ಪಾಕ್ ಪರ ಘೋಷಣೆ ವಿವಾದ | ನೈಜ ಆರೋಪಿಗಳ ಬಂಧನಕ್ಕೆ ಒತ್ತಾಯಿಸಿ ಮಂಗಳೂರಿನಲ್ಲಿ ಇಂದು SDPI ವತಿಯಿಂದ ‘ಎಸ್.ಪಿ. ಕಚೇರಿ ಚಲೋ’

Prasthutha|

ಮಂಗಳೂರು : ಇತ್ತೀಚೆಗೆ ನಡೆದ ಗ್ರಾಮ ಪಂಚಾಯತ್ ಚುನಾವಣೆಯ ಮತ ಎಣಿಕೆಯ ದಿನ ಡಿ.30ರಂದು  ಬೆಳ್ತಂಗಡಿಯ ಉಜಿರೆಯ ಮತ ಎಣಿಕೆ ಕೇಂದ್ರದ ಹೊರಗೆ ತಮ್ಮ ಅಭ್ಯರ್ಥಿಗಳು ವಿಜಯಿಗಳಾದಾಗ ವಿವಿಧ ಪಕ್ಷಗಳ ಕಾರ್ಯಕರ್ತರು ವಿಜಯೋತ್ಸವದಲ್ಲಿ ತೊಡಗಿದ್ದರು. ಈ ವೇಳೆ ಬಿಜೆಪಿ-ಸಂಘಪರಿವಾರ ಬೆಂಬಲಿಗರ ಕಡೆಯಿಂದ ಪಾಕಿಸ್ತಾನ ಪರ ಘೋಷಣೆ ಕೂಗಲಾಗಿದೆ ಎನ್ನಲಾದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳ ಬಂಧನಕ್ಕೆ ಒತ್ತಾಯಿಸಿ ಇಂದು SDPI ವತಿಯಿಂದ ‘ಎಸ್ ಪಿ ಕಚೇರಿ ಚಲೋ’ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.

- Advertisement -

ಮತ ಎಣಿಕೆಯ ವೇಳೆ ಪಕ್ಷಗಳ ಬೆಂಬಲಿಗರು ತಮ್ಮ ಅಭ್ಯರ್ಥಿಗಳ ಗೆಲುವಿನ ಬಗ್ಗೆ ವಿಜಯೋತ್ಸವ ಆಚರಿಸುತ್ತಿದ್ದರು. ಆದರೆ, ಈ ಸಂದರ್ಭ ಎಸ್ ಡಿಪಿಐ ಕಾರ್ಯಕರ್ತರು ಪಾಕ್ ಪರ ಘೋಷಣೆ ಕೂಗಿದ್ದಾರೆ ಎಂಬ ಸುಳ್ಳು ಸುದ್ದಿಯನ್ನು ‘ದಿಗ್ವಿಜಯ ನ್ಯೂಸ್’ ಕನ್ನಡ ಟಿವಿ ಚಾನೆಲ್ ಪ್ರಸಾರ ಮಾಡಿತ್ತು. ಕೂಡಲೇ ಈ ಬಗ್ಗೆ ಎಸ್ ಡಿಪಿಐ ಮುಖಂಡರು ‘ದಿಗ್ವಿಜಯ ನ್ಯೂಸ್’ ವಿರುದ್ಧ ಬೆಳ್ತಂಗಡಿ ಠಾಣೆಯಲ್ಲಿ ದೂರು ನೀಡಿದರೂ, ಪೊಲೀಸರು ದೂರು ಸ್ವೀಕರಿಸಲು ನಿರಾಕರಿಸಿದರು. ಬಳಿಕ ಬಿಜೆಪಿ ನಾಯಕರ ಒತ್ತಡಕ್ಕೆ ಮಣಿದು, ಅಂದು ರಾತ್ರಿ 12 ಮಂದಿ SDPI ಕಾರ್ಯಕರ್ತರನ್ನು ವಶಕ್ಕೆ ಪಡೆದು, ಅವರಲ್ಲಿ ಮೂವರ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಿದ್ದಾರೆ ಎಂದು SDPI ಜಿಲ್ಲಾ ಕಾರ್ಯದರ್ಶಿ ಅನ್ವರ್ ಸಾದತ್ ಬಜತ್ತೂರು ಹೇಳಿದ್ದಾರೆ.

