ಪೌರ ಕಾರ್ಮಿಕರ ಬೇಡಿಕೆಗಳನ್ನು ತಕ್ಷಣ ಈಡೇರಿಸಿ, ಕಸ ವಿಲೇವಾರಿಗೆ ಕ್ರಮಕೈಗೊಳ್ಳಲು ಸಿಪಿಐಎಂ ಒತ್ತಾಯ

Prasthutha|

ಮಂಗಳೂರು: ವೇತನ ಹೆಚ್ಚಳ ಸೇರಿದಂತೆ ಹಲವು ಬಗೆಯ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕಳೆದ ಕೆಲವು ದಿನಗಳಿಂದ ಪ್ರತಿಭಟನೆ ನಡೆಸುತ್ತಿರುವ ಗುತ್ತಿಗೆ ಪೌರಕಾರ್ಮಿಕರಿಗೆ ಸ್ಪಂದಿಸದ ಬಿಜೆಪಿ ಸರಕಾರದ ಕಾರ್ಮಿಕ ವಿರೋಧಿ, ದಲಿತ ವಿರೋಧಿ ನಡೆಯನ್ನು ಸಿಪಿಐಎಂ ಮಂಗಳೂರು ನಗರ ದಕ್ಷಿಣ ಸಮಿತಿ ವಿರೋಧಿಸುತ್ತದೆ ಹಾಗೂ ಪೌರ ಕಾರ್ಮಿಕರ ಬೇಡಿಕೆಗಳನ್ನು ಕೂಡಲೇ ಈಡೇರಿಸಲು ಮುಂದಾಗಬೇಕು ಮತ್ತು ನಗರದಲ್ಲಿ ಕಸ ವಿಲೇವಾರಿಗೆ ಕ್ರಮಕೈಗೊಳ್ಳಬೇಕು ಎಂದು ಸಿಪಿಐಎಂ ಮಂಗಳೂರು ನಗರ ದಕ್ಷಿಣ ಸಮಿತಿ ಕಾರ್ಯದರ್ಶಿ ಸಂತೋಷ್ ಬಜಾಲ್ ಒತ್ತಾಯಿಸಿದ್ದಾರೆ.

