ಹಿಂದಿ ಜೊತೆಗೆ ಸಂಸ್ಕೃತಕ್ಕೆ ರಾಷ್ಟ್ರ ಭಾಷೆಯ ಮಾನ್ಯತೆ ನೀಡಲು ಬಿಜೆಪಿ ಸಂಸದ ಆಗ್ರಹ

Prasthutha|

ಹೊಸದಿಲ್ಲಿ: ಹಿಂದಿ ಭಾಷೆಯ ಜೊತೆಗೆ ಸಂಸ್ಕೃತಕ್ಕೂ ರಾಷ್ಟ್ರ ಭಾಷೆಯ ಮಾನ್ಯತೆ ನೀಡುವಂತೆ ಬಿಜೆಪಿ ಸಂಸದ ಪುಷ್ಪೇಂದ್ರ ಸಿಂಗ್ ಚಂದೇಲ್‌ ಆಗ್ರಹಿಸಿದ್ದಾರೆ.

- Advertisement -

ಸಂಸ್ಕೃತ ಮತ್ತು ಹಿಂದಿ ಎರಡಕ್ಕೂ ರಾಷ್ಟ್ರೀಯ ಭಾಷೆ ಸ್ಥಾನಮಾನ ನೀಡುವಂತೆ ಬಿಜೆಪಿ ಸಂಸದ ಪುಷ್ಪೇಂದ್ರ ಸಿಂಗ್ ಚಂದೇಲ್‌ ಆಗ್ರಹಿಸಿದ್ದಾರೆ.

ಲೋಕಸಭೆಯಲ್ಲಿ ಈ ವಿಷಯ ಪ್ರಸ್ತಾಪಿಸಿದ ಉತ್ತರ ಪ್ರದೇಶದ ಹಮೀರ್ಪುರ ಕ್ಷೇತ್ರದ ಸದಸ್ಯರಾದ ಅವರು, ಪ್ರಸ್ತುತ ಭಾರತದಲ್ಲಿ ಯಾವುದೇ ರಾಷ್ಟ್ರೀಯ ಭಾಷೆ ಇಲ್ಲ. ಆದಾಗ್ಯೂ, ಸಂವಿಧಾನದ 343 ನೇ ವಿಧಿ ಪ್ರಕಾರ, ಒಕ್ಕೂಟದ ಅಧಿಕೃತ ಭಾಷೆ ದೇವನಾಗರಿ ಲಿಪಿಯಲ್ಲಿ ಹಿಂದಿಯಾಗಿರಬೇಕು ಎಂದು ಸೂಚಿಸಲಾಗಿದೆ ಎಂದು ಹೇಳಿದರು.

- Advertisement -

ಅಧಿಕೃತ ಭಾಷೆಯಲ್ಲದೆ, 22 ಭಾಷೆಗಳಿಗೆ ಮಾನ್ಯತೆ ನೀಡಲಾಗಿದೆ. ಇದರಲ್ಲಿ ಹಿಂದಿ ಸೇರಿಸಲಾಗಿದೆ. ಆದರೆ, ಇಂಗ್ಲಿಷ್‌ ಸೇರಿಸಿಲ್ಲ ಎಂದರು.

ಭೂತಕಾಲದ ಬಗ್ಗೆ ಸಂಶೋಧನೆ ನಡೆಸದೆ, ಭವಿಷ್ಯವನ್ನು ನಿರ್ಮಿಸಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.

ದೇಶದಲ್ಲಿ ವಿವಿಧ ಭಾಷೆಗಳನ್ನು ಬಳಸಲಾಗುತ್ತಿದೆ. ಆದರೆ, ಸಂಸ್ಕೃತ ಹೊಂದಿರುವ ಸಾಮಾಜಿಕ ಒಗ್ಗಟ್ಟು ಸಾಧಿಸುವ ಸಾಮರ್ಥ್ಯ ಬೇರೆ ಯಾವುದೇ ಭಾಷೆಯಲ್ಲಿಲ್ಲ. ದೇಶವನ್ನು ಅಭಿವೃದ್ಧಿಯತ್ತ ಕೊಂಡೊಯ್ಯುವ ಉದ್ದೇಶವಿದ್ದಲ್ಲಿ, ಸಂಸ್ಕೃತದ ಉಪಯೋಗವಿಲ್ಲದೆ ಭಾರತದ ಗತಕಾಲದ ಮತ್ತು ಸಾಂಸ್ಕೃತಿಕ ಸುಗಂಧ ಅರಿಯಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟರು.

ಸಂಸ್ಕೃತ ರಾಷ್ಟ್ರೀಯ ಏಕತೆ ಉತ್ತೇಜಿಸುವ, ದೇಶಕ್ಕೆ ದಾರಿ ತೋರಿಸುವ ಭಾಷೆಯಾಗಿದೆ. ಹಿಂದಿಯೊಂದಿಗೆ ಸಂಸ್ಕೃತವನ್ನು ರಾಷ್ಟ್ರೀಯ ಭಾಷೆಯನ್ನಾಗಿ ಮಾಡಬೇಕು ಮತ್ತು ಅದರ ಬಳಕೆ ಜನಪ್ರಿಯಗೊಳಿಸಲು ಪ್ರಯತ್ನಗಳನ್ನು ಮಾಡಬೇಕು ಎಂದು ತಿಳಿಸಿದರು.

Join Whatsapp