ಕೆಲ ನಿವೃತ್ತ ನ್ಯಾಯಾಧೀಶರು ಭಾರತ ವಿರೋಧಿ ಗ್ಯಾಂಗ್’ನ ಭಾಗ; ದೇಶದ ವಿರುದ್ಧ ನಡೆದರೆ ಬೆಲೆ ತೆರಬೇಕು ಎಂದ ರಿಜಿಜು

Prasthutha|

ನವದೆಹಲಿ: ಕೆಲ ನಿವೃತ್ತ ನ್ಯಾಯಾಧೀಶರು ಭಾರತ ವಿರೋಧಿ ಗ್ಯಾಂಗ್’ನ ಭಾಗವಾಗಿದ್ದು ನ್ಯಾಯಾಂಗವನ್ನು ಸರ್ಕಾರದ ವಿರುದ್ಧ ಎತ್ತಿಕಟ್ಟಲು ಯತ್ನಿಸುತ್ತಿದ್ದಾರೆ. ಅವರು ರಾಷ್ಟ್ರದ ವಿರುದ್ಧ ನಡೆದರೆ ಬೆಲೆ ತೆರಬೇಕಾಗುತ್ತದೆ ಎಂದು ಕೇಂದ್ರ ಕಾನೂನು ಸಚಿವ ಕಿರೆನ್ ರಿಜಿಜು ಶನಿವಾರ ಎಚ್ಚರಿಸಿದ್ದಾರೆ.
ಇತ್ತೀಚೆಗೆ ನ್ಯಾಯಾಧೀಶರ ಹೊಣೆಗಾರಿಕೆಯ ಕುರಿತು ನಡೆಸಿದ ಸೆಮಿನಾರ್ ಪ್ರಸ್ತಾಪಿಸಿ ಇಂಡಿಯಾ ಟುಡೆ ಕಾನ್ಕ್ಲೇವ್ 2023ರಲ್ಲಿ ಕೇಳಲಾದ ಪ್ರಶ್ನೆಯೊಂದಕ್ಕೆ ಅವರು ಈ ರೀತಿ ಪ್ರತಿಕ್ರಿಯಿಸಿದರು.
ರಿಜಿಜು ಸಂವಾದದ ಪ್ರಮುಖಾಂಶಗಳು
(ರಾಜಕೀಯ ಪಕ್ಷಗಳ) ಕಾರ್ಯಕರ್ತರಂತೆ ವರ್ತಿಸುವ ಕೆಲ ನ್ಯಾಯಾಧೀಶರು ಇದ್ದಾರೆ. ಅವರು ಭಾರತ ವಿರೋಧಿ ಗ್ಯಾಂಗ್’ನ ಭಾಗವಾಗಿದ್ದು ವಿರೋಧ ಪಕ್ಷಗಳಂತೆ ನ್ಯಾಯಾಂಗವನ್ನು ಸರ್ಕಾರದ ವಿರುದ್ಧ ಎತ್ತಿಕಟ್ಟುತ್ತಿದ್ದಾರೆ. ಇಂತಹ ಜನ ಕಾರ್ಯಾಂಗವನ್ನು ನಿಯಂತ್ರಿಸಬೇಕು ಎಂದು ಹೇಗೆ ಹೇಳಬಲ್ಲರು? ಯಾರೂ ನುಣುಚಿಕೊಳ್ಳಲು ಸಾಧ್ಯವಿಲ್ಲ. ಯಾರು ದೇಶದ ವಿರುದ್ಧ ತಿರುಗಿಬೀಳುತ್ತಾರೋ ಅವರು ಬೆಲೆ ತೆರಬೇಕಾಗುತ್ತದೆ.
ಸಂವಿಧಾನದ ಪ್ರಕಾರ ನ್ಯಾಯಾಧೀಶರ ನೇಮಕಾತಿ ಸರ್ಕಾರಕ್ಕೆ ಸೇರಿದ ವಿಚಾರ. ರಾಷ್ಟ್ರಪತಿಗಳು ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ ನ್ಯಾಯಮೂರ್ತಿಗಳನ್ನು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಮತ್ತು ಹೈಕೋರ್ಟ್ಗಳ ಮುಖ್ಯ ನ್ಯಾಯಮೂರ್ತಿಗಳೊಂದಿಗೆ ಸಮಾಲೋಚಿಸಿ ನೇಮಕ ಮಾಡಬೇಕು. ಆದರೆ ಕಾಂಗ್ರೆಸ್ ಪಕ್ಷದ ತಪ್ಪು ಹೆಜ್ಜೆಗಳು ಮತ್ತು ನ್ಯಾಯಾಂಗದ ಹಿಡಿತ ಸಾಧಿಸುವ ಮನಸ್ಥಿತಿಯಿಂದಾಗಿ ಕೊಲಿಜಿಯಂ ವ್ಯವಸ್ಥೆ ಜಾರಿಗೆ ಬಂತು. ಆದರೂ, ಹೊಸ ವ್ಯವಸ್ಥೆ ಜಾರಿಗೆ ಬರುವವರೆಗೆ ಕೇಂದ್ರ ಸರ್ಕಾರ ಕೊಲಿಜಿಯಂ ಪದ್ಧತಿಯನ್ನೇ ಪಾಲಿಸಲಿದೆ. ನ್ಯಾಯಮೂರ್ತಿಗಳ ನೇಮಕ ಆಡಳಿತಾತ್ಮಕ ಕೆಲಸವಾಗಿದ್ದು, ಸರ್ಕಾರ ಮುತುವರ್ಜಿ ವಹಿಸಲೇಬೇಕಿದೆ
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸದಾ ಅಭಿಪ್ರಾಯ ಭೇದ ಇರುತ್ತದೆ. ಮೂರು ಅಂಗಗಳ ನಡುವೆ ಪರಸ್ಪರ ವಿರುದ್ಧವಾಗಿ ನಡೆಯುವಂತಹ ಸಮಸ್ಯೆಗಳಿರುತ್ತವೆ, ಆದರೆ ಇದನ್ನು ನಾವು ಯಾವಾಗಲೂ ನ್ಯಾಯಾಂಗ ಸ್ವಾತಂತ್ರ್ಯಕ್ಕೆ ಬದ್ಧರಾಗಿದ್ದು ಅದನ್ನು ಬಲಪಡಿಸುತ್ತೇವೆ. ನ್ಯಾಯಾಂಗದೊಂದಿಗೆ ಘರ್ಷಣೆಗಿಳಿಯುತ್ತೇವೆ ಎಂದು ಹೇಳುವುದು ಸರಿಯಲ್ಲ.
(ಭಾರತ ಚುನಾವಣಾ ಆಯೋಗದ (ಇಸಿಐ) ಸದಸ್ಯರ ನೇಮಕವನ್ನು ಸಮಿತಿಯ ಸಲಹೆಯ ಮೇರೆಗೆ ಮಾಡಬೇಕು ಎಂದು ಸುಪ್ರೀಂ ಕೋರ್ಟ್ ಸಾಂವಿಧಾನಿಕ ಪೀಠದ ತೀರ್ಪಿನ ಕುರಿತು ಅಭಿಪ್ರಾಯ ಹಂಚಿಕೊಳ್ಳುತ್ತಾ) ” ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಅಥವಾ ನ್ಯಾಯಮೂರ್ತಿಗಳು ಪ್ರತಿ ನೇಮಕಾತಿಗಳಲ್ಲೂ ಮಗ್ನರಾದರೆ ನ್ಯಾಯಿಕ ಕಾರ್ಯವನ್ನು ಯಾರು ಮುಂದುವರಿಸುತ್ತಾರೆ?”

