ರಾಷ್ಟ್ರ ರಕ್ಷಣೆಗೆ ಸೌಹಾರ್ದತೆಯ ಸಂಕಲ್ಪ ಅಗತ್ಯ: ಯಾಸರ್ ಕೌಸರಿ

Prasthutha|

►ಚಿಕ್ಕಮಗಳೂರು ಜಿಲ್ಲಾ ಎಸ್‍ಕೆಎಸ್‍ಎಸ್‍ಎಫ್  ವತಿಯಿಂದ ಮಾನವ ಸರಪಳಿ ಕಾರ್ಯಕ್ರಮ

- Advertisement -

ಕೊಟ್ಟಿಗೆಹಾರ: ಜಾತಿ, ಧರ್ಮ, ಭಾಷೆ, ವೇಷ ವಿಧಾನಗಳ ಭೇದವಿಲ್ಲದೇ ಎಲ್ಲರೂ ರಾಷ್ಟ್ರ ರಕ್ಷಣೆಗೆ ಸೌಹಾರ್ದತೆಯ ಸಂಕಲ್ಪ ತೊಡಬೇಕು’ ಎಂದು  ಸುಳ್ಯ ಪಾಜಪಳ್ಳದ ಜುಮ್ಮಾ ಮಸೀದಿಯ ಇಮಾಮರಾದ ಯಾಸರ್ ಕೌಸರಿ ಹೇಳಿದರು.

ಚಿಕ್ಕಮಗಳೂರು ಜಿಲ್ಲಾ ಎಸ್‍ಕೆಎಸ್‍ಎಸ್‍ಎಫ್ ವತಿಯಿಂದ ಗುರುವಾರ ಸಂಜೆ ಬಣಕಲ್ ಸಮೀಪದ ಚಕ್ಕಮಕ್ಕಿಯಲ್ಲಿ ನಡೆದ ಮಾನವ ಸರಪಳಿ ಕಾರ್ಯಕ್ರಮದಲ್ಲಿ ಪ್ರಭಾಷಣ ನೀಡಿ ಮಾತನಾಡಿದರು.

- Advertisement -

‘ವಿವಿಧ ಧರ್ಮಗಳ ವಿಶ್ವಾಸ, ಆಚಾರ, ಸಂಸ್ಕೃತಿ, ವಿಚಾರ, ಹಬ್ಬ ಎಲ್ಲವೂ ಬೇರೆ ಬೇರೆ ಆಗಿದ್ದರೂ ಕೂಡ ಮನುಷ್ಯತ್ವದಲ್ಲಿ ನಾವೆಲ್ಲರೂ ಸಮಾನರು. ಮನುಷ್ಯ ಶರೀರದಲ್ಲಿ ಹರಿದಾಡುವ ರಕ್ತದ ಬಣ್ಣದಲ್ಲಿ ವ್ಯತ್ಯಾಸ ಇರುವುದಿಲ್ಲ. ರಸ್ತೆಯಲ್ಲಿ ಅಪಘಾತ ನಡೆದರೆ  ಗಾಯಗೊಂಡವರನ್ನು ಆಸ್ಪತ್ರೆಗೆ ಸೇರಿಸುವ ಬದಲು ಅಪಘಾತವಾದವರು ಬೇರೆ ಬೇರೆ ಕೋಮಿಗೆ ಸೇರಿದವರಾಗಿದ್ದರೆ ಆಯಾ ಕೋಮಿನವವರು ಆಯಾ ಗುಂಪಿಗೆ ಸೇರಿಕೊಂಡು ಕೋಮು ವಿಚಾರದ ಘಟನೆಯಾಗಿ ಮಾರ್ಪಡುತ್ತಿದೆ.  ಈ ರೀತಿ ಆಗಲು ಅವಕಾಶ ಕೊಡಬಾರದು’ ಎಂದರು.

ಚಿಕ್ಕಮಗಳೂರಿನ ವಿಶ್ವಧರ್ಮಪೀಠ ಜಯಬಸವ ತಪೋವನದ  ಡಾ.ಜಯ ಬಸವಾನಂದ ಸ್ವಾಮೀಜಿ ಮಾತನಾಡಿ, ಜಾತಿ ಮತ್ತು ರಾಜಕಾರಣದಿಂದ ಜನರನ್ನು ಬೇರ್ಪಡಿಸುವಂತಹ ಕಾರ್ಯಗಳು ಈಗ ಎಲ್ಲೆಡೆ ನಡೆಯುತ್ತಿದೆ. ಸಣ್ಣಸಣ್ಣ ವಿಚಾರಗಳಿಗೆ ಕೋಮುಬಣ್ಣವನ್ನು ಬಳಿದು ಸಮಾಜದ ಸ್ವಾಸ್ಥ್ಯವನ್ನು ಕೆಡಿಸುವಂತಹ ಘಟನೆಗಳು ಹೆಚ್ಚಾಗಿವೆ. ಸಹೋದರತ್ವದ ಭಾವದಿಂದ ಬದುಕಿದಾಗ ಬದಲಾವಣೆಯನ್ನು ತರಲು ಸಾಧ್ಯವಾಗುತ್ತದೆ. ಹೃದಯದ ಕಣ್ಣಿನಿಂದ ಎಲ್ಲರನ್ನೂ ಕಾಣುವ ಮೂಲಕ ಸೌಹಾರ್ದತೆಯ ನಾಡನ್ನು ಕಟ್ಟಬೇಕಿದೆ’ ಎಂದರು.

