ಸಿಲಿಕಾನ್‌ ಸಿಟಿಯನ್ನು ಸ್ವಿಮ್ಮಿಂಗ್‌ ಪೂಲ್‌ ಮಾಡಿದ ಹೆಗ್ಗಳಿಕೆ ಬಿಜೆಪಿ ಸರಕಾರಕ್ಕೇ ಸಲ್ಲಬೇಕು: ಹೆಚ್.ಡಿ.ಕೆ ವಾಗ್ದಾಳಿ

Prasthutha|

ಬೆಂಗಳೂರು: ಸಿಲಿಕಾನ್‌ ಸಿಟಿಯನ್ನು ಸ್ವಿಮ್ಮಿಂಗ್‌ ಪೂಲ್‌ ಮಾಡಿದ ಹೆಗ್ಗಳಿಕೆ ಬಿಜೆಪಿ ಸರಕಾರಕ್ಕೇ ಸಲ್ಲಬೇಕು. ಅಭಿವೃದ್ಧಿಯಲ್ಲಿ ಕ್ಷೇತ್ರವಾರು ತಾರತಮ್ಮ ಮಾಡಿ, ಒಂದು ಕಣ್ಣಿಗೆ ಸುಣ್ಣ, ಇನ್ನೊಂದು ಕಣ್ಣಿಗೆ ಬೆಣ್ಣೆ ಎನ್ನುವ ನೀತಿ ಖಂಡನೀಯ. ಅನುದಾಲದ ಹೊಳೆ ಹರಿದ ಕ್ಷೇತ್ರಗಳೇ ಈಗ ನೀರಿನಲ್ಲಿ ತೇಲುತ್ತಿವೆ ಎಂದು ಆರೋಪಿಸಿದ ಮಾಜಿ ಸಿಎಂ ಕುಮಾರಸ್ವಾಮಿ ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

- Advertisement -

ಈ ಕುರಿತು ಸರಣಿ ಟ್ವೀಟ್ ಮಾಡಿರುವ ಅವರು, ನಾಡಪ್ರಭು ಕೆಂಪೇಗೌಡರು ಸರ್ವ ಜನಾಂಗದ ಜನರನ್ನು ಸಮಭಾವದಿಂದ ಕಂಡು ಸರ್ವ ಜನಾಂಗದ ತೋಟ ನಿರ್ಮಿಸಿದ್ದರು. ಪ್ರಭುಗಳು ಕಟ್ಟಿದ ಬೆಂಗಳೂರಿನ ಯಲಹಂಕದಲ್ಲಿ ಅಭಿವೃದ್ಧಿ ವಿಚಾರದಲ್ಲಿ ನಿರ್ದಿಷ್ಟವಾಗಿ ಒಂದು ಸಮುದಾಯವನ್ನೇ ಸಂಪೂರ್ಣವಾಗಿ ನಿರ್ಲಕ್ಷ್ಯ ಮಾಡಿ, ಅವರು ವಾಸಿಸುವ ಬಡಾವಣೆಯನ್ನು ಕಡೆಗಣಿಸಿ ಅವರನ್ನು ಟಾರ್ಗೆಟ್‌ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.

ಮಳೆಯಿಂದ ತೀವ್ರ ಹಾನಿಗೆ ತುತ್ತಾಗಿರುವ ಪ್ರದೇಶಗಳಿಗೆ ಭೇಟಿ ನೀಡುತ್ತಿರುವ ನಾನು, ಶನಿವಾರದಂದು ಬ್ಯಾಟರಾಯನಪುರ, ಹೆಬ್ಬಾಳ, ಯಲಹಂಕ ವಿಧಾನಸಭೆ ಕ್ಷೇತ್ರಗಳನ್ನು ವೀಕ್ಷಣೆ ಮಾಡಿದ್ದೆ. ಆಗ ನನಗೆ ʼರಿಪಬ್ಲಿಕ್ ಆಫ್ ಯಲಹಂಕʼದ ಮಹಾದರ್ಶನವೇ ಆಯಿತು ಎಂದು ಅವರು ಕಿಡಿಕಾರಿದ್ದಾರೆ.

- Advertisement -

ಯಲಹಂಕದ ಕೋಗಿಲು ಕ್ರಾಸ್‌ ಬಳಿಯ ಕೇಂದ್ರೀಯ ಅಪಾರ್ಟ್ʼಮೆಂಟ್ʼಗೆ ಭೇಟಿ ನೀಡಿ ಮಳೆಹಾನಿ ವೀಕ್ಷಣೆ ಮಾಡುವ ವೇಳೆ ನೈಜ ಸಂತ್ರಸ್ತರೇ ಅಹವಾಲು ಹೇಳಿಕೊಳ್ಳಲು ಮುಂದೆ ಬಾರದೇ ಇರುವುದು ನನ್ನನ್ನು ಚಕಿತಗೊಳಿಸಿತು ಎಂದು ತಿಳಿಸಿದ್ದಾರೆ.

ಆ ಅಪಾರ್ಟ್ʼಮೆಂಟ್ ವೀಕ್ಷಣೆ ಮಾಡಲು ನಾನು ಹೋದರೆ ಅಲ್ಲಿನ ನಿವಾಸಿಗಳನ್ನು ಸ್ಥಳೀಯ ಶಾಸಕರು, ಮತ್ತವರ ಪಟಾಲಂ ಹೆದರಿಸಿದ್ದಾರೆನ್ನುವ ಮಾಹಿತಿ ಸಿಕ್ಕಿತು. ಯಾರಾದರೂ ನನ್ನನ್ನು ಭೇಟಿಯಾಗಿ ದೂರು ಕೊಟ್ಟರೆ ಇಡೀ ಅಪಾರ್ಟ್ʼಮೆಂಟ್ ಅನ್ನೇ ನೆಲಸಮ ಮಾಡಿಸುತ್ತೇವೆ ಎಂದು ಶಾಸಕರ ಗ್ಯಾಂಗ್‌ ಧಮ್ಕಿ ಹಾಕಿದೆ ಎಂಬ ಮಾಹಿತಿ ಲಭಿಸಿದೆ ಎಂದು ತಿಳಿಸಿದ್ದಾರೆ.

