ಸಾವರ್ಕರ್ ಫೋಟೋ ವಿವಾದ: ಏಳು ಮಂದಿಯ ವಿರುದ್ಧ ಪ್ರಕರಣ, ಮೂವರ ಬಂಧನ

Prasthutha|

ಪುತ್ತೂರು: ಸಾವರ್ಕರ್ ಫೋಟೋ ವಿವಾದಕ್ಕೆ ಸಂಬಂಧಿಸಿ ಪುತ್ತೂರು ಪೊಲೀಸರು ಏಳು ಮಂದಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದು, ಈ ಪೈಕಿ ಮೂವರಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

- Advertisement -


ಸ್ವಾತಂತ್ರ್ಯದ ಅಮೃತ ಮಹೋತ್ಸವ ಅಂಗವಾಗಿ ಪುತ್ತೂರಿನ ಕಬಕ ಗ್ರಾಮ ಪಂಚಾಯತ್ ನಲ್ಲಿಂದು ವಾಹನ ಜಾಥ ಏರ್ಪಡಿಸಲಾಗಿತ್ತು. ಜಾಥಾದ ವಾಹನದಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಫೋಟೋದ ಮಧ್ಯದಲ್ಲಿ ಸಾವರ್ಕರ್ ಫೋಟೋ ಕೂಡ ಕಂಡುಬಂದಿದ್ದರಿಂದ ಸ್ಥಳೀಯ ಎಸ್ ಡಿಪಿಐನ ಸದಸ್ಯರು ಮತ್ತು ಕಾರ್ಯಕರ್ತರು ಆಕ್ಷೇಪ ವ್ಯಕ್ತಪಡಿಸಿ ವಾಹನಕ್ಕೆ ತಡೆವೊಡ್ಡಿದ್ದರು. ಮಾತ್ರವಲ್ಲ ಸಾವರ್ಕರ್ ಫೋಟೋ ತೆಗೆಯುವಂತೆ ಒತ್ತಾಯಿಸಿದ್ದರು.


ಈ ವೇಳೆ ಮಾತಿನ ಚಕಮಕಿ ನಡೆದು ಗೊಂದಲದ ವಾತಾವರಣ ಸೃಷ್ಟಿಯಾಗಿತ್ತು. ಸ್ಥಳಕ್ಕೆ ಪೊಲೀಸರು ಧಾವಿಸಿ ಉಭಯ ಕಡೆಯವರನ್ನು ಸಮಾಧಾನ ಪಡಿಸಿ ವಾಹನ ಮುಂದುವರಿಯಲು ಅವಕಾಶ ಮಾಡಿಕೊಟ್ಟರು.
ಬಳಿಕ ಸಾವರ್ಕರ್ ಭಾವಚಿತ್ರ ಅಳವಡಿಸುವ ಮೂಲಕ ನಿಜವಾದ ಸ್ವಾತಂತ್ರ್ಯ ಹೋರಾಟಗಾರರಿಗೆ ಅವಮಾನ ಮಾಡಲಾಗಿದೆ. ಇದಕ್ಕೆ ಕಾರಣರಾದವರ ಮೇಲೆ ಕಾನೂನು ಕ್ರಮಕೈಗೊಳ್ಳುವಂತೆ ಒತ್ತಾಯಿಸಿ ಎಸ್ ಡಿಪಿಐ ಮುಖಂಡರು ಪೊಲೀಸ್ ಠಾಣೆಗೆ ದೂರು ಸಲ್ಲಿಸಿದರು. ಈ ಮಧ್ಯೆ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಕೂಡ ವಾಹನ ಜಾಥಾಕ್ಕೆ ಅಡ್ಡಿಪಡಿಸಿದವರ ವಿರುದ್ಧ ಕ್ರಮಕೈಗೊಳ್ಳುವಂತೆ ದೂರು ನೀಡಿದ್ದರು.
ಪೊಲೀಸರು ಎಸ್ ಡಿಪಿಐ ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಅಝೀಝ್, ನೌಷಾದ್, ಶಮೀರ್, ಹಾರೀಸ್, ಅದ್ದು, ತೌಸೀಫ್, ಶಾಫಿ ಮತ್ತು ಇತರರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಈ ಪೈಕಿ ವಿದ್ಯಾಪುರ ನಿವಾಸಿ ಕೆ.ಅಝೀಝ್, ಮುರ ನಿವಾಸಿ ಶಮೀರ್ ಹಾಗೂ ಕೊಡಿಪ್ಪಾಡಿ ನಿವಾಸಿ ಅಬ್ದುಲ್ ರಹಿಮಾನ್ ಅವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ನ್ಯಾಯಾಲಯವು ಅವರನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಿದೆ. ಕೋವಿಡ್ ನಿಯಮಾವಳಿ ಉಲ್ಲಂಘಿಸಿದ ಹಾಗೂ ಸ್ವಾತಂತ್ರ್ಯ ದಿನ ಆಚರಿಸಲು ಅಡ್ಡಿಪಡಿಸಿದ ಪ್ರಕರಣಗಳನ್ನು ಆರೋಪಿಗಳ ವಿರುದ್ಧ ದಾಖಲಿಸಲಾಗಿದೆ.

