ಕರ್ನಾಟಕ ಬ್ಯಾಡ್ಮಿಂಟನ್ ಅಸೋಸಿಯೇಷನ್ ನಿಂದ ನಿಯಮ ಉಲ್ಲಂಘನೆ: ಶಾಸಕ ರಘಪತಿ ಭಟ್ ಆರೋಪ

Prasthutha|

ಬೆಂಗಳೂರು: ಕರ್ನಾಟಕ ಬ್ಯಾಡ್ಮಿಂಟನ್ ಅಸೋಸಿಯೇಷನ್, ಬ್ಯಾಡ್ಮಿಂಟನ್ ಅಸೋಸಿಯೇಷನ್ ಅಪ್ ಇಂಡಿಯಾದ ಬೈಲಾ ಹಾಗೂ ಕೇಂದ್ರ ಸರ್ಕಾರದ ಕ್ರೀಡಾ ನೀತಿಗೆ ವಿರುದ್ಧವಾಗಿದೆ ಎಂದು ಉಡುಪಿ ಶಾಸಕ ರಘಪತಿ ಭಟ್ ಆರೋಪಿಸಿದ್ದಾರೆ.

- Advertisement -

ಬೆಂಗಳೂರಿನಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ‌ ಮಾತನಾಡಿದ ಅವರು, ಬ್ಯಾಡ್ಮಿಂಟನ್ ಅಸೋಸಿಯೇಷನ್ ಆಪ್ ಇಂಡಿಯ ಬೈಲಾ ಪ್ರಕಾರ ಕರ್ನಾಟಕ ಬ್ಯಾಡ್ಮಿಂಟನ್ ಅಸೋಸಿಯೇಷನ್ ನಡೆದುಕೊಳ್ಳಬೇಕು. ಆದರೆ ಅದರ ಬೈಲಾಗಳಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿದೆ. ರಾಷ್ಟ್ರೀಯ ಕ್ರೀಡಾ ಅಭಿವೃದ್ಧಿ ಸಂಹಿತೆಯ ಮಾರ್ಗ ಸೂಚಿಗಳ ಪ್ರಕಾರ ಕರ್ನಾಟಕ ಬ್ಯಾಡ್ಮಿಂಟನ್ ಅಸೋಸಿಯೇಷನ್ ಕಾರ್ಯಕಾರಿ ಸಮಿತಿಗೆ ಅಫೀಲಿಯೆಟೆಡ್ ಜಿಲ್ಲಾ ಬ್ಯಾಡ್ಮಿಂಟನ್ ಅಸೋಸಿಯೇಷನ್ ಸದಸ್ಯರು ಮಾತ್ರ ಮತ ಚಲಾಯಿಸುವ ಅಧಿಕಾರ ಇರುತ್ತದೆ. ಆದರೆ ಕರ್ನಾಟಕ ಬ್ಯಾಡ್ಮಿಂಟನ್ ಅಸೋಸಿಯೇಷನ್ ತನ್ನ ಬೈಲಾವನ್ಬು ತಿದ್ದುಪಡಿ ಮಾಡಿಕೊಂಡು 10 ಅಜೀವ ಸದಸ್ಯರು ಹಾಗೂ 9 ಸದಸ್ಯರು ಜಿಲ್ಲಾ ಅಸೋಸಿಯೇಷನ್ ನಿಂದ ಆಯ್ಕೆ ಮಾಡುವಂತೆ ತಿದ್ದುಪಡಿ ಮಾಡಿಕೊಂಡಿದ್ದು, ಅಸೋಸಿಯೇಷನ್ ಸದಸ್ಯರನ್ನು ಮತದಾರರನ್ನಾಗಿ ನೇಮಕ ಮಾಡಿಕೊಂಡಿರುವುದು ನಿಯಮಾವಳಿಗಳಿಗೆ ವಿರುದ್ಧವಾಗಿದೆ ಎಂದು ಹೇಳಿದರು.

