ಸಂಸತ್ತಿನ ಸೆಂಟ್ರಲ್ ಹಾಲ್‌ನಲ್ಲಿ ನಡೆದ ನೆಹರು ಜನ್ಮದಿನಾಚರಣೆಗೆ ಸ್ಪೀಕರ್ ಗೈರು

Prasthutha|

ನವದೆಹಲಿ; ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರ ಜನ್ಮದಿನಾಚರಣೆ ಕಾರ್ಯಕ್ರಮಕ್ಕೆ ಆಡಳಿತ ಪಕ್ಷದ ಸರ್ವರೂ ಗೈರು ಹಾಜರಾಗುವ ಮೂಲಕ ಹೊಸ ಸಂಪ್ರದಾಯವನ್ನು ಹುಟ್ಟು ಹಾಕಿದ್ದಾರೆ.

- Advertisement -

ಸಂಸತ್ತಿನ ಸೆಂಟ್ರಲ್ ಹಾಲ್‌ನಲ್ಲಿ ಭಾನುವಾರ ನಡೆದ ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರ ಜನ್ಮ ದಿನಾಚರಣೆ ಕಾರ್ಯಕ್ರಮಕ್ಕೆ ರಾಜ್ಯಸಭಾಧ್ಯಕ್ಷ ಹಾಗೂ ಲೋಕಸಭೆಯ ಸ್ಪೀಕರ್ ಸೇರಿದಂತೆ ಕೇಂದ್ರ ಸರ್ಕಾರದ ಸಚಿವರು ಗೈರು ಹಾಜರಾಗಿದ್ದಾರೆ.

ನೆಹರು ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಸೇರಿದಂತೆ ಪಕ್ಷದ ಇನ್ನಿತರ ನಾಯಕರು ಪಾಲ್ಗೊಂಡಿದ್ದರು.

- Advertisement -

ಸರ್ಕಾರವನ್ನು ಪ್ರತಿನಿಧಿಸುವ ಯಾರೊಬ್ಬರೂ ಪ್ರಸ್ತುತ ಕಾರ್ಯಕ್ರಮದಲ್ಲಿ ಹಾಜರಾಗದೇ ಇರುವುದಕ್ಕೆ ವಿರೋಧ ಪಕ್ಷಗಳು ಟೀಕೆ ವ್ಯಕ್ತಪಡಿಸಿವೆ.

‘ಸಂಸತ್ತಿನ ಸೆಂಟ್ರಲ್ ಹಾಲ್‌ನಲ್ಲಿ ಭಾವಚಿತ್ರವನ್ನಿರಿಸಿದವರ ಜನ್ಮದಿನಾಚರಣೆಯ ಸಾಂಪ್ರದಾಯಿಕ ಸಮಾರಂಭದಲ್ಲಿ ಇಂದು ಅಸಾಧಾರಣ ದೃಶ್ಯವನ್ನು ಕಂಡೆ. ಲೋಕಸಭೆಯ ಸ್ಪೀಕರ್, ರಾಜ್ಯಸಭಾಧ್ಯಕ್ಷರು ಗೈರು ಹಾಜರಾಗಿದ್ದರು. ಒಬ್ಬ ಸಚಿವರೂ ಉಪಸ್ಥಿತರಿರಲಿಲ್ಲ. ಇದಕ್ಕಿಂತ ಕ್ರೌರ್ಯ ಇನ್ನೇನಿದೆ?’ ಎಂದು ಕಾಂಗ್ರೆಸ್‌ನ ರಾಜ್ಯಸಭಾ ಸದಸ್ಯ ಜೈರಾಮ್ ರಮೇಶ್ ಅವರು ಟ್ವೀಟ್ ಮಾಡಿದ್ದಾರೆ.

ಜೈರಾಮ್ ರಮೇಶ್ ಅವರ ಟ್ವೀಟ್ ಅನ್ನು ಟ್ಯಾಗ್ ಮಾಡಿರುವ ತೃಣಮೂಲ ಕಾಂಗ್ರೆಸ್‌ನ ನಾಯಕ ಡೆರೆಕ್ ಒಬ್ರಿಯಾನ್ ಅವರು ಕೂಡಾ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

‘ಇನ್ನು ಮುಂದೆ ಆಶ್ಚರ್ಯಪಡುವಂಥದ್ದು ನನಗೆ ಏನೂ ಇಲ್ಲ. ಭಾರತದ ಸಂಸತ್ತು ಸೇರಿದಂತೆ ಇನ್ನಿತರ ಶ್ರೇಷ್ಠ ಸಂಸ್ಥೆಗಳನ್ನು ಒಂದು ದಿನ ನಾಶಪಡಿಸಲಾಗುತ್ತದೆ’ ಎಂದೂ ಡೆರೆಕ್ ಟ್ವೀಟ್ ಮಾಡಿದ್ದಾರೆ.

ಇದಕ್ಕೂ ಮೊದಲು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಕೇವಲ ಒಂದೇ ಸಾಲಿನಲ್ಲಿ ನೆಹರು ಜನ್ಮದಿನದ ನಮನಗಳು ಎಂದು ಟ್ವೀಟ್ ಮಾಡಿದ್ದರು.

Join Whatsapp