ಕ್ರೀಡಾ ವಸತಿ ನಿಲಯ, ಕ್ರೀಡಾಂಗಣಗಳ ಉನ್ನತೀಕರಣಕ್ಕೆ ವರದಿ ನೀಡಲು ಕ್ರೀಡಾ ತಜ್ಞರ ಸಮಿತಿ ರಚನೆ

Prasthutha|

- Advertisement -

ಬೆಂಗಳೂರು: ರಾಜ್ಯದಲ್ಲಿರುವ ಕ್ರೀಡಾ ವಸತಿ ನಿಲಯ ಹಾಗೂ ಜಿಲ್ಲೆಗಳಲ್ಲಿರುವ ಕ್ರೀಡಾಂಗಣಗಳನ್ನು ಅಂತಾರಾಷ್ಟ್ರೀಯ ದರ್ಜೆಯ ಮಟ್ಟಕ್ಕೆ ಆಧುನೀಕರಣಗೊಳಿಸುವ ಸಂಬಂಧ ವರದಿ ನೀಡಲು ಕ್ರೀಡಾ ತಜ್ಞರ ಸಮಿತಿಯನ್ನು ರಚಿಸಲು ಸಚಿವ ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಚಿವ ಡಾ. ನಾರಾಯಣಗೌಡ ಸೂಚಿಸಿದ ಹಿನ್ನೆಲೆಯಲ್ಲಿ ಈಗ ಕ್ರೀಡಾ ತಜ್ಞರ ಸಮಿತಿಯನ್ನು ರಚಿಸಿ ಆದೇಶ ಹೊರಡಿಸಲಾಗಿದೆ.


ರಾಜ್ಯದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಅಡಿಯಲ್ಲಿ 34 ಕ್ರೀಡಾ ವಸತಿ ನಿಲಯಗಳಿವೆ. ಕ್ರೀಡಾಪಟುಗಳಿಗೆ ಉತ್ತಮ ಊಟ ವಸತಿ ಜೊತೆಗೆ ಅಂತಾರಾಷ್ಟ್ರೀಯ ಗುಣಮಟ್ಟದ ಕ್ರೀಡಾ ತರಬೇತಿ ಸಹ ಅವಶ್ಯಕತೆ ಇದೆ. ಆದ್ದರಿಂದ ಕ್ರೀಡಾ ವಸತಿ ನಿಲಯಗಳನ್ನು ಉನ್ನತೀಕರಣಗೊಳಿಸಬೇಕು. ಅತ್ಯುತ್ತಮ ವ್ಯವಸ್ಥೆ ಕಲ್ಪಿಸಬೇಕು ಎಂದು ಕ್ರೀಡಾ ಸಚಿವ ಡಾ. ನಾರಾಯಣಗೌಡ ಅವರಿಗೆ ಶಾಸಕರು ಹಾಗೂ ಕ್ರೀಡಾಪಟುಗಳು ಮನವಿ ಮಾಡಿದ್ದರು.
ಅಲ್ಲದೆ ರಾಜ್ಯದಲ್ಲಿ ಇರುವ ಕ್ರೀಡಾಂಗಣಗಳನ್ನೂ ಸಹ ಆಧುನೀಕರಣ ಗೊಳಿಸಬೇಕು. ಎಲ್ಲ ಕ್ರೀಡಾ ಸೌಲಭ್ಯದ ಜೊತೆ ಅಂತಾರಾಷ್ಟ್ರೀಯ ಗುಣಮಟ್ಟದ ತರಬೇತಿಯನ್ನೂ ನೀಡಬೇಕು ಎಂದು ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಸಚಿವರು ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್, ಇಲಾಖೆ ಆಯುಕ್ತ ವೆಂಕಟೇಶ್ ಸೇರಿದಂತೆ ಇಲಾಖೆಯ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದರು. ತಕ್ಷಣವೇ ನುರಿತ ಕ್ರೀಡಾಪಟುಗಳ ಸಮಿತಿಯನ್ನು ರಚಿಸಿ, ಕ್ರೀಡಾ ವಸತಿ ನಿಲಯ ಹಾಗೂ ಕ್ರೀಡಾಂಗಣಗಳ ಉನ್ನತೀಕರಣ ಸಂಬಂಧ ಎರಡು ತಿಂಗಳೊಳಗೆ ವರದಿ ಸಲ್ಲಿಸುವಂತೆ ಸೂಚಿಸಿದ್ದರು.
ಸಚಿವರ ಸೂಚನೆ ಹಿನ್ನೆಲೆಯಲ್ಲಿ ಕ್ರೀಡಾಪಟುಗಳು ಹಾಗೂ ಅಧಿಕಾರಿಯನ್ನೊಳಗೊಂಡ 5 ಜನರ ಸಮಿತಿಯನ್ನು ರಚಿಸಿ ಆದೇಶ ಹೊರಡಿಸಲಾಗಿದೆ.

