ಪಿಎಸ್ ಐ ನೇಮಕಾತಿ ಅಕ್ರಮ: ಪ್ರಾಮಾಣಿಕ ಅಭ್ಯರ್ಥಿಗಳಿಗೆ ಅನ್ಯಾಯ ಆಗಬಾರದು – ಎಚ್.ಡಿ.ಕುಮಾರಸ್ವಾಮಿ

Prasthutha|

ಬೆಂಗಳೂರು: ಪಿಎಸ್ಐ ನೇಮಕಾತಿ ಪರೀಕ್ಷೆಯಲ್ಲಿ ಪ್ರಾಮಾಣಿಕವಾಗಿ ತೇರ್ಗಡೆಯಾಗಿರುವ ಅಭ್ಯರ್ಥಿಗಳಿಗೆ ಅನ್ಯಾಯ ಆಗಬಾರದು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹೆಚ್.ಡಿ.ಕುಮಾರಸ್ವಾಮಿ ಹೇಳಿದರು.

- Advertisement -

ವಿಧಾನಸಭೆಯಲ್ಲಿಂದು ಪಿಎಸ್ ಐ ನೇಮಕಾತಿ ಹಗರಣದ ಬಗ್ಗೆ ನಡೆದ ಚರ್ಚೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಪರೀಕ್ಷೆಯಲ್ಲಿ ಅಕ್ರಮ ಮಾಡಿದವರು ಈಗಾಗಲೇ ಬಂಧನಕ್ಕೆ ಒಳಗಾಗಿದ್ದಾರೆ. ಎಡಿಜಿಪಿ ಮಟ್ಟದ ಅಧಿಕಾರಿಯೊಬ್ಬರು ಸೇರಿದಂತೆ ಕೆಲವು ಪೊಲೀಸ್ ಅಧಿಕಾರಿಗಳು, ತಪ್ಪೆಸಗಿದ ಅಭ್ಯರ್ಥಿಗಳನ್ನು ಕೂಡ ಪೊಲೀಸರು ಬಂಧಿಸಿದ್ದಾರೆ. ಆದರೆ, ಪ್ರಾಮಾಣಿಕವಾಗಿ ಪರೀಕ್ಷೆ ಬರೆದವರು ಅನ್ಯಾಯಕ್ಕೆ ತುತ್ತಾಗುತ್ತಿದ್ದಾರೆ ಎಂದು ಹೇಳಿದರು.

- Advertisement -

ಈ ಹಗರಣದ ತನಿಖೆ ಗಂಭೀರ ಹಂತ ತಲುಪಿದೆ ಅಂತ ನನ್ನ ಭಾವನೆ. ಈವರೆಗೆ 26 ಪೊಲೀಸರನ್ನು ಬಂಧನ ಮಾಡಲಾಗಿದೆ. ಬಹುತೇಕ ಪ್ರಕರಣಗಳಲ್ಲಿ ಆರೋಪಿತರು ಜಾಮೀನು ತೆಗೆದುಕೊಂಡು ಹೊರ ಬರುವುದನ್ನು ನೋಡಿದ್ದೇವೆ. ಆದರೆ, ಈ ಪ್ರಕರಣದಲ್ಲಿ ಆ ರೀತಿ ಆಗಿಲ್ಲ. ಅಂದರೆ, ತನಿಖೆ ಗಂಭೀರವಾಗಿ ನಡೆಯುತ್ತಿದೆ ಎಂದು ಅರ್ಥ ಎಂದು ಕುಮಾರಸ್ವಾಮಿ ಅವರು ಹೇಳಿದರು.

ಮುಂದಿನ ದಿನಗಳಲ್ಲಿ ಸರ್ಕಾರ ಯಾವುದೇ ನೇಮಕಾತಿ ಮಾಡಲಿ, ಪಿ ಎಸ್ ಐ ಹಗರಣದ ತನಿಖೆ ಮತ್ತು ಅಪರಾಧಿಗಳಿಗೆ ಶಿಕ್ಷೆ ಆಗುವುದು ಒಂದು ಪಾಠವಾಗಬೇಕು ಎಂದು ಮಾಜಿ ಮುಖ್ಯಮಂತ್ರಿಗಳು ಸಲಹೆ ಮಾಡಿದರು.

ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದ ಕಾಲದಲ್ಲಿ ಕೂಡ ನೇಮಕಾತಿ ನಡೆಯಿತು. 2011ರಲ್ಲಿ ಕೆಪಿಎಸ್ಸಿ ನೇಮಕಾತಿ ನಡೆಯುವಾಗ ಯುವತಿ ಒಬ್ಬರು ಪತ್ರ ಬರೆದರು ಎನ್ನುವ ಕಾರಣಕ್ಕೆ ಅಂದು 374 ಕೆಪಿಎಸ್ಸಿ ನೇಮಕಾತಿ ಪ್ರಕ್ರಿಯೆಯನ್ನು ಕೈಬಿಡಲಾಯಿತು. ಪ್ರಾಮಾಣಿಕ ಅಭ್ಯರ್ಥಿಗಳಿಗೆ ಅನ್ಯಾಯ ಆಗಿತ್ತು. ಆದರೆ, ಈ ಸರಕಾರ ಬಂದ ಮೇಲೆ ಆ ಸಮಸ್ಯೆಯನ್ನು ಬಗೆಹರಿಸುವ ಮೂಲಕ ಆಗಿದ್ದ ಅನ್ಯಾಯವನ್ನು ಸರಿ ಮಾಡಿತು. ಅದಕ್ಕಾಗಿ ನಾನು ಸರಕಾರಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ಆದರೆ ಕೆಪಿಎಸ್ಸಿಯನ್ನು ಸ್ವಚ್ಚ ಮಾಡುತ್ತೇವೆ ಎಂದರು, ಆದರೆ ಆ ಕೆಲಸ ಆಗಿದೆಯಾ? ಎಂದರು ಅವರು.