ಹಿರೇಬೈಲ್ ಸಂತ ಜೋಸೇಫ ಚರ್ಚಿನ ಧರ್ಮಗುರುಗಳಾದ ಫಾ.ಡೇವಿಡ್ ಪ್ರಕಾಶ್ ಮಾತನಾಡಿ, ‘ಪ್ರಜ್ಞಾವಂತ, ನಾಗರಿಕ, ಸುಶಿಕ್ಷಿತ ಸಮಾಜದ ನಾಗರಿಕರಾದ ನಾವು ಸೌಹಾರ್ದತೆಯ ಮಾರ್ಗದಲ್ಲಿ ದೇಶವನ್ನು ಕಟ್ಟಲು ಪಣತೊಡಬೇಕಾಗಿದೆ. ಸ್ನೇಹ ಸೌರ್ಹಾದತೆಯನ್ನು ಕಲಕುವ ಅಪಪ್ರಚಾರಗಳು ನಿಲ್ಲಲಿ. ಸತ್ಯದ, ಸೌಹಾರ್ದತೆಯ ಶಾಂತಿಯ ಹಾದಿಯಲ್ಲಿ ಮುನ್ನಡೆಯೋಣ’ ಎಂದರು.

ಸಭಾ ಕಾರ್ಯಕ್ರಮಕ್ಕೂ ಮುನ್ನ ಬಣಕಲ್‍ನಿಂದ ಚಕ್ಕಮಕ್ಕಿ ಮಸೀದಿಯವರೆಗೆ ಕಾಲ್ನಡಿಗೆ ಜಾಥಾ ನಡೆಯಿತು. ಈ ಸಂದರ್ಭದಲ್ಲಿ ಎಸ್‍ಕೆಎಸ್‍ಎಸ್‍ಎಫ್ ಜಿಲ್ಲಾ ಅಧ್ಯಕ್ಷರಾದ ಇಬ್ರಾಹೀಂ ಶಾಲಿಮಾರ್, ಸಂಚಾಲಕರಾದ ಎ.ಸಿ.ಅಯೂಬ್, ತಾಲ್ಲೂಕು ಅಧ್ಯಕ್ಷರಾದ ಜಮಾಲುದ್ದೀನ್ ಫೈಝಿ, ಬಣಕಲ್ ಘಟಕ ಅಧ್ಯಕ್ಷರಾದ ಅರಫತ್,  ಎಸ್‍ವೈಎಸ್ ಜಿಲ್ಲಾ ಅಧ್ಯಕ್ಷರಾದ ಸಿ.ಕೆ.ಇಬ್ರಾಹಿಂ,  ಚಕ್ಕಮಕ್ಕಿ ಮಸೀದಿಯ ಅಧ್ಯಕ್ಷರಾದ ಇಬ್ರಾಹಿಂ ಹಾಜಿ, ಮದರಸ ಅಧ್ಯಕ್ಷರಾದ ಹಾಜಿ ನಜೀರ್ ಗಬ್ಗಲ್, ಪ್ರಾಂಶುಪಾಲರಾದ ಸಿನಾನ್ ಫೈಝಿ, ಬ್ಯಾರಿ ಒಕ್ಕೂಟದ ಅಧ್ಯಕ್ಷರಾದ ಬಿ.ಎಚ್. ಮೊಹಮ್ಮದ್, ಬಣಕಲ್ ಠಾಣಾ ಎಎಸ್‍ಐ ಕೆ.ಶಶಿ, ಅಕ್ರಂ ಹಾಜಿ, ಅಲೀ ಹಾಜಿ,  ನಾಸೀರ್, ಹಂಝ, ಅಲೀ ಹಾಜಿ, ರಿಯಾಜ್, ಜಾಬಿರ್, ಯಾಸೀರ್, ಗೌಸ್ ಮುನೀರ್, ಉಮರ್ ಹಾಜಿ, ಸಿರಾಜ್, ಹಕೀಮ್, ಅಜೀಜ್ ಮುಂತಾದವರು ಇದ್ದರು.

Join Whatsapp