ಶ್ಯಾಮಪ್ರಸಾದ್ ಶಾಸ್ತ್ರಿ ಆತ್ಮಹತ್ಯೆ ಪ್ರಕರಣ: ಡಾ.ಪ್ರಭಾಕರ ಭಟ್ ವಿರುದ್ಧದ ಪ್ರಕರಣ ರದ್ದು

Prasthutha|

ಬೆಂಗಳೂರು: ರಾಘವೇಶ್ವರ ಸ್ವಾಮಿ ಪ್ರಕರಣದಲ್ಲಿ ರಾಜ್ಯ ಹೈಕೋರ್ಟ್ ಇಂದು ಮಹತ್ವದ ಆದೇಶ ನೀಡಿದೆ. ಪುತ್ತೂರಿನಲ್ಲಿ ರಾಮಚಂದ್ರಾಪುರ ಮಠದ ಭಕ್ತ ಎನ್ನಲಾದ ಬಂಟ್ವಾಳ ಸಮೀಪದ ಕೆದಿಲ ನಿವಾಸಿ ಶ್ಯಾಮಪ್ರಸಾದ್ ಶಾಸ್ತ್ರಿ ಆತ್ಮಹತ್ಯೆ ಪ್ರಕರಣದಲ್ಲಿ ರಾಘವೇಶ್ವರ ಸ್ವಾಮಿ ಹಾಗೂ ಆರ್.ಎಸ್.ಎಸ್. ನಾಯಕ ಡಾ.ಕಲ್ಲಡ್ಕ ಪ್ರಭಾಕರ ಭಟ್ ಅವರ ವಿರುದ್ದದ ಆರೋಪಗಳನ್ನು ಹೈಕೋರ್ಟ್ ರದ್ದುಪಡಿಸಿದೆ.

- Advertisement -


ಕರಾವಳಿ-ಮಲೆನಾಡು ಜಿಲ್ಲೆಗಳಲ್ಲಿ ಶಾಸ್ತ್ರಿ ಆತ್ಮಹತ್ಯೆ ಪ್ರಕರಣ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ರಾಘವೇಶ್ವರ ಸ್ವಾಮಿ ವಿರುದ್ದ ಹಲವು ಪ್ರಕರಣಗಳು ಮುನ್ನಲೆಗೆ ಬಂದ ಸಂದರ್ಭದಲ್ಲೇ ರಾಮಚಂದ್ರಾಪುರ ಮಠದ ಭಕ್ತ ಎನ್ನಲಾಗಿದ್ದ ಶ್ಯಾಮಪ್ರಸಾದ್ ಶಾಸ್ತ್ರಿ ಎಂಬವರು ಕೋವಿಯಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು.

2014ರ ಆಗಸ್ಟ್ 31ರಂದು ನಡೆದಿದ್ದ ಈ ಘಟನೆಗೆ ಸಂಬಂಧಿಸಿದಂತೆ ಪುತ್ತೂರು ನಗರ ಠಾಣೆಯಲ್ಲಿ ದೂರು ದಾಖಲಾಗಿದ್ದು, ರಾಮಚಂದ್ರಾಪುರ ಮಠದವರ ಬೆದರಿಕೆಗಳೇ ಈ ಘಟನೆಗೆ ಕಾರಣ ಎಂದು ಮೃತರ ಪತ್ನಿ ದೂರಿದ್ದರು. ಈ ಪ್ರಕರಣದಲ್ಲಿ ರಾಘವೇಶ್ವರ ಸ್ವಾಮಿ, ಉದ್ಯಮಿ ಬೋನಂತಾಯ ಶಿವಶಂಕರ ಭಟ್, ಹಾಗೂ ಆರೆಸ್ಸೆಸ್ ನಾಯಕ ಪ್ರಭಾಕರ ಭಟ್ ಅವರನ್ನು ಆರೋಪಿಗಳೆಂದು ಪರಿಗಣಿಸಿ ಸಿಐಡಿ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

- Advertisement -


ಡಾ.ಪ್ರಭಾಕರ ಭಟ್ ಪರ ವಾದ ಮಂಡಿಸಿದ ಹಿರಿಯ ವಕೀಲರಾದ ಪಿ.ಪಿ.ಹೆಗ್ಡೆ, ಈ ಪ್ರಕರಣದಲ್ಲಿ ಗಣ್ಯರ ವಿರುದ್ದ ದುರುದ್ದೇಶದಿಂದ ಪ್ರಚೋದನೆಯ ಸುಳ್ಳು ಆರೋಪ ಹೊರಿಸಲಾಗಿದೆ. ಯಾವುದೇ ಸಾಕ್ಷ್ಯಾಧಾರವಿಲ್ಲದೆ ಸಿಐಡಿ ಪೊಲೀಸರು ದೋಷಾರೋಪ ಹೊರಿಸಿದ್ದಾರೆ ಎಂದು ನ್ಯಾಯಪೀಠದ ಗಮನಸೆಳೆದರು. ವಾದವನ್ನು ಆಲಿಸಿದ ಹೈಕೋರ್ಟ್ ಪೀಠ, ರಾಘವೇಶ್ವರ ಸ್ವಾಮಿ ಹಾಗೂ ಡಾ.ಪ್ರಭಾಕರ ಭಟ್ ವಿರುದ್ದದ ದೋಷಾರೋಪವನ್ನೇ ರದ್ದುಪಡಿಸಿತು ಎಂದು ಪಿ.ಪಿ.ಹೆಗ್ಡೆ ಮಾಧ್ಯಮಗಳಿಗೆ ತಿಳಿಸಿದ್ದಾರೆ.

Join Whatsapp