‘ಭ್ರಷ್ಟಾಚಾರಿಗಳಿಗೆ ಬಿಜೆಪಿಯಲ್ಲಿ ಅವಕಾಶ’: ಸುರ್ಜೆವಾಲಾ

Prasthutha|

ಮೈಸೂರು: ಭ್ರಷ್ಟಾಚಾರ ಮಾಡುವವವರಿಗೆ ಬಿಜೆಪಿಯಲ್ಲಿ ಅವಕಾಶಗಳನ್ನು ನೀಡಲಾಗುತ್ತದೆ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ಹೇಳಿದ್ದಾರೆ.

- Advertisement -

ಮೈಸೂರಿನಲ್ಲಿ ಮಾತನಾಡಿದ ಅವರು, ಬಿಜೆಪಿಯಲ್ಲಿ ಕೇವಲ ಭ್ರಷ್ಟಾಚಾರ ಮಾಡುವವವರಿಗೆ ಮಾತ್ರ ಅವಕಾಶಗಳನ್ನು ನೀಡಲಾಗುತ್ತದೆ. ಸರಕಾರ ಕಳೆದ ಎರಡು ವರ್ಷಗಳಿಂದ ಖಜಾನೆ ಲೂಟಿ ಮಾಡುವುದರಲ್ಲೇ ಸಮಯ ಕಳೆದಿದೆ.  ಪ್ರವಾಹದಿಂದ ಸಂತ್ರಸ್ತರಾದ ಸಾವಿರಾರು ಜನರನ್ನು ಸ್ಥಳಾಂತರಿಸಲಾಗಿದೆ, ಬೆಳೆ ಹಾನಿಯಾಗಿ ಮನೆಗಳು ಹಾಳಾಗಿವೆ ಇಷ್ಟಾದರೂ ಪ್ರಧಾನಿ ನರೇಂದ್ರ ಮೋದಿ ಒಂದು ಬಾರಿಯಾದರೂ ರಾಜ್ಯಕ್ಕೆ ಬರಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಜ್ಯದ ರೈತರಿಗೆ ಯಾವುದೇ ಅನುದಾನ ನೀಡದೆ ಕೇವಲ ಗುಜರಾತ್ ಮತ್ತು ಬಿಹಾರಕ್ಕೆ ಮಾತ್ರ ಅನುದಾನ ನೀಡುತ್ತಾರೆ ಎಂದು ಅವರು ಆರೋಪಿಸಿದ್ದಾರೆ.

- Advertisement -

ನಾವು ಪ್ರದೇಶ ಕಾಂಗ್ರೆಸ್ ಸಮಿತಿಯ ಪುನರ್ ಸಂಘಟನೆಗಾಗಿ ಐದರಿಂದ ಆರು ಜಿಲ್ಲೆಗಳ ಸಭೆಯನ್ನು ಒಟ್ಟಿಗೆ ಮಾಡುತ್ತಿದ್ದೇವೆ. ರಾಜ್ಯದಲ್ಲಿನ ಪ್ರಸ್ತುತ ರಾಜಕೀಯ ಸ್ಥಿತಿ ನೋಡಿದರೆ ಭ್ರಷ್ಟಾಚಾರ, ಪಕ್ಷಾಂತರ ಹಾಗೂ ಪೆಗಾಸಸ್ ಕದ್ದಾಲಿಕೆ ಮೂಲಕ ಈ ಬಿಜೆಪಿ ಸರ್ಕಾರ ರಚನೆಯಾಗಿದೆ. ಮೋದಿ ಸರ್ಕಾರ ನಮ್ಮ ಪಕ್ಷದ ನಾಯಕರಾದ ಪರಮೇಶ್ವರ, ಪಕ್ಷದ ರಾಜ್ಯಾಧ್ಯಕ್ಷರ ಆಪ್ತರ, ಮಾಜಿ ಪ್ರಧಾನ ಮಂತ್ರಿಗಳ ಹಾಗೂ ಆಗಿನ ರಾಜ್ಯದ ಮುಖ್ಯಮಂತ್ರಿಗಳ ದೂರವಾಣಿ ಕರೆಗಳನ್ನು ಕದ್ದಾಲಿಕೆ ಮಾಡಿದೆ. ಚುನಾಯಿತ ಸರ್ಕಾರವನ್ನು ಬೀಳಿಸಿ ಬಿಜೆಪಿಯ ಅನೈತಿಕ ಸರ್ಕಾರವನ್ನು ರಚಿಸಲು ಪೆಗಾಸಸ್ ಅನ್ನು ಬಳಸಲಾಗಿದೆ ಎಂದು ಆರೋಪಿಸಿದರು.

