ದೇಶದ ಸಮಗ್ರತೆಗೆ ಧಕ್ಕೆ ತರುವ ಹೇಳಿಕೆ: ಪಬ್ಲಿಕ್ ಟಿವಿ ಮುಖ್ಯಸ್ಥ ರಂಗನಾಥ್, ಅರುಣ್ ಬಡಿಗೇರ್ ವಿರುದ್ಧ ಎಫ್ಐಆರ್ ದಾಖಲು

Prasthutha|

ಬೆಂಗಳೂರು: ಕೋಮು ಆಧಾರದಲ್ಲಿ ದೇಶ ನಿರ್ಮಾಣವಾಗಿದೆ ಎಂದು ದೇಶದ ಸಮಗ್ರತೆಗೆ ಧಕ್ಕೆ ತರುವ ರೀತಿಯಲ್ಲಿ ಹೇಳಿಕೆ ನೀಡಿದ ಪಬ್ಲಿಕ್ ಟಿವಿಯ ಮುಖ್ಯಸ್ಥ ಎಚ್.ಆರ್.ರಂಗನಾಥ್ ಹಾಗೂ ನಿರೂಪಕ ಅರುಣ್ ಬಡಿಗೇರ್ ವಿರುದ್ಧ ಯಾದಗಿರಿ ಜಿಲ್ಲೆಯ ಶಹಾಪುರ ಗ್ರಾಮೀಣ ವೃತ್ತದ ಗೋಗಿ ಪೊಲೀಸ್ ಠಾಣೆಯಲ್ಲಿ ಜಾಮೀನುರಹಿತ ಸೆಕ್ಷನ್ ಗಳಡಿ ಪ್ರಕರಣ ದಾಖಲಾಗಿದೆ.

- Advertisement -

ದೇಶದ ಸಮಗ್ರತೆಗೆ ಧಕ್ಕೆ ತಂದ ಮತ್ತು ಮುಸ್ಲಿಮರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ ಪಬ್ಲಿಕ್ ಟಿವಿಯ ಮುಖ್ಯಸ್ಥ ಎಚ್ . ಆರ್. ರಂಗನಾಥ್ ಹಾಗೂ ನಿರೂಪಕ ಅರುಣ್ ಬಡಿಗೇರ್ ವಿರುದ್ಧ ಜಾಮೀನುರಹಿತ ಪ್ರಕರಣ ದಾಖಲಿಸುವಂತೆ ಇತ್ತೀಚೆಗೆ ನ್ಯಾಯಾಲಯ ಪೊಲೀಸರಿಗೆ ಸೂಚನೆ ನೀಡಿತ್ತು.

ಫೆಬ್ರವರಿ 3ರಂದು ಪಬ್ಲಿಕ್ ಟಿವಿ ಯಲ್ಲಿ ” ವಿದ್ಯಾದೇಗುಲದಲ್ಲಿ ಧರ್ಮ ಯುದ್ದ” “ಬಿಗ್ ಬುಲೆಟಿನ್” ಎಂಬ ಹೆಸರಿನ ಕಾರ್ಯಕ್ರಮ ಪ್ರಸಾರವಾಗಿತ್ತು. ವಾಹಿನಿಯ ಮುಖ್ಯಸ್ಥ ಎಚ್ ಆರ್. ರಂಗನಾಥ ಮತ್ತು ನಿರೂಪಕ ಅರುಣ್ ಬಡಿಗೇರ್ ಮಾತನಾಡುತ್ತಾ ” ಇದು ಭಾರತ. ಭಾರತ ಸೃಷ್ಟಿಯಾಗಿದ್ದೇ ಹಿಂದೂ ರಾಷ್ಟ್ರದ ಆಧಾರದಲ್ಲಿ ” ಎಂದು ಹೇಳಿಕೆ ನೀಡಿದ್ದರು.

- Advertisement -

ಈ ಹೇಳಿಕೆ ಮೂಲಕ ಅವರು ಮುಸ್ಲಿಮರ ಭಾವನೆಗೆ ಧಕ್ಕೆ ತಂದಿರುವುದು ಮಾತ್ರವಲ್ಲ ಸಮಾಜದಲ್ಲಿ ಎರಡು ಸಮುದಾಯಗಳ ನಡುವೆ ವೈಷಮ್ಯ ಮೂಡಿಸಲು ಪ್ರಯತ್ನಿಸಿದ್ದಾರೆ. ದೇಶದ ಸಮಗ್ರತೆಯ ವಿರುದ್ಧ ಪೂರ್ವಗ್ರಹ ಪೀಡಿತ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಲಾಗಿತ್ತು. ಇದರ ವಿರುದ್ಧ ಬಂದೇನವಾಜ್ ಗೋಗಿ ಅವರು ಶಹಾಪುರದ ಹೆಚ್ಚುವರಿ ನ್ಯಾಯಿಕ ದಂಡಾಧಿಕಾರಿಗಳ ನ್ಯಾಯಾಲಯದಲ್ಲಿ ಖಾಸಗಿ ದೂರು ಸಲ್ಲಿಸಿದ್ದರು.

ದೂರುದಾರರ ಪರ ವಕೀಲರಾದ ಮುಹಮ್ಮದ್ ಗೌಸ್ ಗೋಗಿ ಅವರ ವಾದವನ್ನು ಪರಿಗಣಿಸಿ ನ್ಯಾಯಾಲಯವು ಪಬ್ಲಿಕ್ ಟಿವಿ ಪ್ರಧಾನ ಸಂಪಾದಕ ರಂಗನಾಥ ಮತ್ತು ನಿರೂಪಕ ಅರುಣ್ ಬಡಿಗೇರ ವಿರುದ್ದ ಗೋಗಿ ಪೊಲೀಸ್ ಠಾಣೆಯಲ್ಲಿ ಕಲಂ 153(ಬಿ)505(1)(ಬಿ)(ಸಿ) ಮತ್ತು 505(2) ಐಪಿಸಿ ಅಡಿಯಲ್ಲಿ ಪ್ರಥಮ ವರ್ತಮಾನ ವರದಿ-ಎಫ್ ಐಆರ್ ದಾಖಲಿಸಲು ನಿರ್ದೇಶನ ನೀಡಿತ್ತು. ಅದರಂತೆ ಸ್ಥಳೀಯ ನಿವಾಸಿ ಬಂದೇನವಾಝ್ ಅವರು ಮಾರ್ಚ್ 28ರಂದು ಠಾಣೆಗೆ ಅಧಿಕೃತವಾಗಿ ದೂರು ನೀಡಿದ್ದರು. ಅಂದೇ ಜಾಮೀನು ರಹಿತ ಸೆಕ್ಷನ್ ಗಳಡಿ ಎಫ್ಐಆರ್ ದಾಖಲಾಗಿದೆ.

Join Whatsapp