- Advertisement -

ತೀರ್ಪನ್ನು ಟೀಕಿಸುತ್ತಿಲ್ಲ, ಆದರೆ ನ್ಯಾಯಮೂರ್ತಿಗಳು ಮೂಲತಃ ನ್ಯಾಯಿಕ ಆದೇಶ ಮತ್ತು ಕಾರ್ಯಗಳಲ್ಲಿ ತೊಡಗಬೇಕು ಎಂದರು.
(ಸಲಿಂಗ ವಿವಾಹದ ಕುರಿತು ಮಾತನಾಡುತ್ತಾ) ಸಂಸತ್ತು ಜನರ ದೃಷ್ಟಿಕೋನ ಮತ್ತು ಅವರ ಆಯ್ಕೆಯ ಪ್ರತಿಬಿಂಬವಾಗಿದೆ. ಹೀಗಾಗಿ ವಿವಾಹ ಎಂಬ ಸಂಸ್ಥೆಯನ್ನು ಹೇಗೆ ನಿರ್ವಹಿಸಬೇಕು ಎಂಬುದನ್ನು ಸಂಸತ್ತಿನಲ್ಲಿ ಚರ್ಚಿಸಬೇಕಿದೆ. ಭಾರತದ ನ್ಯಾಯಾಂಗದ ಮೇಲೆ ಭಾರತಿ ಒತ್ತಡವಿದ್ದು, ಒತ್ತಡದಲ್ಲಿರುವ ನ್ಯಾಯಾಧೀಶರುಗಳಿಗೆ ರಜೆಯ ಅಗತ್ಯವಿರುತ್ತದೆ.
(ಕೃಪೆ: ಬಾರ್ & ಬೆಂಚ್)

Join Whatsapp