ಲಂಚ ಪಡೆಯುವಾಗ ಸಿಕ್ಕಿಬಿದ್ದಿದ್ದ ಕಂದಾಯ ನಿರೀಕ್ಷಕನಿಗೆ 5 ವರ್ಷ ಜೈಲು ಶಿಕ್ಷೆ, 4 ಲಕ್ಷ ದಂಡ

Prasthutha|

ಬೆಂಗಳೂರು: ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಪ್ರಕರಣಗಳ ವಿಶೇಷ ನ್ಯಾಯಾಲಯ ಜಮೀನಿನ ಮ್ಯುಟೇಷನ್ ದಾಖಲೆಯನ್ನು ಖರೀದಿದಾರರ ಹೆಸರಿಗೆ ವರ್ಗಾಯಿಸಲು  5 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟು,  2 ಲಕ್ಷ ಪಡೆಯುವಾಗ ಸಿಕ್ಕಿಬಿದ್ದಿದ್ದ ಪ್ರಕರಣದಲ್ಲಿ ಕೆಂಗೇರಿ ಹೋಬಳಿಯ ಕಂದಾಯ ನಿರೀಕ್ಷಕ ಸುರೇಶ್ ಜಿ.ಸಿ. ದೋಷಿ ಎಂದು ತೀರ್ಮಾನಿಸಿದೆ. ನ್ಯಾಯಾಲಯ ಐದು ವರ್ಷಗಳ ಕಠಿಣ ಜೈಲು ಶಿಕ್ಷೆ ಮತ್ತು 4 ಲಕ್ಷ ದಂಡ ವಿಧಿಸಿದೆ.

- Advertisement -

2015ರಲ್ಲಿ ಕೆಂಗೇರಿ ಹೋಬಳಿಯ ಸೂಲಿಕೆರೆ ಗ್ರಾಮದಲ್ಲಿ ರಾಷ್ಟ್ರಕೂಟ ಬಿಲ್ಡರ್ಸ್ ಪ್ರೈವೇಟ್ ಲಿಮಿಟೆಡ್‌ನ ಅಧ್ಯಕ್ಷ ರವಿಕುಮಾರ್ ವಿ. ಮತ್ತು ರಶ್ಮಿ ಜಿ. ಎಂಬುವವರು ಒಂದು ಎಕರೆ ಜಮೀನು ಖರೀದಿಸಿದ್ದರು. ರಾಷ್ಟ್ರಕೂಟ ಬಿಲ್ಡರ್ಸ್ ಸಂಸ್ಥೆಯ ಸಿಬ್ಬಂದಿ ಆಸಿಫ್ ಖಾನ್ ಎಂಬುವವರು ಜಮೀನಿನ ಮ್ಯುಟೇಷನ್ ದಾಖಲೆಯನ್ನು ಖರೀದಿದಾರರ ಹೆಸರಿಗೆ ವರ್ಗಾಯಿಸುವಂತೆ ಕೋರಿ ಅರ್ಜಿ ಸಲ್ಲಿಸಿದ್ದರು.

5 ಲಕ್ಷ ಲಂಚ ನೀಡುವಂತೆ ಮ್ಯುಟೇಷನ್ ಬದಲಾವಣೆ ಮಾಡಲು ಸುರೇಶ್ ಬೇಡಿಕೆ ಇಟ್ಟಿದ್ದರು. ನಂತರ ಚೌಕಾಸಿ ಮಾಡಿದಾಗ, 4 ಲಕ್ಷ ಕೊಟ್ಟರೆ ಮ್ಯುಟೇಷನ್ ಬದಲಿಸಲು ಒಪ್ಪಿಕೊಂಡಿದ್ದರು. 2 ಲಕ್ಷವನ್ನು ಮುಂಗಡ ಪಡೆದಿದ್ದು ನಂತರದ 2 ಲಕ್ಷ ನೀಡುವ ಮುನ್ನ ಎಸಿಬಿಗೆ ದೂರು ಕೊಟ್ಟಿದ್ದರು. ಕಂದಾಯ ನಿರೀಕ್ಷಕರನ್ನು 2 ಲಕ್ಷ ಲಂಚ ಪಡೆಯುತ್ತಿದ್ದಾಗ 2016ರ ಸೆ.2ರಂದು ಬಂಧಿಸಲಾಗಿತ್ತು.

- Advertisement -

ಪ್ರಕರಣದ ತನಿಖೆ ಪೂರ್ಣಗೊಳಿಸಿದ್ದ ಎಸಿಬಿ ಅಧಿಕಾರಿಗಳು, ವಿಶೇಷ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದರು. ಮಂಗಳವಾರ ವಿಚಾರಣೆ ಮುಗಿಸಿದ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಲಕ್ಷ್ಮೀನಾರಾಯಣ ಭಟ್ ಕೆ., ‘ಸುರೇಶ್ ವಿರುದ್ಧದ ಆರೋಪಗಳು ಸಾಬೀತಾಗಿವೆ. ಲಂಚಕ್ಕೆ ಬೇಡಿಕೆ ಇಟ್ಟಿರುವುದು ಹಾಗೂ ಪಡೆದಿರುವುದು ದೃಢಪಟ್ಟಿದೆ’ ಎಂದು ಪ್ರಕಟಿಸಿದರು. ಸುರೇಶ್ ಅವರಿಗೆ ಐದು ವರ್ಷ ಕಠಿಣ ಜೈಲು ಶಿಕ್ಷೆ ಹಾಗೂ 4 ಲಕ್ಷ ದಂಡ ವಿಧಿಸಿ ಆದೇಶ ಹೊರಡಿಸಿದರು. ದಂಡ ಪಾವತಿಗೆ ತಪ್ಪಿದಲ್ಲಿ ನಾಲ್ಕು ತಿಂಗಳ ಸಾಧಾರ ಜೈಲು ಶಿಕ್ಷೆ ಅನುಭವಿಸುವಂತೆ ಆದೇಶದಲ್ಲಿ ತಿಳಿಸಿದರು.

Join Whatsapp