದ ನಿವಾಸಿಯಾದ ವೃದ್ಧೆ ಸೆಲ್ವಂ ಎಂಬಾಕೆಯೇ ಸಂತ್ರಸ್ತೆಯಾಗಿದ್ದು, ಜೀವನೋಪಾಯಕ್ಕಾಗಿ ಮೀನು ಮಾರುತ್ತಿರುವ ಸೆಲ್ವಂ ಕೊಳಚೆಲ್ ಬಸ್ ನಿಲ್ದಾಣ ತಲುಪಿ, ಊರಿಗೆ ತಲುಪಲು ಬಸ್ಸು ಹತ್ತಿದಾಗ ಮೀನಿನ ವಾಸನೆಯ ಕಾರಣಕ್ಕಾಗಿ ಬಸ್ಸಿನಿಂದ ಕೆಳಗಿಳಿಯುವಂತೆ ಬಸ್ ನಿರ್ವಾಹಕ ಬಲವಂತಪಡಿಸಿದ್ದನು.

ಈ ಕೃತ್ಯವನ್ನು ಖಂಡಿಸಿರುವ ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್, ಘಟನೆಯಿಂದ ತುಂಬಾ ಆಘಾತವಾಗಿದೆ ಎಂದು ಟ್ವೀಟ್ ಮೂಲಕ ಪ್ರತಿಕ್ರಿಯಿಸಿದ್ದಾರೆ. ಮಹಿಳೆಯರಿಗೆ ಉಚಿತ ಬಸ್ ಪ್ರಯಾಣವನ್ನು ಕಂಡಕ್ಟರ್ ಗಳು ಸಮರ್ಥವಾಗಿ ಜಾರಿಗೆ ತರುತ್ತಿರುವ ಈ ಸಂದರ್ಭದಲ್ಲಿ ಈ ರೀತಿಯ ಅಮಾನವೀಯ ಘಟನೆ ಖಂಡನೀಯ ಎಂದು ತಿಳಿಸಿದ್ದಾರೆ. ರಾಜ್ಯದ ಪ್ರತಿ ನಾಗರಿಕರು ಸಮಾನತೆಯ ಭಾವನೆಯಿಂದ ಕಾರ್ಯಪ್ರವೃತ್ತವಾಗಬೇಕಿದೆ ಎಂದು ಅವರು ತಿಳಿಸಿದರು.

- Advertisement -

ಘಟನೆಯ ಬಗ್ಗೆ ಸಮಯಪಾಲಕರಿಗೆ ಮಹಿಳೆ ದೂರು ನೀಡಿದರೂ ಪ್ರಯೋಜನವಾಗಿರಲಿಲ್ಲ. ಇದರಿಂದ ಬೇಸತ್ತ ಮಹಿಳೆ ತಮ್ಮ ಅಳಲನ್ನು ಸಾರ್ವಜನಿಕರ ಬಳಿ ತೋಡಿಕೊಂಡಾಗ ವೀಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಲಾಗಿತ್ತು. ಈ ಕುರಿತು ಬಸ್ ಸಿಬ್ಬಂದಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ನೆಟ್ಟಿಗರು ಕಠಿಣ ಕ್ರಮಕ್ಕೆ ಒತ್ತಾಯಿಸಿದ್ದರು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಸ್ ಚಾಲಕ ಮೈಕೆಲ್, ನಿರ್ವಾಹಕ ಮಣಿಕಂದನ್ ಮತ್ತು ಸಮಯಪಾಲಕ ಜಯಕುಮಾರ್ ಎಂಬವರನ್ನು ಸಾರಿಗೆ ಇಲಾಖೆ ಅಮಾನತುಗೊಳಿಸಿ ಆದೇಶ ಹೊರಡಿಸಿದೆ.

Join Whatsapp