ಈಗ ಪಿಎಸ್ಐ ನೇಮಕಾತಿ ಪ್ರಕ್ರಿಯೆಯಲ್ಲಿ ಒಬ್ಬ ಅಭ್ಯರ್ಥಿ ಐಎಎಸ್ ಗೆ ಆಯ್ಕೆ ಆಗಿದ್ದಾರೆ. ವಿಕಲಚೇತನ ಯುವಕನೊಬ್ಬ ದೊಡ್ಡ ಸಾಧನೆ ಮಾಡಿದ್ದಾನೆ. ಅನೇಕರು ಬೇರೆ ಬೇರೆ ಹುದ್ದೆಗೆ ನೇಮಕ ಆಗಿದ್ದಾರೆ. ಅಲ್ಲಿಗೆ ಬಂಧನಕ್ಕೆ ಒಳಗಾಗಿರುವ ಆರೋಪಿತರನ್ನು ಹೊರತುಪಡಿಸಿ ಅನೇಕ ಪ್ರತಿಭಾನ್ವಿತರು ಈ ಪರೀಕ್ಷೆ ಬರೆದು ತೇರ್ಗಡೆ ಆಗಿದ್ದಾರೆ. ಅವರಿಗೆ ಏಕೆ ಅನ್ಯಾಯ ಆಗಬೇಕು? ಎಂದು ಮಾಜಿ ಮುಖ್ಯಮಂತ್ರಿಗಳು ಸರಕಾರಕ್ಕೆ ಪ್ರಶ್ನೆ ಮಾಡಿದರು

ಒಂದೆಡೆ ಅನ್ಯಾಯವನ್ನು ಸರಿ ಮಾಡಬೇಕು. ಇನ್ನೊಂದೆಡೆ ತನಿಖೆಯು ಹಾದಿ ತಪ್ಪಬಾರದು. ಈಗ 545 ಅಭ್ಯರ್ಥಿಗಳ ನೇಮಕಾತಿ ರದ್ದು ಮಾಡಲು ನಿರ್ಧರಿಸಿದೆ ಸರಕಾರ. ಇಂಥ ಲೋಪ ಮತ್ತೆಂದೂ ಆಗದಂತೆ ಎಚ್ಚರಿಕೆ ವಹಿಸಬೇಕು.

ಸರ್ಕಾರದ ಹಾಗೂ ರಾಜಕೀಯ ವ್ಯವಸ್ಥೆ ಹಾಗೂ ಪ್ರಜಾಪಭುತ್ವ ವ್ಯವಸ್ಥೆಯಲ್ಲಿ ಜನರಿಗೆ ನಂಬಿಕೆ ಬರುವ ರೀತಿಯಲ್ಲಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಸಂದೇಶ ನೀಡಬೇಕು. ಇದಕ್ಕೆ ತಾರ್ಕಿಕ ಅಂತ್ಯ ಕಾಣಿಸಬೇಕು. ಯಾರೆಲ್ಲ ಘಟನೆ ಹಿಂದಿದ್ದಾರೆ ಅವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು. ಆಗ ಮಾತ್ರ ಜನ ನಮ್ಮನ್ನ ನಂಬುತ್ತಾರೆ. ಈ ವಿಷಯದಲ್ಲಿ ನಾನು ಮುಖ್ಯಮಂತ್ರಿ, ವಿಪಕ್ಷ ನಾಯಕರಿಗೆ ಮನವಿ ಮಾಡುತ್ತೇನೆ ಎಂದರು ಕುಮಾರಸ್ವಾಮಿ.

ಪೊಲೀಸ್ ಅಧಿಕಾರಿಗಳು ಸೇರಿ ರಾಜಕಾರಣಿಗಳ ವಿರುದ್ಧವೂ ತನಿಖೆ ನಡೆಯಲಿ. ಈಗ ಶಾಸಕ ದಡೆಸುಗೂರು ಹೆಸರು ಕೇಳಿಬಂದಿದೆ. ಅವರ ಮೇಲೆ ಆರೋಪ ಇದ್ದರೆ ತನಿಖೆ ಆಗಲಿ. ಈ ಬಗ್ಗೆ ವಿಪಕ್ಷ ನಾಯಕರ ಹೇಳಿಕೆಗೆ ನನ್ನ ಸಹಮತ ಇದೆ ಎಂದು ಕುಮಾರಸ್ವಾಮಿ ಅವರು ಹೇಳಿದರು.

Join Whatsapp