ಪಿಎಸ್ ಐ ಹಗರಣ: ಸರ್ಕಾರವನ್ನು ವಜಾಗೊಳಿಸಿ ನ್ಯಾಯಾಂಗ ತನಿಖೆಗೆ ಕ್ಯಾಂಪಸ್ ಫ್ರಂಟ್ ಆಗ್ರಹ

Prasthutha|

ಬೆಂಗಳೂರು: ಪಿಎಸ್ ಐ 545 ಹುದ್ದೆಗಳ ನೇಮಕಾತಿಯಲ್ಲಿ ಭಾರಿ ಪ್ರಮಾಣದ ಹಗರಣ ನಡೆದಿರುವ ಘಟನೆ ಇದೀಗಾಗಲೇ ಬೆಳಕಿಗೆ ಬಂದಿದ್ದು, ಮುಖ್ಯ ಸೂತ್ರಧಾರಿ ಬಿಜೆಪಿ ನಾಯಕಿ ದಿವ್ಯಾ ಹಾಗರಗಿ ಸೇರಿದಂತೆ ಬಿಜೆಪಿ, ಎಬಿವಿಪಿಯ ಹಲವಾರು ನಾಯಕರು ಬಂಧನಕ್ಕೊಳಪಟ್ಟಿದ್ದು ಹಾಗೂ ಹಲವಾರು ಪೋಲಿಸ್ ಅಧಿಕಾರಿಗಳು ಕೂಡ ಅಮಾನತ್ತುಗೊಂಡಿದ್ದಾರೆ. ಈ ಹಗರಣದ ಕುರಿತು ಈಗಾಗಲೇ ಸಿಐಡಿ ತನಿಖೆ ನಡೆಸುತ್ತಿದ್ದು, ತನಿಖೆ ಪಾರದರ್ಶಕವಾಗಿರಲು ಸರ್ಕಾರವನ್ನು ಶೀಘ್ರ ವಜಾಗೊಳಿಸಬೇಕೆಂದು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಕರ್ನಾಟಕ ರಾಜ್ಯಾಧ್ಯಕ್ಷ ಅಥಾವುಲ್ಲ ಪುಂಜಾಲಟ್ಟೆ ಆಗ್ರಹಿಸಿದ್ದಾರೆ.

- Advertisement -

ದೊಡ್ಡ ಮಟ್ಟದ ಸಂಚನ್ನು ರೂಪಿಸಿ, ಆಧುನಿಕ ಉಪಕರಣಗಳನ್ನು ಬಳಸಿಕೊಂಡು ಮೇಲ್ವಿಚಾರಕನಿಂದ ಹಿಡಿದು ಎಲ್ಲಾ ಹಂತದ ಅಧಿಕಾರಿಗಳು ಈ ಹಗರಣದಲ್ಲಿ ಭಾಗಿಯಾಗಿದ್ದನ್ನು ನೋಡುವಾಗ ಇದರ ಹಿಂದೆ ರಾಜಕೀಯ ಶಕ್ತಿ ಅಡಗಿದೆ ಎಂಬುದರಲ್ಲಿ ಸಂಶಯವೇ ಇಲ್ಲ. ಇಷ್ಟೊಂದು ದೊಡ್ಡ ಮಟ್ಟದ ಹಗರಣದಲ್ಲಿ ಗೃಹ ಸಚಿವರ ಪಾತ್ರ ಹಾಗೂ ವಿವಿಧ ಪೋಲಿಸ್ ಉನ್ನತ ಅಧಿಕಾರಿಗಳ ಬಗ್ಗೆಯೂ ಪಾರದರ್ಶಕವಾಗಿ ತನಿಖೆಯಾಗಬೇಕಿದೆ. ಆದ್ದರಿಂದ ಈ ಹಗರಣದ ಕುರಿತು ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

ನ್ಯಾಯಾಂಗ ತನಿಖೆಯ ಮೂಲಕ ಪಾರದರ್ಶಕ ತನಿಖೆ ನಡೆಸಿ ಇದರ ಹಿಂದಿರುವ ಕಾಣದ ಕೈಗಳನ್ನು ಬಯಲಿಗೆ ತರಬೇಕು ಹಾಗೂ ಭ್ರಷ್ಟ ಬಿಜೆಪಿ ಸರ್ಕಾರವನ್ನು ತಕ್ಷಣ ವಜಾಗೊಳಿಸಬೇಕೆಂದು ಅಥಾವುಲ್ಲ ಪುಂಜಾಲಟ್ಟೆ ಹೇಳಿಕೆಯಲ್ಲಿ ಆಗ್ರಹಿಸಿದ್ದಾರೆ.

Join Whatsapp