ಸುಳ್ಯ: ವಿದ್ಯಾರ್ಥಿ ಮೇಲೆ ಹಲ್ಲೆ ಪ್ರಕರಣ| ಆರೋಪಿ ವಿರುದ್ಧ FIR ದಾಖಲು

Prasthutha|

ಸುಳ್ಯ: ಗೂನಡ್ಕ ಮಾರುತಿ ಶಾಲೆಯ ಆಡಳಿತ ಮಂಡಳಿ ಸದಸ್ಯರೊಬ್ಬರು 9 ವರ್ಷದ ವಿದ್ಯಾರ್ಥಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯ ವಿರುದ್ಧ FIR ದಾಖಲಾಗಿದೆ.

- Advertisement -

ಶಾಲಾ ಆಡಳಿತ ಮಂಡಳಿ ಸದಸ್ಯ ಕಿಶೋರ್ ಎಂಬವರು ವಿದ್ಯಾರ್ಥಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದರು. ಹಲ್ಲೆಗೊಳಗಾಗಿ ಗಂಭೀರ ಗಾಯಗೊಂಡ ವಿದ್ಯಾರ್ಥಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದು ಸಾಮಾಜಿಕ ಜಾಲತಾಣದಲ್ಲಿ ವೈರಲಾಗಿತ್ತು.


ಈ ಬಗ್ಗೆ ವಿಷಯ ತಿಳಿದು ಶಾಲಾ ಆಡಳಿತ ಮಂಡಳಿ ಪರವಾಗಿ ಡಾ| ಡಿ.ವಿ. ಲೀಲಾಧರ್ ಹಾಗೂ ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಜಿ.ಕೆ. ಹಮೀದ್ ರವರು ಆಸ್ಪತ್ರೆಗೆ ಭೇಟಿ ನೀಡಿ ವಿದ್ಯಾರ್ಥಿಯ ಪೋಷಕರ ಜೊತೆ ಮಾತುಕತೆ ನಡೆಸಿ ರಾಜಿ ಪಂಚಾಯಿತಿ ನಡೆಸಲು ಪ್ರಯತ್ನಿಸಿದ್ದರು ಎನ್ನಲಾಗಿದೆ.

- Advertisement -


ಆರೋಪಿಯ ರಕ್ಷಣೆಗೆ ಗ್ರಾಮ ಪಂಚಾಯತ್ ಅಧ್ಯಕ್ಷರು ಮುಂದಾಗಿದ್ದರು ಎಂಬ ಆರೋಪ ಕೂಡ ಕೇಳಿಬಂದಿತ್ತು. ಮಾತ್ರವಲ್ಲ ಅಧ್ಯಕ್ಷರ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು.
ಬಳಿಕ ಮಾಧ್ಯಮದ ವರದಿ ಮತ್ತು ಸ್ಥಳೀಯ ನಾಗರಿಕರ ದೂರಿನ ಮೇರೆಗೆ ಕಲ್ಯಾಣ ಇಲಾಖೆ ತನಿಖೆ ಕೈಗೊಂಡು ದೂರು ದಾಖಲಿಸಿತ್ತು. ನಂತರ ಪೊಲೀಸ್ ಇಲಾಖೆ ಆರೋಪಿಯ ವಿರುದ್ಧ ಸ್ವಯಂ ಪ್ರೇರಿತ FIR ದಾಖಲಿಸಿದೆ.

ಯಾವುದೇ ರಾಜಕೀಯ ಒತ್ತಡಕ್ಕೆ ಮಣಿಯದೆ ವಿದ್ಯಾರ್ಥಿಯ ಪರವಾಗಿ ನಿಂತು ಮಕ್ಕಳ ಕಲ್ಯಾಣ ಮತ್ತು ಪೊಲೀಸ್ ಇಲಾಖೆ ಆರೋಪಿಯ ವಿರುದ್ಧ FIR ದಾಖಲಿಸಿರುವುದು ದೇಶದ ಕಾನೂನು ವ್ಯವಸ್ಥೆಯ ಮೇಲೆ ಸಾರ್ವಜನಿಕರಿಗೆ ನಂಬಿಕೆ ಮತ್ತು ವಿಶ್ವಾಸವನ್ನು ಹೆಚ್ಚಿಸಿದೆ ಎಂದು ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

Join Whatsapp