- Advertisement -

ಕ್ರೀಡಾ ತಜ್ಞರ ಸಮಿತಿ ಸದಸ್ಯರು
ವಿ.ಆರ್. ರಘುನಾತ್, ಭಾರತ ಹಾಕಿ ತಂಡದ ಮಾಜಿ ನಾಯಕ ಹಾಗೂ ಅರ್ಜುನ ಪ್ರಶಸ್ತಿ ವಿಜೇತರು.
ಹೊನ್ನಪ್ಪ ಗೌಡ, ಕಬ್ಬಡ್ಡಿ ಆಟಗಾರ ಹಾಗೂ ಅರ್ಜುನ ಪ್ರಶಸ್ತಿ ವಿಜೇತರು.
ಎಸ್. ಅರವಿಂದ್, ಕ್ರಿಕೆಟ್ ಆಟಗಾರ, ಕರ್ನಾಟಕ ರಣಜಿ ತಂಡದ ಬೌಲಿಂಗ್ ಕೋಚ್.
ಬಿ.ಜಿ. ನಾಗರಾಜು, ಮಾಜಿ ಅಥ್ಲೆಟ್ ಹಾಗೂ ಏಕಲವ್ಯ ಪ್ರಶಸ್ತಿ ವಿಜೇತರು.

ಡಾ. ಜಿತೇಂದ್ರ ಶೆಟ್ಟಿ, ಉಪನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ.


ಕ್ರೀಡಾ ಇಲಾಖೆಯಲ್ಲಿ ಆಮೂಲಾಗ್ರ ಬದಲಾವಣೆಗಾಗಿ ಸಚಿವರು ಪಣತೊಟ್ಟಿದ್ದಾರೆ. ಓಲಂಪಿಕ್, ಏಷ್ಯನ್ ಗೇಮ್ಸ್ ನಂತಹ ಕ್ರೀಡಾಕೂಟದಲ್ಲಿ ಕ್ರೀಡಾಪಟುಗಳು ಪಾಲ್ಗೊಂಡು ಪದಕ ಗೆಲ್ಲಲು ಅತ್ಯಾಧುನಿಕವಾದ ಸೌಲಭ್ಯ ಕೂಡ ನೀಡಬೇಕು. ವ್ಯವಸ್ಥೆಯಲ್ಲಿ ಏನೆಲ್ಲ ಬದಲಾವಣೆ ಆಗಬೇಕು ಎನ್ನುವ ಬಗ್ಗೆ ಕ್ರೀಡಾ ತಜ್ಣರ ಸಮಿತಿಯನ್ನು ರಚಿಸಲಾಗಿದೆ. ಸಮಿತಿಯು ಕ್ರೀಡಾ ಇಲಾಖೆ ವ್ಯಾಪ್ತಿಯಲ್ಲಿರುವ ಎಲ್ಲ ಕ್ರೀಡಾ ವಸತಿ ನಿಲಯಗಳಿಗೆ ಹಾಗೂ ಕ್ರೀಡಾಂಗಣಗಳಿಗೆ ಭೇಟಿ ನೀಡಿ ಸ್ಥಿತಿಗತಿಗಳ ಅಧ್ಯಯನ ಮಾಡಬೇಕು. ವೈಜ್ಞಾನಿಕವಾಗಿ ಉನ್ನತೀಕರಣಗೊಳಿಸುವುದಕ್ಕೆ ಏನೇನು ಕ್ರಮ ವಹಿಸಬೇಕು. ಅಂತರಾಷ್ಟ್ರೀಯ ಗುಣಮಟ್ಟಕ್ಕೆ ವ್ಯವಸ್ಥೆಯನ್ನು ಬದಲಾಯಿಸಲು ಯಾವ ರೀತಿಯ ಕ್ರಮ ತೆಗೆದುಕೊಳ್ಳಬೇಕು ಎಂದು ಸಮಿತಿಯು ವರದಿ ನೀಡಬೇಕು. ಸಮಿತಿ ಸದಸ್ಯರಿಗೆ ವಾಹನ, ಪ್ರವಾಸ ಭತ್ಯೆ ನೀಡಲಾಗುವುದು. ಅಂತರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳು ಸಮಿತಿಯಲ್ಲಿದ್ದು ಅವರಿಗೆ ಗೌರವ ಧನವಾಗಿ ರೂ.1.50 ಲಕ್ಷ ನೀಡಲಾಗುವುದು.