ಈ ಘಟನೆಯ ಹಿಂದೆ ಸಂಘ ಪರಿವಾರ ಹಾಗೂ ದಿಗ್ವಿಜಯ ನ್ಯೂಸ್ ಚಾನೆಲ್ ನ ವ್ಯವಸ್ಥಿತ ಷಡ್ಯಂತ್ರ ಅಡಗಿದೆ ಎಂಬ ಸಂಶಯಗಳು ಕಾಡತೊಡಗಿತ್ತು. ಇದೇ ಸಂದರ್ಭ ಉಜಿರೆಯ ಮತ ಎಣಿಕಾ ಕೇಂದ್ರದ ಹೊರಗಡೆ ಕೇಸರಿ ಧ್ವಜವನ್ನು ಹಿಡಿದಿದ್ದ ಬಿಜೆಪಿ-ಸಂಘಪರಿವಾರದ ಕಾರ್ಯಕರ್ತರು ಪಾಕ್ ಪರ ಘೋಷಣೆ ಕೂಗುತ್ತಿರುವ ವೀಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡತೊಡಗಿದೆ ಎಂದು ಅವರು ಹೇಳಿದ್ದಾರೆ.

- Advertisement -

ಇದರ ವಿರುದ್ಧ ನಾವು ಜ.7ರಂದು ಬೆಳ್ತಂಗಡಿ ಠಾಣೆಯ ಮುಂದೆ ಮುಷ್ಕರವನ್ನು ಹಮ್ಮಿಕೊಂಡಿದ್ದ ಸಂದರ್ಭ ಅಲ್ಲಿಗೆ ಬಂದ ಉನ್ನತ ಪೊಲೀಸ್ ಅಧಿಕಾರಿಗಳು ನಮ್ಮ ನಾಯಕರೊಂದಿಗೆ ಮಾತುಕತೆ ನಡೆಸಿ, ನಮ್ಮಿಂದ ತಪ್ಪಾಗಿದೆ. ನಮಗೆ ನಾಲ್ಕು ದಿನಗಳ ಕಾಲಾವಕಾಶ ಕೊಡಿ, ಖಂಡಿತ ನಾವು ನೈಜ ಆರೋಪಿಗಳನ್ನು ಬಂಧಿಸುತ್ತೇವೆ ಎಂದು ಮನವಿ ಮಾಡಿದ್ದರು. ಆದರೆ, ಯಾವುದೇ ಬಂಧನವಾಗಿಲ್ಲ ಎಂದು ಅನ್ವರ್ ಸಾದತ್ ಬಜತ್ತೂರು ತಿಳಿಸಿದ್ದಾರೆ.

ಬಂಧಿಸಿರುವ ಮೂವರು ಅಮಾಯಕರನ್ನು ಕೂಡಲೇ ಬಿಡುಗಡೆಗೊಳಿಸಬೇಕು. ನೈಜ್ಯ ಆರೋಪಿಗಳಾದ ಬಿಜೆಪಿ ಸಂಘಪರಿವಾರದ ಕಾರ್ಯಕರ್ತರನ್ನು ಬಂಧಿಸಬೇಕು ಹಾಗೂ ಸುಳ್ಳು ಮೊಕದ್ದಮೆ ದಾಖಲಿಸಿ ಅಮಾಯಕ ಯುವಕರನ್ನು ಜೈಲಿಗಟ್ಟಿದ ಬೆಳ್ತಂಗಡಿ ಪೊಲೀಸ್ ಉಪ ನಿರೀಕ್ಷಕರಾದ ನಂದಕುಮಾರ್ ರವರನ್ನು ಕೂಡಲೇ ಸೇವೆಯಿಂದ ಅಮಾನತುಗೊಳಿಸಬೇಕೆಂದು ಆಗ್ರಹಿಸಿ ಇಂದು ಹೋರಾಟ ನಡೆಯಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಇಂದು ಮಧ್ಯಾಹ್ನ 2:30 ಗಂಟೆಗೆ ಕ್ಲಾಕ್ ಟವರ್ ಬಳಿಯಿಂದ ಮೆರವಣಿಗೆ ಆರಂಭಗೊಳ್ಳಲಿದ್ದು, ಎಸ್ ಪಿ ಕಚೇರಿವರೆಗೂ ನಡೆಯಲಿದೆ ಎಂದು ಅವರು ಹೇಳಿದ್ದಾರೆ.  

Join Whatsapp