ಶ್ರೀಲಂಕಾ ಅಧ್ಯಕ್ಷರ ಮನೆಗೆ ನುಗ್ಗಿದ ಪ್ರತಿಭಟನಕಾರರು: ಗೋತಬಯ ರಾಜಪಕ್ಷೆ ಪಲಾಯನ

Prasthutha|

ಕೊಲಂಬೊ: ಆಕ್ರೋಶಿತ ಪ್ರತಿಭಟನಕಾರರು ಶ್ರೀಲಂಕಾದ ಅಧ್ಯಕ್ಷ ಗೋತಬಯ ರಾಜಪಕ್ಷೆ ಅವರ ಅಧಿಕೃತ ನಿವಾಸಕ್ಕೆ ನುಗ್ಗಿದ ಹಿನ್ನೆಲೆಯಲ್ಲಿ ಅವರು ಅಲ್ಲಿಂದ ಪಲಾಯನ ಮಾಡಿದ್ದಾರೆ ಎಂದು ಉನ್ನತ ರಕ್ಷಣಾ ಮೂಲಗಳು ತಿಳಿಸಿವೆ. ಅವರ ರಾಜೀನಾಮೆಗೆ ಒತ್ತಾಯಿಸಿ ಪ್ರತಿಭಟನಕಾರರು ನಿವಾಸದೆದುರು ಜಮಾಯಿಸಿದ್ದರು.

- Advertisement -

ಸದ್ಯ ಅಧ್ಯಕ್ಷ ಗೋತಬಯ ರಾಜಪಕ್ಷೆ ಅವರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಅಧ್ಯಕ್ಷರ ಭವನವನ್ನು ಅತಿಕ್ರಿಮಿಸುವುದನ್ನು ತಡೆಯಲು ಸೈನಿಕರು ಆಕ್ರೋಶಿತ ಗುಂಪಿನ ಮೇಲೆ ಗುಂಡು ಹಾರಿಸಿದ್ದಾರೆ ಎಂದು ತಿಳಿದು ಬಂದಿದೆ.

- Advertisement -

ದೇಶಕ್ಕೆ ಅಗತ್ಯವಿರುವ ಸಾಮಾಗ್ರಿಗಳನ್ನು ಆಮದು ಮಾಡಲು ವಿದೇಶಿ ಕರೆನ್ಸಿ ಖಾಲಿಯಾದ ಬಳಿಕ ಶ್ರೀಲಂಕಾ ತೀವ್ರ ಆಹಾರ ಕೊರತೆ, ಇಂಧನ ಕೊರತೆ ಮತ್ತು ತೀವ್ರ ಹಣದುಬ್ಬರದಿಂದ ಬಳಲುತ್ತಿದೆ.

ವಿರೋಧ ಪಕ್ಷ, ಮಾನವಹಕ್ಕು ಕಾರ್ಯಕರ್ತರು ಮತ್ತು ವಕೀಲರ ಸಂಘ ಪೊಲೀಸ್ ಮುಖ್ಯಸ್ಥರ ವಿರುದ್ಧ ಕೇಸ್ ದಾಖಲಿಸುವುದಾಗಿ ತಿಳಿಸಿದ ಬಳಿಕ ಪೊಲೀಸರು ಶುಕ್ರವಾರ ಕರ್ಫ್ಯೂ ಆದೇಶವನ್ನು ಹಿಂಪಡೆದಿದ್ದರು. ಇದರ ಬೆನ್ನಲ್ಲೇ ಪ್ರತಿಭಟನಕಾರರು ಅಧ್ಯಕ್ಷರ ಭವನಕ್ಕೆ ನುಗ್ಗಿರುವುದು ಆತಂಕ ಮೂಡಿಸಿದೆ.

ನ್ಯೂಸ್ ಫಸ್ಟ್ ಚಾನಲ್ ವರದಿ ಮಾಡಿದ ಪ್ರಕಾರ, ಶ್ರೀಲಂಕಾದ ಬಾವುಟ ಮತ್ತು ಹೆಲ್ಮೆಟ್ ಧರಿಸಿದ ಪ್ರತಿಭಟನಕಾರರು ಅಧ್ಯಕ್ಷರ ಭವನಕ್ಕೆ ನುಗ್ಗಿದ್ದಾರೆ ಎಂದು ತಿಳಿದುಬಂದಿದೆ.

ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿದರಾದರೂ ನುಗ್ಗುವ ಪ್ರತಿಭಟನಕಾರರನ್ನು ನಿಯಂತ್ರಿಸಲು ವಿಫಲರಾದರು ಎಂದೂ ರಿಯೂಟರ್ಸ್ ವರದಿ ಮಾಡಿಸಿದೆ.

ಸಾವಿರಾರು ಜನ ಪ್ರತಿಭಟನಕಾರರು ಕೋಟೆಯಲ್ಲಿರುವ ಅಧ್ಯಕ್ಷರ ನಿವಾಸದ ಮುಖ್ಯ ಗೇಟಿಗೆ ಮುತ್ತಿಗೆ ಹಾಕಿದರು. ಮೊದಲು ಬ್ಯಾರಿಕೇಡ್ ಗಳನ್ನು ಹಾರಿದರು. ಪೊಲೀಸರು ಕೊನೆಗೆ ಬಿಟ್ಟುಬಿಟ್ಟರು. ಗಾಳಿಯಲ್ಲಿ ಗುಂಡು ಹಾರಿಸಿ, ಅಶ್ರುವಾಯು ಸಿಡಿಸಿದರಾದರೂ ಪೊಲೀಸರಿಗೆ ಅವರನ್ನು ನಿಯಂತ್ರಿಸಲು ಸಾಧ್ಯವಾಗದೆ ಬಾಗಿಲು ತೆಗೆದುಬಿಟ್ಟರು ಎಂದು ಕೂಡ ವರದಿಯಾಗಿದೆ.

ಶ್ರೀಲಂಕಾವು ಭಾರೀ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿದ್ದು, ಮಾರ್ಚ್ ನಿಂದಲೂ ಜನರು ಗೊಟಬಯ ರಾಜಪಕ್ಷರ ರಾಜೀನಾಮೆಗೆ ಒತ್ತಾಯಿಸುತ್ತಿದ್ದಾರೆ. ಇಂಧನ ಬೆಲೆ ಗಗನಕ್ಕೇರಿದೆ ಹಾಗೂ ಆಗಿನಿಂದ ಏನೂ ಆಮದು ರಫ್ತು ವ್ಯವಹಾರ ನಡೆಯುತ್ತಿಲ್ಲ. ಶಾಲೆಗಳನ್ನು ಮುಚ್ಚಲಾಗಿದೆ. ಪೆಟ್ರೋಲ್, ಡೀಸೆಲ್, ಅಡುಗೆ ಅನಿಲವನ್ನು ಪಡಿತರವಾಗಿ ನೀಡಲಾಗುತ್ತಿದೆ. 

Join Whatsapp