 ಇನ್ನು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಕಣ್ಣೀರಿಟ್ಟಿದ್ದು ಯಾಕೆ ಎಂದು ಇಡೀ ರಾಜ್ಯ ಕೇಳುತ್ತಿದೆ. ಅವರಿಂದ ಬಲವಂತವಾಗಿ ರಾಜೀನಾಮೆ ಕೊಡಿಸಿದ್ದೇಕೆ ಎಂಬ ಪ್ರಶ್ನೆಗೆ ಯಾರಿಗೂ ಉತ್ತರ ಸಿಕ್ಕಿಲ್ಲ. ಕರ್ನಾಟಕ ಸರ್ಕಾರ ಭ್ರಷ್ಟಾಚಾರದಿಂದ ರಚನೆಯಾದದ್ದು ಎಂದು ಬಿಜೆಪಿಯವರೇ ಹೇಳುತ್ತಿದ್ದಾರೆ.  ಹೈಕೋರ್ಟ್ ಮೆಟ್ಟಿಲೇರಿರುವ ಕಳಂಕಿತರಿಗೆ ಸಂಪುಟದಲ್ಲಿ ಸಚಿವ ಸ್ಥಾನ ನೀಡಬೇಡಿ ಎಂದು ಬಿಜೆಪಿ ಹೈಕಮಾಂಡ್  ಹಾಗೂ ಆರ್ ಎಸ್ ಎಸ್ ಸೂಚನೆ ನೀಡಿದೆ. ಇದೆಲ್ಲವೂ ಈ ಸರ್ಕಾರ ಭ್ರಷ್ಟಾಚಾರ, ಪಕ್ಷಾಂತರ ಹಾಗೂ ಕದ್ದಾಲಿಕೆಯಿಂದ ನಿರ್ಮಾಣವಾಗಿದೆ ಎಂಬುದನ್ನು ಸಾಬೀತುಪಡಿಸುತ್ತಿದೆ ಎಂದು ಹೇಳಿದರು.

ಸಿದ್ದರಾಮಯ್ಯ ಅವರ ಸರ್ಕಾರದ ಭಾಗ್ಯ ಯೋಜನೆಗಳು ಕಡು ಬಡವರನ್ನು ತಲುಪಿದ್ದವು. ಆದರೆ ಕಳೆದ ಎರಡು ವರ್ಷಗಳಲ್ಲಿ ಬಿಜೆಪಿ ಸರ್ಕಾರ ಒಂದೇ ಒಂದು ಜನಪರ ಕಾರ್ಯಕ್ರಮ ಜಾರಿಗೆ ತಂದಿಲ್ಲ. ಈ ಸರ್ಕಾರ ರಾಜ್ಯದ ಬೊಕ್ಕಸವನ್ನು ಕೊಳ್ಳೆ ಹೊಡೆದು, ಜನರನ್ನು ಮರೆತಿದೆ.  ಇಂದು ರಾಜ್ಯದ 12 ಜಿಲ್ಲೆಗಳು ಪ್ರವಾಹದಲ್ಲಿ ಮುಳುಗಿವೆ. ಸುಮಾರು 70 ಸಾವಿರ ಜನರು ನೆಲೆ ಕಳೆದುಕೊಂಡಿದ್ದಾರೆ. 20 ಕ್ಕೂ ಹೆಚ್ಚು ಜನ ಸತ್ತಿದ್ದಾರೆ. 32 ಸಾವಿರ ಜನರನ್ನು ಸ್ಥಳಾಂತರಿಸಲಾಗಿದೆ. 1 ಲಕ್ಷ ಹೆಕ್ಟೋರ್ ಗೂ ಅಧಿಕ ಕೃಷಿ ಭೂಮಿ ನಾಶವಾಗಿದೆ. 2019 ರಿಂದ ರಾಜ್ಯದ ಸ್ಥಿತಿ ಇದೇ ಆಗಿದೆ. ಆದರೆ ಮೋದಿ ಬಂದು ವೀಕ್ಷಣೆ ಮಾಡಿದ್ದಾರಾ..? ಇವರಿಗಾಗಿ ಪರಿಹಾರ ಘೋಷಿಸಿದ್ದಾರಾ..? ಎಂದು ಪ್ರಶ್ನಿಸಿದರು.

