ಭೂಸ್ವಾಧೀನ ಪ್ರಕ್ರಿಯೆ ವಿರೋಧಿಸಿ ಸ್ವಾತಂತ್ರ್ಯೋ ತ್ಸವದಂದೇ ಸಚಿವ ಸುಧಾಕರ್ ಕಾರ್ಯಕ್ರಮಕ್ಕೆ ಮುತ್ತಿಗೆ ಹಾಕಿದ ರೈತರು

Prasthutha|

ಬೆಂಗಳೂರು: ಸ್ವಾತಂತ್ರ್ಯೋ ತ್ಸವದ ದಿನದಂದೇ ತಿರಂಗ ಹಿಡಿದು ರೈತರು ಪ್ರತಿಭಟನೆ ನಡೆಸಿದ ಘಟನೆ ದೇವನಹಳ್ಳಿಯಲ್ಲಿ ನಡೆದಿದೆ.

- Advertisement -

ದೇವನಹಳ್ಳಿಯ ಜೂನಿಯರ್ ಕಾಲೇಜು ಮೈದಾನದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತದ ವತಿಯಿಂದ ಸ್ವಾತಂತ್ರ್ಯ ದಿನಾಚರಣೆಯನ್ನು ಮಾಡಲಾಗಿತ್ತು. ಈ ವೇಳೆ ಸ್ವಾತಂತ್ರ್ಯ ದಿನಾಚರಣೆಯ ವೇದಿಕೆ ಬಳಿ ಪ್ರತಿಭಟನೆ ಮಾಡಲು ಆಗಮಿಸಿದ ರೈತರಿಗೆ ಜೂನಿಯರ್ ಕಾಲೇಜು ಆವರಣದ ಗೇಟ್ ಬಳಿಯೇ ಪೊಲೀಸರು ತಡೆ ಒಡ್ಡಿದರು.

ಪೊಲೀಸರ ನಾಕಾ ಬಂಧಿಯನ್ನು ಭೇದಿಸಿ ಕೆಲ ರೈತರು ವೇದಿಕೆ ಬಳಿ ಮುತ್ತಿಗೆ ಹಾಕಲು ಮುಂದಾಗುತ್ತಿದ್ದಂತೆ ಪೊಲೀಸರು ರೈತರನ್ನು ವಶಕ್ಕೆ ಪಡೆದರು. ಈ ವೇಳೆ ರೈತರು ತೀವ್ರತರವಾದ ಪ್ರತಿರೋಧ ತೋರಿದ್ದು, ನೆಲದ ಮೇಲೆ ಮಲಗಿ ಪ್ರತಿಭಟಿಸಿದರು. ರೈತರ ತೀವ್ರ ವಿರೋಧದ ನಡುವೆಯೂ ಪೊಲೀಸರು ಪ್ರತಿಭಟನಾ ನಿರತ ರೈತರನ್ನು ವಶಕ್ಕೆ ಪಡೆದು ಬಸ್ ನೊಳಗೆ ಕೂಡಿ ಹಾಕಿದರು.

- Advertisement -

ಗ್ರಾಮಾಂತರ ಜಿಲ್ಲೆಯ ಚನ್ನರಾಯಪಟ್ಟಣ ಹೋಬಳಿ ವ್ಯಾಪ್ತಿಯಲ್ಲಿ ಕೆಐಎಡಿಬಿ ವತಿಯಿಂದ ಭೂಸ್ವಾಧೀನ ಪ್ರಕ್ರಿಯೆ ವಿರೋಧಿಸಿ ರೈತರು ಅನಿರ್ದಿಷ್ಟಾವಧಿ ಧರಣಿ ನಡೆಸುತ್ತಿದ್ದಾರೆ. ಹೀಗಾಗಿ ಇಂದು ಸಹ ಸ್ವಾತಂತ್ರ್ಯರ ದಿನಾಚರಣೆಯ ಅಂಗವಾಗಿ ತಿರಂಗ ಹಿಡಿದು ಪ್ರತಿಭಟನಾ ಮೆರವಣಿಗೆ ನಡೆಸುವ ಮುಖಾಂತರ ಭೂಸ್ವಾಧೀನ ಪ್ರಕ್ರಿಯೆಗೆ ತಮ್ಮ ವಿರೋಧ ವ್ಯಕ್ತಪಡಿಸಿ ಸ್ವಾತಂತ್ರ್ಯ ದಿನಾಚರಣೆಯ ಕಾರ್ಯಕ್ರಮದ ವೇದಿಕೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲು ರೈತರು ಮುಂದಾಗಿದ್ದರು.

ಆದರೆ ಇದಕ್ಕೆ ಅವಕಾಶ ಕೊಡದ ದೇವನಹಳ್ಳಿ ಪೊಲೀಸರು ಪ್ರತಿಭಟನಾ ನಿರತ ರೈತರನ್ನು ವಶಕ್ಕೆ ಪಡೆದಿದ್ದಾರೆ. 75 ನೇ ಸ್ವಾತಂತ್ರ್ಯೋ ತ್ಸವದ ಅಂಗವಾಗಿ ದೇವನಹಳ್ಳಿ ಪಟ್ಟಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಖಾತೆ ಸಚಿವ ಡಾ.ಕೆ ಸುಧಾಕರ್ ಧ್ವಜಾರೋಹಣ ನೆರವೇರಿಸಿದರು

Join Whatsapp