ರಾಯಚೂರು: SDPI ನಾಯಕರ ವಿರುದ್ಧ ಪೊಲೀಸ್ ದೌರ್ಜನ್ಯ ಖಂಡಿಸಿ ಠಾಣೆಗೆ ಮುತ್ತಿಗೆ

Prasthutha|

ರಾಯಚೂರು: SDPI ರಾಯಚೂರು ಜಿಲ್ಲಾಧ್ಯಕ್ಷ ಮತ್ತು ಕಾರ್ಯದರ್ಶಿಯವರ ಮೇಲೆ ಹಲ್ಲೆ ನಡೆಸಿ ಅಕ್ರಮವಾಗಿ ಠಾಣೆಯಲ್ಲಿ ಕೂಡಿ ಹಾಕಿದ ಪೊಲೀಸ್ ಅಧಿಕಾರಿಯ ವಿರುದ್ಧ ಕ್ರಮಕ್ಕೆ ಆಗ್ರಹಿಸಿ SDPI ಕಾರ್ಯಕರ್ತರು ಬುಧವಾರ ರಾಯಚೂರು ವೆಸ್ಟ್ ಠಾಣೆಗೆ ಮುತ್ತಿಗೆ ಹಾಕಿದ್ದು, ತಪ್ಪಿತಸ್ಥ ಪೊಲೀಸರ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳುವಂತೆ ಪ್ರತಿಭಟನಾಕಾರರು ಘೋಷಣೆ ಕೂಗಿದ್ದಾರೆ.

- Advertisement -


ಜಾಗದ ವಿಚಾರದಲ್ಲಿ ನಡೆಯುತ್ತಿದ್ದ ಮಾತುಕತೆಯನ್ನು ಚಿತ್ರೀಕರಿಸಿದ ಕ್ಷುಲ್ಲಕ ಕಾರಣಕ್ಕಾಗಿ ಠಾಣೆಯ ಪಿಎಸ್ಸೈ ಮಂಜುನಾಥ್, ಯುವಕನೋರ್ವನ ಮೊಬೈಲನ್ನು ನವೆಂಬರ್ 9, 2021 ರಂದು ವಶಪಡಿಸಿಕೊಂಡಿದ್ದು, ಅದನ್ನು ಕೇಳಲು ಹೋದ ಸಂದರ್ಭದಲ್ಲಿ ಮಂಜುನಾಥ್ ಪಿಎಸ್ಸೈ ಎರಡು ಲಕ್ಷ ಹಣದ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ. ಕೊಡದಿದ್ದರೆ ಸುಳ್ಳು ಕೇಸು ಹಾಕಿ ಹೇಗೆ ವಸೂಲಿ ಮಾಡಬೇಕೆಂದು ಗೊತ್ತಿದೆ ಎಂದು ಯುವಕನನ್ನು ಹೆದರಿಸಿ ಕಳುಹಿಸಲಾಗಿತ್ತು .ಪಿಎಸ್ಸೈ ಮಂಜುನಾಥ್ ಬೇಡಿಕೆಯನ್ನು ಕೇಳಿದ ಯುವಕ ಬೇರೆ ದಾರಿ ಕಾಣದೆ, ಮೊಬೈಲ್ ಮರಳಿಸಿಕೊಡುವಂತೆ ಎಸ್.ಡಿ.ಪಿ.ಐ ನಾಯಕರನ್ನು ಸಂಪರ್ಕಿಸಿದ್ದ. ಈ ಬಗ್ಗೆ ವಿಚಾರಿಸಲು ಠಾಣೆಗೆ ತೆರಳಿದ ಮೂವರು ಎಸ್.ಡಿ.ಪಿ.ಐ ನಾಯಕರನ್ನು ಪಿಎಸ್ಸೈ ಮಂಜುನಾಥ್ ಅವಾಚ್ಯವಾಗಿ ನಿಂದಿಸಿದ್ದು ಮಾತ್ರವಲ್ಲದೇ, ಥಳಿಸಿ ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ಜೊತೆಗೆ ಕೊಲೆ ಆರೋಪಿಗಳನ್ನು ಬಂಧಿಸಿಡಲಾಗಿದ್ದ ಸೆಲ್ ನಲ್ಲಿಯೇ ಇಡೀ ರಾತ್ರಿ ಇವರನ್ನು ಕೂಡಿ ಹಾಕಿದ್ದಾರೆ.

ನಂತರ ಮಂಜುನಾಥ್ ತನ್ನ ತಪ್ಪನ್ನು ಮರೆಮಾಚಲು ಮಾತುಕತೆ ನಡೆಸಲು ಠಾಣೆಗೆ ತೆರಳಿದ್ದ ಎಸ್.ಡಿ.ಪಿ.ಐ ನಾಯಕರ ಮೇಲೆಯೇ ಪ್ರಕರಣ ದಾಖಲಿಸಿಕೊಂಡು ದೌರ್ಜನ್ಯ ನಡೆಸಿ ಅಮಾನವೀಯವಾಗಿ ನಡೆದುಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ.

Join Whatsapp