ಪರೀಕ್ಷೆ ಮುಗಿಸಿ ಪ್ರಿಯಕರನ ಜೊತೆಗಿದ್ದ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ಯತ್ನ: ಮೂವರು ವಶಕ್ಕೆ

Prasthutha|

ಬೆಂಗಳೂರು: ಎಸ್ಎಸ್ಎಲ್ಸಿ ಪರೀಕ್ಷೆ ಮುಗಿಸಿ ಪ್ರಿಯಕರನ ಜೊತೆ ನಿರ್ಜನ ಪ್ರದೇಶದ ಬೆಟ್ಟಗುಡ್ಡಗಳತ್ತ ತೆರಳುತ್ತಿದ್ದ ವಿದ್ಯಾರ್ಥಿನಿಯ ಮೇಲೆ ಮೂವರು ಕಾಮುಕರು ಅತ್ಯಾಚಾರ ನಡೆಸಲು ಯತ್ನಿಸಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿಯ ಪಾತಬಾಗೇಪಲ್ಲಿ ಬಳಿ ನಡೆದಿದೆ.

- Advertisement -


ವಿದ್ಯಾರ್ಥಿನಿಯು ನಿನ್ನೆ ಎಸ್ ಎಸ್ ಎಲ್ ಸಿ ಪರೀಕ್ಷೆ ಮುಗಿಸಿ ಪ್ರಿಯಕರನ ಜೊತೆ ಪಾತಬಾಗೇಪಲ್ಲಿ ಬಳಿಯ ನಿರ್ಜನ ಪ್ರದೇಶದ ಬೆಟ್ಟಗುಡ್ಡಗಳತ್ತ ತೆರಳಿದ್ದಳು. ಪ್ರಿಯಕರ ನಾರಾಯಣಸ್ವಾಮಿ ತನ್ನ ಸ್ನೇಹಿತ ಮಂಜು ಜೊತೆ ಬೈಕ್ ನಲ್ಲಿ ಡ್ರಾಪ್ ಪಡೆದುಕೊಂಡು ಬಾಲಕಿ ಜೊತೆ ನಿರ್ಜನ ಪ್ರದೇಶದಲ್ಲಿ ಇದ್ದಾಗ ಪ್ರಿಯಕರನ ಸ್ನೇಹಿತ ಮಂಜು ಹಾಗೂ ಅಲ್ಲಿಯೇ ಮದ್ಯಪಾನದಲ್ಲಿ ತೊಡಗಿದ್ದ ನಾಗರಾಜು, ಸುರೇಶ್ ಸೇರಿ ಪ್ರೇಮಿಗಳ ವೀಡಿಯೋ ರೆಕಾರ್ಡ್ ಮಾಡಿಕೊಂಡು ತಮಗೂ ಸಹಕರಿಸುವಂತೆ ಒತ್ತಡ ಹೇರಿ ಬ್ಲಾಕ್ ಮೇಲ್ ಮಾಡಿದ್ದಾರೆ. ಈ ವೇಳೆ ನಾರಾಯಣಸ್ವಾಮಿ ಅಲ್ಲಿಂದ ಓಡಿ ಬಂದು ಸ್ಥಳೀಯರಿಗೆ ವಿಷಯ ತಿಳಿಸಿದ್ದಾನೆ.


ಕೂಡಲೇ ಸ್ಥಳೀಯರು ಬೆಟ್ಟದ ಕಡೆಗೆ ಹೋಗಿ ಬಾಲಕಿಯನ್ನು ರಕ್ಷಣೆ ಮಾಡಿ ಮೂವರು ಯುವಕರನ್ನು ಹಿಡಿದಿದ್ದಾರೆ. ನಂತರ ಬಾಲಕಿ, ನಾರಾಯಣಸ್ವಾಮಿ ಸೇರಿದಂತೆ ಮೂವರು ಯುವಕರನ್ನು ಬಾಗೇಪಲ್ಲಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

- Advertisement -


ಸಂತ್ರಸ್ತ ಬಾಲಕಿಯನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಡಿಯ ಬಾಲಕಿಯರ ಬಾಲಮಂದಿರದಲ್ಲಿ ರಕ್ಷಣೆ ನೀಡಲಾಗಿದೆ. ನಾರಾಯಣಸ್ವಾಮಿ ಹಾಗೂ ಲೈಂಗಿಕ ದೌರ್ಜನ್ಯ ಎಸಗಿದ ಮೂವರು ಆರೋಪಿಗಳನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲು ಚಿಕ್ಕಬಳ್ಳಾಪುರ ನಗರ ಠಾಣೆಗೆ ಕರೆತಂದಿದ್ದು, ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ. 2 ವರ್ಷಗಳಿಂದ ಬಾಲಕಿ ಹಾಗೂ ನಾರಾಯಣಸ್ವಾಮಿ ಗೆಳೆತನದಲ್ಲಿದ್ದರು ಎನ್ನಲಾಗಿದೆ. ಎಸ್ ಎಸ್ ಎಲ್ ಸಿಯಲ್ಲಿ ಅನುತ್ತೀರ್ಣಳಾದ ನಂತರ ಬೆಂಗಳೂರಿನಲ್ಲಿ ಕೆಲಸಕ್ಕೆ ಸೇರಿದ್ದ ಆಕೆ ನಿನ್ನೆ ಖಾಸಗಿ ಅಭ್ಯರ್ಥಿಯಾಗಿ ಪರೀಕ್ಷೆ ಎದುರಿಸಲು ಬಾಗೇಪಲ್ಲಿಗೆ ಬಂದಿದ್ದಳು. ಪರೀಕ್ಷೆ ಮುಗಿದ ನಂತರ ಪ್ರಿಯಕರನನ್ನು ಭೇಟಿ ಮಾಡಿದ್ದಳು.

Join Whatsapp