ಬಿಜೆಪಿ ನಾಯಕರು ಸಚಿವ ಸ್ಥಾನ ಪಡೆಯಲು ಲಾಬಿ ಮಾಡುತ್ತಿದ್ದಾರೆಯೇ ಹೊರತು, ಯಾರೊಬ್ಬರೂ ನೆರೆ ಪೀಡಿತರ ನೆರವಿಗೆ ಧಾವಿಸಿಲ್ಲ. ಕಳೆದ ಒಂದೂವರೆ ವರ್ಷದಿಂದ ಇದೇ ಪರದಾಟ  ಮುಂದುವರಿದಿದೆ. ರಾಜ್ಯದ ಜನ ಆಸ್ಪತ್ರೆಯಲ್ಲಿ ಹಾಸಿಗೆ, ಆಕ್ಸಿಜನ್, ಔಷಧಿ ಸಿಗದೆ ಒದ್ದಾಡುತ್ತಿದ್ದಾರೆ, ಸಾಯುತ್ತಿದ್ದಾರೆ.  ರಾಜ್ಯದಲ್ಲಿ 3 ಲಕ್ಷಕ್ಕೂ ಹೆಚ್ಚು ಜನ ಸತ್ತಿದ್ದಾರೆ. ಈ ಸಮಯದಲ್ಲಿ ಜೆ.ಪಿ. ನಡ್ಡಾ ಅವರಾಗಲಿ, ಪ್ರಧಾನಿ ನರೇಂದ್ರ ಮೋದಿ ಅವರಾಗಲಿ, ಅಮಿತ್ ಶಾ ಅವರಾಗಲಿ ಎಲ್ಲಿದ್ದಾರೆ? ಯಡಿಯೂರಪ್ಪ, ಬೊಮ್ಮಾಯಿ ಅವರು ಎಲ್ಲಿದ್ದಾರೆ? ಇವರು ಪದೇ ಪದೆ ರಾಜ್ಯಕ್ಕೆ ದ್ರೋಹ ಬಗೆಯುತ್ತಿದ್ದಾರೆ. ಅವರ ಅಧಿಕಾರ ದಾಹ ಕೊನೆಗೊಳ್ಳಬೇಕು ಎಂದು ಹೇಳಿದರು.

 ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ಅವರು ದೇಶದ ಪ್ರಜಾಪ್ರಭುತ್ವ, ಸಂವಿಧಾನ, ಮಾಧ್ಯಮಗಳು, ಚುನಾವಣಾ ಆಯೋಗ, ನ್ಯಾಯಾಂಗ ವ್ಯವಸ್ಥೆ, ಸಿಬಿಐ, ಇಡಿ ಸಂಸ್ಥೆಗಳ ಮೇಲೆ ದಾಳಿ ನಡೆಸುತ್ತಿದ್ದಾರೆ. ಅಷ್ಟೇ ಅಲ್ಲ ಅವರ ಸಂಪುಟ ಸಚಿವರ ಮೇಲೂ ಗೂಢಚಾರಿಕೆ ನಡೆಸುತ್ತಿದ್ದಾರೆ. ಸಿಬಿಐ ನಿರ್ದೇಶಕರ ಕುಟುಂಬ ಸದಸ್ಯರ ಮೇಲೆ ಗೂಢಚಾರಿಕೆ ನಡೆಸಿದ್ದಾರೆ. ಗೋವಾ, ಮಧ್ಯಪ್ರದೇಶ, ಮಣಿಪುರ ಸೇರಿದಂತೆ ಎಲ್ಲೆಡೆ ಬಿಜೆಪಿ ಸರ್ಕಾರ ಗೂಢಚಾರಿಕೆ ನಡೆಸುತ್ತಿದೆ. ಇದರ ವಿರರುದ್ಧ ನಿಲ್ಲುವುದು ನಮ್ಮ ಕರ್ತವ್ಯ.  ನಾವು ಯಡಿಯೂರಪ್ಪ ಅವರ ರಾಜೀನಾಮೆಯನ್ನು ಲಾಭ ಅಥವಾ ನಷ್ಟದ ದೃಷ್ಟಿಕೋನದಲ್ಲಿ ನೋಡುವುದಿಲ್ಲ. ಯಡಿಯೂರಪ್ಪ ಅವರು ಅತ್ಯಂತ ಭ್ರಷ್ಟ ಸರ್ಕಾರ ಹಾಗೂ ದುರಾಡಳಿತ ನಡೆಸುತ್ತಿದ್ದರು ಎಂಬುದು ಸತ್ಯ. ತಮ್ಮದೇ ನಾಯಕರನ್ನು ಅಪಮಾನಿಸುವುದರಲ್ಲಿ ಮೋದಿ ಹಾಗೂ ಅಮಿತ್ ಶಾ ನಿಪುಣರು. ಇದೇ ಮೊದಲ ಬಾರಿಗೇನೂ ಈ ರೀತಿ ಆಗಿಲ್ಲ. ಮೋದಿ ಅವರ ಗುರು ಆಡ್ವಾಣಿ ಅವರನ್ನು ಯಾವ ರೀತಿ ಬಳಸಿಕೊಂಡು ಮೂಲೆಗುಂಪು ಮಾಡಿದ್ದಾರೆ,  ಮುರಳಿ ಮನೋಹರ ಜೋಷಿ, ಕೇಶುಭಾಯ್ ಪಟೇಲ್ ಅವರನ್ನು ಹೇಗೆ ಮುಗಿಸಿದರು ಎಂಬುದು ಎಲ್ಲರಿಗೂ ಗೊತ್ತಿದೆ.  ಇದು ಬಿಜೆಪಿಯ ಸಂಸ್ಕೃತಿಯನ್ನು ತೋರಿಸುತ್ತದೆ ಎಂದು ಟೀಕಾಪ್ರಹಾರ ನಡೆಸಿದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಎಸ್.ಆರ್. ಪಾಟೀಲ್, ಎಐಸಿಸಿ ವೀಕ್ಷಕ ಮಧು ಯಾಕ್ಷಿಗೌಡ, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸಲೀಂ ಅಹಮದ್, ಧೃವನಾರಾಯಣ್, ರಾಜ್ಯಸಭೆ ಸದಸ್ಯ ನಾಸೀರ್ ಹುಸೇನ್, ಕೆಪಿಸಿಸಿ ಮಾಧ್ಯಮ ವಿಭಾಗದ ಸಹ ಅಧ್ಯಕ್ಷ ವಿ.ಆರ್. ಸುದರ್ಶನ್, ಐಶ್ವರ್ಯ ಮಹದೇವ್ ಮತ್ತಿತರರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Join Whatsapp