ಕಾರು, ಸ್ಕೂಟರ್ ಮುಖಾಮುಖಿ: ಫ್ಲೈಓವರ್ ನಿಂದ ಕೆಳಗೆ ಬಿದ್ದು ಚರ್ಮುರಿ ವ್ಯಾಪಾರಿ ಸಾವು

Prasthutha|

ಬೆಂಗಳೂರು: ವಿಮಾನವನ್ನು ತೋರಿಸಲು ನಾದಿನಿಯ ಮಗನನ್ನು ಸ್ಕೂಟರ್ ನಲ್ಲಿ ಕರೆದುಕೊಂಡು ಹೋಗುತ್ತಿದ್ದ ಚರ್ಮುರಿ ವ್ಯಾಪಾರಿಯೊಬ್ಬರಿಗೆ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದ ಪರಿಣಾಮ ಆತ ಫ್ಲೈಓವರ್ ನಿಂದ ಕೆಳಗೆ ಬಿದ್ದು ದಾರುಣವಾಗಿ ಮೃತಪಟ್ಟ ಘಟನೆ ವರದಿಯಾಗಿದೆ.

- Advertisement -

ಜಕ್ಕೂರು ಲೇಔಟ್ ಚರ್ಮುರಿ ವ್ಯಾಪಾರಿ ಗೋವಿಂದಪ್ಪ ಎಂಬಾತನೇ ಮೃತಪಟ್ಟಿದ್ದು, ಆತನ ತಂಗಿಯ ಮಗ ಸಂಜಯ್ ಗೆ ತೀವ್ರವಾದ ಗಾಯಗಳಾಗಿದೆ. ಸದ್ಯ ಆತ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆರೋಗ್ಯ ಸ್ಥಿತಿ ಚಿಂತಾಜನಕವಾಗಿದೆ ಎಂದು ಡಿಸಿಪಿ ಸವಿತಾ ತಿಳಿಸಿದ್ದಾರೆ.

ಜಕ್ಕೂರು ಏರೋ ಡ್ರಂನಲ್ಲಿರುವ ವಿಮಾನವನ್ನು ನಾದಿನಿಯ ಮಗನಿಗೆ ತೋರಿಸುವ ಸಲುವಾಗಿ ಯಲಹಂಕದಿಂದ ಸ್ಕೂಟರ್ ನಲ್ಲಿ ಬರುತ್ತಿದ್ದಾಗ ಜಕ್ಕೂರು ಪ್ಲೈಓವರ್ ನಲ್ಲಿ ಅತೀವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದ ಕಾರು ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ನಡೆದಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

- Advertisement -

ಡಿಕ್ಕಿಯಿಂದಾಗಿ ಗೋವಿಂದಪ್ಪ ಪ್ಲೈಓವರ್ ನಿಂದ ಕೆಳಗೆ ಬಿದ್ದು ತಲೆ ಮತ್ತು ದೇಹದ ಇತರ ಭಾಗಕ್ಕೆ ಗಂಭೀರವಾದ ಗಾಯವಾದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಮೃತ ಗೋವಿಂದಪ್ಪನ ಪತ್ನಿ ಶಶಿಕಲ ನೀಡಿದ ದೂರಿನ ಆಧಾರದಲ್ಲಿ ಯಲಹಂಕ ಸಂಚಾರಿ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಿದ್ದಾರೆ.

Join Whatsapp