ಪುಲಿಟ್ಜರ್ ಪ್ರಶಸ್ತಿ ವಿಜೇತೆ ಛಾಯಾಗ್ರಾಹಕಿ ಸನ್ನಾ ಇರ್ಷಾದ್ ಮಟ್ಟೂ ವಿದೇಶ ಪ್ರಯಾಣಕ್ಕೆ ಬ್ರೇಕ್ !

Prasthutha|

ನವದೆಹಲಿ: ಪುಲಿಟ್ಜರ್ ಪ್ರಶಸ್ತಿ ವಿಜೇತೆ ಛಾಯಾಗ್ರಾಹಕಿ, ಪತ್ರಕರ್ತೆ ಸನ್ನಾ ಇರ್ಷಾದ್ ಮಟ್ಟೂ ಅವರ ವಿದೇಶ ಪ್ರಯಾಣಕ್ಕೆ ವಿಮಾನ ನಿಲ್ದಾಣದಲ್ಲಿ ತಡೆವೊಡ್ಡಿರುವ ಘಟನೆ ದೆಹಲಿ ವಿಮಾನ ನಿಲ್ದಾಣದಲ್ಲಿ ನಡೆದಿದೆ.

- Advertisement -

ಅಧಿಕೃತವಾಗಿ ಫ್ರೆಂಚ್ ವೀಸಾವನ್ನು ಹೊಂದಿದ್ದರೂ ದೆಹಲಿಯಿಂದ ಪ್ಯಾರಿಸ್’ಗೆ ಪ್ರಯಾಣಿಸಲು ಮುಂದಾದಾಗ ಅಧಿಕಾರಿಗಳು ತನ್ನನ್ನು ತಡೆದಿದ್ದಾರೆ ಸನ್ನಾ ಆರೋಪಿಸಿದ್ದಾರೆ.

ಸೆರೆಂಡಿಪಿಟಿ ಅರ್ಲೆಸ್ ಅನುದಾನ 2020 ರ 10 ಪ್ರಶಸ್ತಿ ವಿಜೇತರ ಪೈಕಿ ಒಬ್ಬರಾಗಿರುವ ಸನ್ನಾ ಅವರು ಪುಸ್ತಕ ಬಿಡುಗಡೆ ಮತ್ತು ಛಾಯಾಗ್ರಹಣ ಕಾರ್ಯಕ್ರಮಕ್ಕಾಗಿ ಪ್ಯಾರಿಸ್ ಗೆ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ ಎಂದು ಟ್ವೀಟ್’ನಲ್ಲಿ ಉಲ್ಲೇಖಿಸಿದ್ದಾರೆ.

- Advertisement -

ವಿದೇಶಕ್ಕೆ ತೆರಳಲು ಅನುಮತಿ ನಿರಾಕರಿಸಿರುವ ಕುರಿತು ಅಧಿಕಾರಿಗಳು ಮಾಹಿತಿ ನೀಡಿರಲಿಲ್ಲ. ಆದರೆ ವಿದೇಶಕ್ಕೆ ಪ್ರಯಾಣಿಸಲು ಸಾಧ್ಯವಿಲ್ಲ ಎಂದಷ್ಟೇ ತಿಳಿಸಿದರು ಎಂದು ಸನ್ನಾ ಆರೋಪಿಸಿದ್ದಾರೆ.

ಫ್ರೀ ಲ್ಯಾಂಸರ್ ಛಾಯಾಗ್ರಾಹಕಿಯಾಗಿರುವ ಸನ್ನಾ ಅವರು 2022ರ ಮೇ ತಿಂಗಳಲ್ಲಿ ರಾಯಿಟರ್ಸ್ ಪ್ರಕಟಿಸಿದ ಚಿತ್ರಕ್ಕಾಗಿ ವಿಶಿಷ್ಟ ಛಾಯಾಗ್ರಹಕ ವಿಭಾಗದಲ್ಲಿ ಪುಲಿಟ್ಜರ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದರು. ಭಾರತದಲ್ಲಿ ಕೊರೊನಾ ಬಿಕ್ಕಟ್ಟಿನ ಫೋಟೋವನ್ನು ಸೆರೆಹಿಡಿದಿದ್ದಕ್ಕಾಗಿ ಸನ್ನಾ ಅವರು ದಿವಂಗತ ಡ್ಯಾನಿಶ್ ಸಿದ್ದೀಕಿ, ಅಮಿತ್ ದವೆ ಮತ್ತು ಅದ್ನಾನ್ ಅಬಿದಿ ಸೇರಿದಂತೆ ರಾಯಿಟರ್ಸ್ ತಂಡ ಪ್ರಶಸ್ತಿಯನ್ನು ತಮ್ಮದಾಗಿಸಿತ್ತು.

ಕಾಶ್ಮೀರ ಕೇಂದ್ರೀಯ ವಿವಿಯಲ್ಲಿ ಪತ್ರಿಕೋದ್ಯಮ ಸ್ವಾತಕೋತ್ತರ ಪದವಿ ಪಡೆದ ಸನ್ನಾ, ವಿಶ್ವದಾದ್ಯಂತ ಹಲವು ಮಳಿಗೆಗಳಲ್ಲಿ ತಮ್ಮ ಕೃತಿಗಳನ್ನು ಪ್ರಕಟಿಸಿದ್ದಾರೆ. ಅಲ್ಲದೆ 2021 ರಲ್ಲಿ ಅವರಿಗೆ ಮ್ಯಾಗ್ನಮ್ ಫೌಂಡೇಶನ್’ನಲ್ಲಿ ಫೆಲೋಶಿಫ್ ನೀಡಿ ಗೌರವಿಸಿತ್ತು.

ಯಾವುದೇ ಸೂಚನೆ ಇಲ್ಲದೆ ಕಾಶ್ಮೀರಿ ಪತ್ರಕರ್ತರನ್ನು ದೇಶ ತೊರೆಯದಂತೆ ತಡೆದಿರುವುದು ಇದು ಮೊದಲಲ್ಲ. 2019 ರ ಸೆಪ್ಟೆಂಬರ್’ನಲ್ಲಿ ಕೇಂದ್ರ ಸರ್ಕಾರ 370 ರ ವಿಧಿಯನ್ನು ಹಿಂಪಡೆದ ಕೂಡಲೇ ಪತ್ರಕರ್ತ, ಲೇಖಕ ಗೌಹಾರ್ ಗಿಲಾನಿ ಅವರನ್ನೂ ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತಡೆದು ನಿಲ್ಲಿಸಲಾಗಿತ್ತು.

Join Whatsapp