- Advertisement -


ದೇಶದ್ರೋಹಿಗಳ ವಿರುದ್ಧ ಕಾನೂನು ಹೋರಾಟ: ಎಸ್ ಡಿಪಿಐ
ಜಿಲ್ಲಾ ಪೊಲೀಸರು, ಆರ್ ಎಸ್ಎಸ್ ನಾಯಕರ ಒತ್ತಡಕ್ಕೆ ಮಣಿದು ದೇಶದ್ರೋಹಿ ಸಾವರ್ಕರ್ ವಿರುದ್ಧ ಧ್ವನಿ ಎತ್ತಿದ ಎಸ್ ಡಿಪಿಐ ಕಾರ್ಯಕರ್ತರನ್ನು ಬಂಧಿಸಿರುವುದು ದುರದೃಷ್ಟಕರ. ದೇಶದ್ರೋಹಿ ಸಾವರ್ಕರ್ ಫೋಟೋ ಹಾಕಿದವರ ಮೇಲೆ ನಿಜವಾಗಿಯೂ ದೇಶದ್ರೋಹ ಪ್ರಕರಣ ದಾಖಲಿಸಬೇಕಾಗಿತ್ತು. ಆದರೆ ಪೊಲೀಸರು ಒತ್ತಡಕ್ಕೆ ಮಣಿದು ಪಕ್ಷದ ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಇದರ ವಿರುದ್ಧ ಪಕ್ಷ ಕಾನೂನು ಹೋರಾಟ ನಡೆಸಲಿದೆ ಎಂದು ಎಸ್ ಡಿಪಿಐ ಜಿಲ್ಲಾಧ್ಯಕ್ಷ ಅಥಾವುಲ್ಲಾ ಜೋಕಟ್ಟೆ ತಿಳಿಸಿದ್ದಾರೆ.


ಸ್ವಾತಂತ್ರ್ಯ ಸೇನಾನಿಗಳಿಗೆ ಅವಮಾನ ಮಾಡಿದ ಗ್ರಾಮ ಪಂಚಾಯತ್ ಸದಸ್ಯರು ಸೇರಿದಂತೆ ಇತರರ ವಿರುದ್ಧ ಕಾನೂನು ಹೋರಾಟ ನಡೆಸಲಾಗುವುದು. ಈ ಹೋರಾಟವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಲಾಗುವುದು. ಸ್ವಾತಂತ್ರ್ಯ ಹೋರಾಟಗಾರರಿಗೆ ಆದ ಅವಮಾನವನ್ನು ಖಂಡಿಸಿ, ದೇಶದ್ರೋಹಿಗಳ ವಿರುದ್ಧ ಹೋರಾಟ ಮಾಡಿ ತಮ್ಮ ನೈಜ ದೇಶಪ್ರೇಮವನ್ನು ಪ್ರದರ್ಶಿಸಿದ ನಮ್ಮ ಪಕ್ಷದ ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸುತ್ತೇವೆ ಎಂದು ಅಥಾವುಲ್ಲಾ ಜೋಕಟ್ಟೆ ತಿಳಿಸಿದ್ದಾರೆ.

Join Whatsapp