ಯಲಹಂಕದ ಚಿಕ್ಕಬೆಟ್ಟಹಳ್ಳಿಗೆ ಭೇಟಿ ನೀಡಿದಾಗ ಅಭಿವೃದ್ಧಿ ತಾರತಮ್ಯದ ವಿಶ್ವರೂಪ ದರ್ಶನವೇ ಆಯಿತು. ಡಾಂಬರು ಇಲ್ಲದ ರಸ್ತೆಗಳು, ವಿದ್ಯುತ್ ದೀಪಗಳು ಇಲ್ಲದ ಬೀದಿಗಳು, ಕನಿಷ್ಠ ಮೂಲಸೌಕರ್ಯವೂ ಇಲ್ಲದ ಪ್ರದೇಶಗಳು ಕಂಡವು ಎಂದು ಗುಡುಗಿದ್ದಾರೆ.

ಚುನಾವಣೆಯಲ್ಲಿ ಚಿಕ್ಕಬೆಟ್ಟಹಳ್ಳಿ ಜನ ಮತ ಕೊಡಲಿಲ್ಲ ಅಂತ ಶಾಸಕರು ಈ ಪ್ರದೇಶವನ್ನು ಸಂಪೂರ್ಣವಾಗಿ ಕಡೆಗಣಿಸಿದ್ದಾರೆ. ಇಷ್ಟೊಂದು ಕೀಳು ಮಟ್ಟದ ರಾಜಕಾರಣ ಮಾಡಬಾರದು ಎನ್ನುವುದು ನನ್ನ ಸ್ಪಷ್ಟ ಅಭಿಪ್ರಾಯ. ನಾನೆಂದೂ, ಎಲ್ಲಿಯೂ ಇಂಥ ಕೆಟ್ಟ ರಾಜಕೀಯ ನೋಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅವರು ದೇಶದ್ರೋಹಿಗಳು, ಇವರು ರಾಷ್ಟ್ರವಿರೋಧಿಗಳು ಎಂದು ಹಣೆಪಟ್ಟಿ ಕಟ್ಟುವ ಬಿಜೆಪಿ ನಾಯಕರು ಮತ್ತು ಶಾಸಕರು, ಅಭಿವೃದ್ಧಿಯಲ್ಲಿ ನಿರ್ದಿಷ್ಟ ಸಮುದಾಯದ ಜನ ವಾಸಿಸುತ್ತಿರುವ ಪ್ರದೇಶಕ್ಕೆ ತಾರತಮ್ಯ ಎಸಗಿರುವುದೇ ದೊಡ್ಡ ದೇಶದ್ರೋಹ. ಇದಕ್ಕಿಂತ ಮಿಗಿಲಾದ ಪಾಪದ ಕೆಲಸ ಮತ್ತೊಂದಿಲ್ಲ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.
ಸಿಲಿಕಾನ್‌ ಸಿಟಿಯನ್ನು ಸ್ವಿಮ್ಮಿಂಗ್‌ ಪೂಲ್‌ ಮಾಡಿದ ಹೆಗ್ಗಳಿಕೆ ಬಿಜೆಪಿ ಸರಕಾರಕ್ಕೇ ಸಲ್ಲಬೇಕು. ಅಭಿವೃದ್ಧಿಯಲ್ಲಿ ಕ್ಷೇತ್ರವಾರು ತಾರತಮ್ಮ ಮಾಡಿ, ಒಂದು ಕಣ್ಣಿಗೆ ಸುಣ್ಣ, ಇನ್ನೊಂದು ಕಣ್ಣಿಗೆ ಬೆಣ್ಣೆ ಎನ್ನುವ ನೀತಿ ಖಂಡನೀಯ. ಅನುದಾಲದ ಹೊಳೆ ಹರಿದ ಕ್ಷೇತ್ರಗಳೇ ಈಗ ನೀರಿನಲ್ಲಿ ತೇಲುತ್ತಿವೆ ಎಂದು ಆರೋಪಿಸಿದ್ದಾರೆ.
ಚಿಕ್ಕಬೆಟ್ಟಹಳ್ಳಿಗೆ ಒಂದು ತಿಂಗಳ ಒಳಗಾಗಿ ಮೂಲಸೌಕರ್ಯ ಕಲ್ಪಿಸುವ ಕೆಲಸಗಳು ಶುರುವಾಗಬೇಕು. ತಪ್ಪಿದರೆ ಖುದ್ದು ನಾನೇ ಅಲ್ಲಿಗೆ ಹೋಗಿ ಧರಣಿ ಕೂರಬೇಕಾಗುತ್ತದೆ. ಜಾತಿ, ಧರ್ಮದ ಹೆಸರಿನಲ್ಲಿ ಅಭಿವೃದ್ಧಿ ತಾರತಮ್ಯ ಮಾಡುವುದು ಹೇಯ, ರಾಕ್ಷಸಿ ಮನಸ್ಥಿತಿ ಎನ್ನದೇ ವಿಧಿ ಇಲ್ಲ ಎಂದು ತಿಳಿಸಿದ್ದಾರೆ.

Join Whatsapp