- Advertisement -

ಈ ಬಗ್ಗೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಗುತ್ತಿಗೆ ಆಧಾರದಲ್ಲಿ ದುಡಿಯುತ್ತಿರುವ ಪೌರ ಕಾರ್ಮಿಕರು ತಮ್ಮ ಉದ್ಯೋಗದ ನೇರ ನೇಮಕಾತಿ ಮತ್ತು ಖಾಯಂಗೊಳಿಸಲು ಸೇರಿದಂತೆ ಇತರೆ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಕಳೆದ ಹಲವಾರು ವರ್ಷಗಳಿಂದ ಸಂಘಟಿತ ಹೋರಾಟಗಳನ್ನು ನಡೆಸುತ್ತಾ ಬಂದಿದ್ದಾರೆ. ಆದರೆ ಸರಕಾರಗಳು ಈವರೆಗೂ ಅವರ ಬೇಡಿಕೆಗಳಿಗೆ ಸ್ಪಂದಿಸದೆ ಕಾರ್ಮಿಕ ವಿರೋಧಿ ಮಾತ್ರವಲ್ಲ ದಲಿತ ವಿರೋಧಿ ನೀತಿಗಳನ್ನು ಅನುಸರಿಸುತ್ತಿದೆ. ಗುತ್ತಿಗೆ ಪೌರಕಾರ್ಮಿಕರ ಪ್ರತಿಭಟನೆಯಿಂದ ಕಸ ವಿಲೇವಾರಿ ಸಂಪೂರ್ಣವಾಗಿ ಸ್ಥಗಿತಗೊಂಡಿದ್ದು, ಮಂಗಳೂರು ನಗರದ ಎಲ್ಲೆಂದರಲ್ಲಿ ಕಸದ ರಾಶಿ ಬಿದ್ದು ಗಬ್ಬು‌ ನಾರುತ್ತಿದೆ. ಮಂಗಳೂರು ಮಹಾನಗರ ಪಾಲಿಕೆ ಸ್ವಯಂ ಘೋಷಿತ ಆಸ್ತಿ ತೆರಿಗೆ ಹೆಸರಲ್ಲಿ ಪ್ರತಿ ಮನೆಗಳಿಂದ ವಿಪರೀತ ತೆರಿಗೆಯನ್ನು ಸಂಗ್ರಹಿಸುತ್ತಿದೆ. ಬಿಜೆಪಿ ಸರಕಾರ ಸ್ವಚ್ಛ ಭಾರತ ,ಸ್ವಚ್ಛ ಮಂಗಳೂರು ಎಂಬ ಹೆಸರಿನಲ್ಲಿ ನೂರಾರು ಕೋಟಿ ಕೇಂದ್ರ, ರಾಜ್ಯ ಸರಕಾರದ ಅನುದಾನ ಹಣಗಳನ್ನು ಪೋಲು ಮಾಡುತ್ತಿದ್ದರೂ ನಿಜವಾಗಿಯೂ ಮಂಗಳೂರನ್ನು ಸ್ವಚ್ಛವಾಗಿಡುವ ಪೌರಕಾರ್ಮಿಕರ ವೇತನ ಹೆಚ್ಚಳಕ್ಕಾಗಲಿ ಅಥವಾ ಅವರ ಉದ್ಯೋಗದ ಭದ್ರತೆಗಾಗಲಿ ವಿನಿಯೋಗಿಸದೆ ಕೇವಲ ಕಮಿಷನ್ ಲೂಟಿ ಹೊಡೆಯಲು ಉಪಯೋಗಿಸಿದೆ ಎಂದು ಅವರು ಟೀಕಿಸಿದ್ದಾರೆ.

 ಗುತ್ತಿಗೆ ಪೌರಕಾರ್ಮಿಕರು ನಡೆಸುವ ಹೋರಾಟ ನ್ಯಾಯಯುತವಾಗಿದ್ದು ಅವರು ನಡೆಸುವ ಹೋರಾಟಕ್ಕೆ ಸಿಪಿಐಎಂ ಪಕ್ಷ ಬೆಂಬಲವನ್ನು ವ್ಯಕ್ತಪಡಿಸುತ್ತದೆ. ರಾಜ್ಯ ಸರಕಾರ ಈ ಕೂಡಲೇ ಗುತ್ತಿಗೆ ಪೌರಕಾರ್ಮಿಕರ ಸೇವೆಗಳನ್ನು ಖಾಯಂಗೊಳಿಸಬೇಕು. ಸಮಾನ ವೇತನ ಮತ್ತು ನೇರವೇತನ ಸಹಿತ ಅವರು ಸರಕಾರದ ಮುಂದಿಟ್ಟಿರುವ ಎಲ್ಲಾ ಬೇಡಿಕೆಗಳನ್ನು ಈಡೇರಿಸಲು ಮುಂದಾಗಬೇಕು. ಕಳೆದ ಕೆಲವು ದಿನಗಳಿಂದ ಕಸ ವಿಲೇವಾರಿಗೊಳ್ಳದೆ ಬಾಕಿಯಾಗಿರುವ ಕಸಗಳನ್ನು ವಿಲೇವಾರಿಗೊಳಿಸಲು ಮಂಗಳೂರು ಮಹಾನಗರ ಪಾಲಿಕೆ ಆಡಳಿತ ಕೂಡಲೇ ಕ್ರಮಕೈಗೊಳ್ಳಬೇಕೆಂದು ಸಿಪಿಐಎಂ ಮಂಗಳೂರು ನಗರ ದಕ್ಷಿಣ ಸಮಿತಿ ಕಾರ್ಯದರ್ಶಿ ಸಂತೋಷ್ ಬಜಾಲ್ ಪತ್ರಿಕಾ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.

Join Whatsapp