ಎರಡು ತಿಂಗಳೊಳಗೆ ಸಮಗ್ರ ವರದಿ ಸಲ್ಲಿಸಬೇಕು

ಸಮಿತಿಗೆ ಅಗತ್ಯವಿರುವ ಎಲ್ಲ ರೀತಿಯ ಸೌಲಭ್ಯ ನೀಡಲಾಗುತ್ತಿದೆ. ವರದಿ ಸಲ್ಲಿಸಿದ ಬಳಿಕ ತ್ವರಿತ ಗತಿಯಲ್ಲಿ ಉನ್ನತೀಕರಣದ ಕೆಲಸ ಮಾಡಬೇಕಿದೆ. ಆದ್ದರಿಂದ ಎರಡು ತಿಂಗಳಲ್ಲಿ ರಾಜ್ಯಾಧ್ಯಂತ ಸಂಚರಿಸಿ ವಿವರವಾದ ವರದಿಯನ್ನು ಸಮಿತಿಯು ಸಲ್ಲಿಸಬೇಕು ಎಂದು ಸಚಿವರು ಸೂಚಿದ್ದಾರೆ.


ಸಮಿತಿ ಸದಸ್ಯರು ನೀಡಿದ ವರದಿ ಆಧರಿಸಿ ರಾಜ್ಯದಲ್ಲಿರುವ ಎಲ್ಲ ಕ್ರೀಡಾ ವಸತಿ ನಿಲಯ ಉನ್ನತಿಕರಿಸಲಾಗುವುದು. ಅಲ್ಲದೆ ಕ್ರೀಡಾಂಗಣಗಳನ್ನು ಅಂತರಾಷ್ಟ್ರೀಯ ಗುಣಮಟ್ಟದ ತರಬೇತಿ ನೀಡುವಂತೆ ವೈಜ್ಞಾನಿಕವಾಗಿ ಉನ್ನತೀಕರಿಸಲಾಗುವುದು. ಆ ಮೂಲಕ ಪ್ಯಾರಿಸ್ ಓಲಂಪಿಕ್ಗೆ ನಮ್ಮ ರಾಜ್ಯದಿಂದ 75 ಕ್ರೀಡಾಪಟುಗಳನ್ನು ಕಳುಹಿಸುವ ಪ್ರಯತ್ನಕ್ಕೆ ಇನ್ನಷ್ಟು ಬಲ ಬರಲಿದೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಚಿವ ಡಾ. ನಾರಾಯಣಗೌಡ ಹೇಳಿದ್ದಾರೆ.

Join Whatsapp