ಕರ್ನಾಟಕ ಬ್ಯಾಡ್ಮಿಂಟನ್ ಅಸೋಸಿಯೇಷನ್ ರಾಜ್ಯ ಸರ್ಕಾರದಿಂದ ಕನಿಷ್ಠ ದರದಲ್ಲಿ ಗರಿಷ್ಠ 99 ವರ್ಷಗಳಿಗೆ ಭೂಮಿಯನ್ನು ಲೀಸ್ ಪಡೆದಿದ್ದರಿಂದ ಸರ್ಕಾರದ ತತ್ಸಂಬಂಧಿತ ಮಾರ್ಗಸೂಚಿಗೆ ನಿಯಮಗಳಿಗೆ ಬದ್ದವಾಗಿ ಇರಬೇಕಾಗುತ್ತದೆ. ಆದರೆ ಬ್ಯಾಡ್ಮಿಂಟನ್ ಅಸೋಸಿಯೇಷನ್ ಕೇಂದ್ರ ಸರ್ಕಾರದ ಕ್ರೀಡಾಭಿವೃದ್ದಿ ಸಂಹಿತೆಯ ಮಾರ್ಗಸೂಚಿಗಳಿಗೆ ವಿರುದ್ದವಾಗಿ ಬೈಲಾವನ್ನು ಪರಿಷ್ಕರಣೆ ಮಾಡಿಕೊಂಡಿದೆ. ಈ ರೀತಿಯ ನಡತೆಯಿಂದ ಜಿಲ್ಲೆಗಳ ಪ್ರಾತಿನಿಧ್ಯತೆಗೆ ಕೊರತೆ ಉಂಟಾಗುವುದರ ಜೊತೆಗೆ ಕ್ರೀಡೆಗೆ ಹಿನ್ನಡೆ ಉಂಟಾಗಲಿದೆ ಎಂದು ದೂರಿದರು.

- Advertisement -

ನಿಜವಾದ ಬ್ಯಾಡ್ಮಿಂಟನ್ ಕ್ರೀಡಾಪಟುಗಳಿಗೆ ಬ್ಯಾಡ್ಮಿಂಟನ್ ಕ್ಲಬ್ ಉಪಯೋಗವಾಗದೇ ಬೇರೆಯವರು ಇದರ ಸದಸ್ಯತ್ವ ಹೊಂದಿ ಇದರ ಮೂಲ ಉದ್ದೇಶಕ್ಕೆ ಧಕ್ಕೆಯಾಗುವ ಕಾರ್ಯ ನಡೆಯುತ್ತಿದೆ. ರಾಜ್ಯ ಸರ್ಕಾರ ಲೀಸ್ ಆದಾರದ ಮೇಲೆ ಬೆಂಗಳೂರಿನಲ್ಲಿ ಆಯಕಟ್ಟಿನ ಜಾಗದಲ್ಲಿ ಭೂಮಿಯನ್ನು 100 ರೂಪಾಯಿಗಳಿಗೆ ಗುತ್ತಿಗೆ ದರವನ್ನು ನಿಗದಿ ಪಡಿಸಿ 99 ವರ್ಷಗಳ ಅವಧಿಗೆ ಗುತ್ತಿಗೆ ನೀಡಿದೆ. ಆದರೆ ಮೂಲ ನಿಯಮಗಳನ್ನು ಉಲಂಘಿಸಿ ಕ್ಲಬ್ ನಡೆಯುತ್ತಿದ್ದು. ಇದನ್ನು ತಪ್ಪಿಸಿ ಜಿಲ್ಲಾ ಕ್ಲಬ್ ಗಳಿಗೆ ಅನುಕೂಲವಾಗುವಂತೆ ಮಾಡಬೇಕು. ಈ ಕುರಿತಂತೆ ಸದನದಲ್ಲಿ ಪ್ರಸ್ತಾಪಿಸಲಾಗಿದೆ ಎಂದರು.

ಬ್ಯಾಡ್ಮಿಂಟನ್ ಕ್ರೀಡಾಪಟುಗಳು, ಜಿಲ್ಲಾ ಪ್ರತಿನಿಧಿಗಳಾದ ಸೊಯಲ್ ಅಮಿನ್, ಡಾ. ಮೋಹನ್ ಅಪ್ಪಾಜಿ, ರಾಘವೇಂದ್ರ ರಾವ್ ಕೆ. ಜೀವನ್ ಎನ್.ಜಿ. ನಾಗರಾಜ್, ಅನಿಲ್ ಲೋಬೊ, ಗಣೇಶ್, ಶ್ರೀವತ್ಸ ಹಾಜರಿದ್ದರು

Join Whatsapp